
ಭಾರತದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಅವರು ಡಿಸೆಂಬರ್ 30 (ಶುಕ್ರವಾರ) ಬೆಳಿಗ್ಗೆ ರಿಷಭ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಿಷಭ್ ಪಂತ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅವರ ಅಪಘಾತದ ಫೋಟೋಗಳು ವೈರಲ್ ಆದಾಗ ದೊಡ್ಡ ಆತಂಕ ಸೃಷ್ಟಿಯಾಗಿತ್ತು. ಮೈತುಂಬಾ ಸುಟ್ಟ ಗಾಯಗಳು, ಹಣೆಯ ಮೇಲೆ ರಕ್ತ ಸೋರುವಿಕೆ ನೋಡಿ ಕ್ರೀಡಾಭಿಮಾನಿಗಳು ಗಾಬರಿಗೊಂಡಿದ್ದರು.
ರೂರ್ಕಿ ಸಮೀಪ ರಸ್ತೆ ಅಪಘಾತದ ನಂತರ ಹೊರಬಂದ ಫೋಟೋಗಳಿಂದ ರಿಷಭ್ ಪಂತ್ ತಲೆ ಮತ್ತು ಬೆನ್ನಿನ ಮೇಲೆ ಭಾರಿ ಗಾಯಗಳಾಗಿವೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಮತ್ತು ಕಾರು ಅಂತಿಮವಾಗಿ ಬೆಂಕಿ ಹೊತ್ತಿಕೊಂಡು ಉರಿದು ಸಂಪೂರ್ಣ ಹಾಳಾಗಿದೆ.

ರಿಷಭ್ ಪಂತ್ ಅವರ ಅಪಘಾತ ಸಂಪೂರ್ಣ ಆಘಾತಕಾರಿ ಮತ್ತು ದುಃಖಕರವಾಗಿದೆ. ಆದರೆ ಎನ್ಸಿಎ ಮುಖ್ಯಸ್ಥ ಮತ್ತು ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರಿಂದ ಒಳ್ಳೆಯ ಸುದ್ದಿ ಬಂದಿದ್ದು, ಪಂತ್ ಅಪಾಯದಿಂದ ಪಾರಾಗಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ರಿಷಭ್ ಪಂತ್ ಕುರಿತು ಆರೋಗ್ಯ ಅಪ್ಡೇಟ್ ನೀಡುತ್ತಾ, ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ, "ರಿಷಭ್ ಪಂತ್ಗಾಗಿ ಪ್ರಾರ್ಥಿಸುತ್ತಿದ್ದೇನೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ರಿಷಭ್ ಪಂತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಬೇಗ ಗುಣವಾಗಿ ಚಾಂಪಿಯನ್," ಎಂದು ಬರೆದಿದ್ದಾರೆ.
ಹರಿದ್ವಾರ ಜಿಲ್ಲೆಯಲ್ಲಿ ರಿಷಭ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರು ಪ್ರಸ್ತುತ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿದೆ. ರೂರ್ಕಿ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ಡೆಹ್ರಾಡೂನ್ಗೆ ಸ್ಥಳಾಂತರಿಸಲಾಗಿದೆ.
ಗಾಯಗೊಂಡ ಕ್ರಿಕೆಟಿಗನ ಚಿಕಿತ್ಸೆಗೆ ಸಾಧ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯವಿದ್ದರೆ ಏರ್ ಆಂಬ್ಯುಲೆನ್ಸ್ ಒದಗಿಸುವಂತೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ದುರದೃಷ್ಟಕರ ಅಪಘಾತದ ನಂತರ ಪ್ರಪಂಚದ ಎಲ್ಲಾ ಭಾಗಗಳಿಂದ ರಿಷಭ್ ಪಂತ್ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆಗಳು ಬರುತ್ತಿವೆ. ಆಶಾದಾಯಕವಾಗಿ, ಪಂತ್ ಶೀಘ್ರದಲ್ಲೇ ಮೈದಾನಕ್ಕೆ ಮರಳಲಿ ಎಂಬುದು ಎಲ್ಲರ ಆಶಯ.
ರಿಷಭ್ ಪಂತ್ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಇದೀಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಭೀಕರ ಕಾರು ಅಪಘಾತದ ನಂತರ ಪಂತ್ ಆರೋಗ್ಯದ ಬಗ್ಗೆ ಅಪ್ಡೇಟ್ ಅನ್ನು ನೀಡಿದ್ದಾರೆ.
ಜಯ್ ಶಾ ಅವರು ಟ್ವೀಟ್ ಮಾಡಿ, ರಿಷಭ್ ಪಂತ್ ಪ್ರಸ್ತುತ ಸ್ಥಿರವಾಗಿದ್ದಾರೆ ಮತ್ತು ಸ್ಕ್ಯಾನ್ಗೆ ಒಳಗಾಗುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆಟಗಾರನ ಕುಟುಂಬ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತುಕತೆ ನಡೆಸಿರುವುದಾಗಿ ಜಯ್ ಶಾ ಬಹಿರಂಗಪಡಿಸಿದ್ದಾರೆ.
ಜಯ್ ಶಾ ಟ್ವೀಟ್
"ರಿಷಭ್ ಪಂತ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವನೊಂದಿಗೆ ಇವೆ. ನಾನು ಅವರ ಕುಟುಂಬ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿದ್ದೇನೆ. ರಿಷಭ್ ಪಂತ್ ಸ್ಥಿರವಾಗಿದ್ದಾರೆ ಮತ್ತು ಸ್ಕ್ಯಾನ್ಗೆ ಒಳಗಾಗುತ್ತಿದ್ದಾರೆ. ನಾವು ಅವರ ಪ್ರಗತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಮತ್ತು ಅವರಿಗೆ ಎಲ್ಲ ಅಗತ್ಯ ಬೆಂಬಲ ಒದಗಿಸುತ್ತೇವೆ," ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.