ಬೆಂಗಳೂರು, ಸೆಪ್ಟೆಂಬರ್ 12 : ಬಾಗಲಕೋಟೆ ಜಿಲ್ಲೆಯ ವೆಂಕಣ್ಣ ಕೆಂಗಲಗುತ್ತಿ ಏಷಿಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ನವದೆಹಲಿಯಲ್ಲಿ ಏಷಿಯನ್ ಕಪ್ ಸೈಕ್ಲಿಂಗ್ ಕ್ರೀಡಾಕೂಟ ನಡೆಯಿತು.
ಬಾಗಲಕೋಟೆಯ ತುಳಸಿಗೇರಿ ಗ್ರಾಮದ ವೆಂಕಣ್ಣ ಕೆಂಗಲಗುತ್ತಿ ಏಷಿಯನ್ ಕ್ರೀಡಾಕೂಟದಲ್ಲಿ ಜೂನಿಯರ್ ವಿಭಾಗದ 3 ಕಿ.ಮೀ ವೈಯಕ್ತಿಕ ಶೂಟ್ನಲ್ಲಿ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 10 ಕಿ.ಮೀ ಸ್ಕ್ರ್ಯಾಚ್ ರೇಸ್ನಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ವೆಂಕಣ್ಣ ಕೆಂಗಲಗುತ್ತಿ ತುಳಸಿಗೇರಿ ಗ್ರಾಮದ ಶಿವಪ್ಪ ಮತ್ತು ಬಾಗವ್ವ ದಂಪತಿಗಳ ಪುತ್ರ. ತಂದೆ ಶಿವಪ್ಪ ಕೃಷಿಕರು, ವೆಂಕಣ್ಣ 1 ರಿಂದ 4ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಕುವೆಂಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 9ನೇ ತರಗತಿವರೆಗೆ ಬಾಗಲಕೋಟೆಯ ಸರ್ಕರಿ ಕಿರಿಯ ಪ್ರೌಢಶಾಲೆಯಲ್ಲಿ ಹಾಗೂ ಎಸ್.ಎಸ್.ಎಲ್.ಸಿಯನ್ನು ಬೆಳಗಾವಿ ಜಿಲ್ಲೆಯ ಕುಲಗೋಡದಲ್ಲಿ ಮುಗಿಸಿದ್ದಾರೆ.
ಜಮಖಂಡಿಯ ಬಿ.ಎಲ್.ಡಿ ಸಂಸ್ಥೆಯಲ್ಲಿ ಪಿಯಿಸಿ ಮುಗಿಸಿದ ಅವರು ಕ್ರೀಡಾ ಶಾಲೆಗೆ 2013-14ರಲ್ಲಿ ಆಯ್ಕೆಗೊಂಡರು. 2016 ವರೆಗೆ ಸೈಕ್ಲಿಂಗ್ ತರಬೇತಿದಾರರಾದ ಅನಿತಾ ನಿಂಬರಗಿ ಅವರಿಂದ ತರಬೇತಿ ಪಡೆದಿದ್ದಾರೆ.
2017ರಲ್ಲಿ ದೆಹಲಿಯ ಕೇಂದ್ರ ಸರ್ಕಾರದ ಸೈಕ್ಲಿಂಗ್ ಕ್ರೀಡಾ ನಿಲಯಕ್ಕೆ ಆಯ್ಕೆಯಾಗಿ ಅಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ವೆಂಕಣ್ಣ ಕೆಂಗಲಗುತ್ತಿ ಅವರು ರಾಜ್ಯ ಮಟ್ಟದಲ್ಲಿ 6 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ 2013ರಿಂದ ಇದುವರೆಗೂ 10 ಚಿನ್ನದ ಪದಕ, 6 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಮೂರು ಅಂತರರಾಷ್ಟ್ರೀಯ ಏಷಿಯನ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 2018ರಲ್ಲಿ ಮಲೇಷಿಯಾದಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾರೆ.
ಈ ವರ್ಷ ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತದ ವತಿಯಿಂದ ಒಳ್ಳೆಯ ಕ್ರೀಡಾಪಟು ಎಂದು 2018ರಲ್ಲಿ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಷಿಯನ್ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದ ವೆಂಕಣ್ಣ ಕೆಂಗಲಗುತ್ತಿ ಅವರನ್ನು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಭಿನಂದಿಸಿದೆ.