
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲಿನ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ, ರಾಜೀನಾಮೆ ನೀಡಲು ಕ್ರೀಡಾ ಸಚಿವಾಲಯ ಗುರುವಾರ ಅಂತಿಮ ಸೂಚನೆ ನೀಡಿದ್ದು, ಭೂಷಣ್ ಶರಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ 24 ಗಂಟೆಗಳ ಗಡುವು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ನಿವಾಸದಲ್ಲಿ ಪ್ರತಿಭಟನಾ ನಿರತ ಭಾರತೀಯ ಕುಸ್ತಿಪಟುಗಳನ್ನು ಭೇಟಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಗುರುವಾರ ಕ್ರೀಡಾ ಸಚಿವರನ್ನು ಭೇಟಿ ಮಾಡಿದಾಗ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಇತರರಿದ್ದರು.
ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ರವಿಕುಮಾರ್ ದಹಿಯಾ ಸೇರಿದಂತೆ ಹಿರಿಯ ಕುಸ್ತಿಪಟುಗಳು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಳೆದ ಎರಡು ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ.

ಹಿರಿಯ ಆಡಳಿತಾಧಿಕಾರಿ, ಕೆಲವು ತರಬೇತುದಾರರೊಂದಿಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲಕ್ನೋದ ರಾಷ್ಟ್ರೀಯ ಶಿಬಿರಗಳಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದರು.
ನವದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಮತ್ತು ರಾಷ್ಟ್ರೀಯ ಕುಸ್ತಿ ಸಂಸ್ಥೆಯನ್ನು ವಿಸರ್ಜಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಯಾವುದೇ ರಾಜಕೀಯವಿಲ್ಲ ಮತ್ತು ಭ್ರಷ್ಟ ಮತ್ತು ನಿಂದನೀಯ ಆಡಳಿತಗಾರರಿಂದ ಕುಸ್ತಿಯನ್ನು ಉಳಿಸಲು ಬೀದಿಗಿಳಿದಿದ್ದೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟ ಮತ್ತು ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ WFI ನಿಂದ ಕೇಂದ್ರ ಕ್ರೀಡಾ ಸಚಿವಾಲಯವು ವಿವರಣೆಯನ್ನು ಬುಧವಾರ ಕೇಳಿದೆ.

ಜನವರಿ 22ರಂದು ನಡೆಯುವ ತುರ್ತು ಜನರಲ್ ಕೌನ್ಸಿಲ್ ಸಭೆಯಲ್ಲಿ ಬ್ರಿಜ್ ಭೂಷಣ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ವರದಿಯಾಗಿದೆ.
ಇದೇ ವೇಳೆ, ಕ್ರಿಮಿನಲ್ ಎಂಬ ಟ್ಯಾಗ್ನೊಂದಿಗೆ ರಾಜೀನಾಮೆ ನೀಡುವುದಿಲ್ಲ ಎಂದು ಬ್ರಿಜ್ ಭೂಷಣ್ ಸ್ಪಷ್ಟಪಡಿಸಿದ್ದಾರೆ. "ಅವರ ಬಳಿ ನನ್ನ ವಿರುದ್ಧ ಯಾವುದಾದರೂ ಪುರಾವೆ ಇದ್ದರೆ ಅದನ್ನು ಸಾರ್ವಜನಿಕಗೊಳಿಸಿ ಎಂದು ನಾನು ಮೊದಲ ದಿನವೇ ಹೇಳಿದ್ದೆ. ನನ್ನ ಮೇಲಿನ ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ ನಾನು ಗಲ್ಲಿಗೇರಿಸಲು ಸಿದ್ಧನಿದ್ದೇ," ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಗುರುವಾರ, ಜನವರಿ 19ರಂದು ತಿಳಿಸಿದರು.
"ನಾನು 10 ವರ್ಷಗಳಿಂದ WFI ಅಧ್ಯಕ್ಷನಾಗಿದ್ದೇನೆ, ನಾನು 2008ರಿಂದ ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಎಫ್ಐಆರ್ ಎದುರಿಸಲು ಸಿದ್ಧನಿದ್ದೇನೆ, ಸಿಬಿಐ ಅನ್ನು ಎದುರಿಸಲು ಸಿದ್ಧನಿದ್ದೇನೆ. ಭಾರತದ ಅತ್ಯುನ್ನತ ಯಾವುದೇ ಕಾನೂನು ಪ್ರಾಧಿಕಾರವನ್ನು ಎದುರಿಸಲು ನಾನು ಸಿದ್ಧ," ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಸವಾಲು ಹಾಕಿದ್ದಾರೆ.