
ಒಡಿಶಾ ಮೂಲದ ಕೆಐಐಟಿ ವಿಶ್ವವಿದ್ಯಾಲಯದಿಂದ ಮೂವರು ಕ್ರೀಡಾಪಟುಗಳು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸ್ಪ್ರಿಂಟರ್ ದ್ಯುತಿ ಚಾಂದ್, ಫೆನ್ಸರ್ ಭವಾನಿ ದೇವಿ ಹಾಗೂ ಜಾವೆಲಿನ್ ಥ್ರೋವರ್ ಶಿವ್ಪಾಲ್ ಸಿಂಗ್ ಈ ವಿಶ್ವವಿದ್ಯಾಲಯದಿಂದ ಒಲಿಂಪಿಕ್ಸ್ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಾಗಿದ್ದಾರೆ.
ಈ ಮೂಲಕ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮೂವರು ಅಥ್ಲೀಟ್ಗಳು ಓರ್ವ ಅಧಿಕಾರಿ ಹಾಗೂ ಓರ್ವ ಡಾಕ್ಟರ್ಅನ್ನು ಟೋಕಿಯೋ ಒಲಿಂಪಿಕ್ಸ್ಗೆ ಕಳುಹಿಸುತ್ತಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ. ಇನ್ನು ಈ ಮೂವರು ಅಥ್ಲೀಟ್ಗಳು ಅಲ್ಲದೆ ಈ ಮಹತ್ವದ ಕ್ರೀಡಾಕೂಟಕ್ಕೆ ಒಡಿಶಾದಿಂದ ಮೂವರು ಹಾಕಿ ಆಟಗಾರರು ಕೂಡ ಪಾಳ್ಗೊಳ್ಳಲಿದ್ದಾರೆ.
ಈ ಬಗ್ಗೆ ದ್ಯುತಿ ಚಾಂದ್ ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. 100 ಮೀಟರ್ ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ಈ ಬಾರಿಯ ಕ್ರೀಡಾಕೂಟಕ್ಕಾಗಿ ಸಾಕಷ್ಟು ಕಠಿಣ ಅಭ್ಯಾಸವನ್ನು ನಡೆಸಿದ್ದೇನೆ. ಇತ್ತೀಚೆಗಷ್ಟೇ ನಾನು 11.7 ಸೆಕೆಂಡ್ಗಳಲ್ಲಿ ಗುರಿತಲುಪಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದೇನೆ"
ಸೆಮಿ ಫೈನಲ್ಗೆ ಅರ್ಹತೆಯನ್ನು ಸಂಪಾದಿಸುವ ವಿಶ್ವಾಸವನ್ನು ಹೊಂದಿದ್ದೇನೆ ಹಾಗೂ ದೇಶಕ್ಕೆ ಪದಕವನ್ನು ಗೆಲ್ಲಿಸುವ ಮೂಲಕ ಹೆಮ್ಮೆ ಪಡುವಂತೆ ಮಾಡುವ ವಿಶ್ವಾಸವನ್ನು ಹೊಂದಿದ್ದೇನೆ. ಒಡಿಶಾ ಸರ್ಕಾರ ಹಾಗೂ ಕೆಐಐಟಿಯ ಅಚ್ಯುತ ಸಮಂತಾ ಅವರ ಸತತವಾದ ಬೆಂಬಲಕ್ಕೆ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ" ಎಂದು ದ್ಯುತಿ ಚಾಂದ್ ಹೇಳಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಒಡಿಶಾ ಸರ್ಕಾರ ಹಾಗೂ ಕೆಐಐಟಿ ಜೊತೆಯಾಗಿ ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಕಾರ್ಯನಿರ್ವಹಿಸುತ್ತಿವೆ.