
ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಚಳಿಗಾಲದ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ನಡೆಯಲಿದ್ದು ಫೆಬ್ರವರಿ 20ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತ ರಾಜತಾಂತ್ರಿಕ ಬಹಿಷ್ಕಾರ ಹಾಕಲು ಅಂತಿಮ ಕ್ಷಣದಲ್ಲಿ ನಿರ್ಧರಿಸಿದೆ. ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಚೀನಾದಲ್ಲಿ ಆಯೋಜನೆಯಾಗುತ್ತಿರುವ ಈ ಚಳಿಗಾಲದ ಒಲಿಂಪಿಕ್ಸ್ನಿಂದ ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ರಾಜತಾಂತ್ರಿಕ ಬಹಿಷ್ಕಾರವನ್ನು ಈ ಮೊದಲೇ ಹಾಕಿತ್ತು. ಆದರೆ ಭಾರತ ಉನ್ನತ ಮಟ್ಟದ ರಾಜತಾಂತ್ರಿಕ ಪ್ರತಿನಿಧಿಗಳನ್ನು ಕಳುಹಿಸದಿರಲು ನಿರ್ಧರಿಸಿದ್ದರೂ ರಾಜತಾಂತ್ರಿಕ ಬಹಿಷ್ಕಾರದ ಘೋಷಣೆ ಮಾಡಿರಲಿಲ್ಲ. ಆದರೆ ಚೀನಾ ಈ ಹಿಂದೆ ಗುಲ್ವಾನ್ ವ್ಯಾಲಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೈನಿಕನೊರ್ವನಿಗೆ ಸಾಂಪ್ರದಾಯಿಕ ಒಲಿಂಪಿಕ್ಸ್ ಜ್ಯೋತಿ ರಿಲೇಯಲ್ಲಿ ಅವಕಾಶ ನೀಡಿತ್ತು. ಚೀನಾದ ಈ ನಡೆಯಿಂದಾಗಿ ಭಾರತ ಈಗ ರಾಜತಾಂತ್ರಿಕ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿದೆ.
ಇನ್ನು ಭಾರತದ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಚೀನಾ ಒಲಿಂಪಿಕ್ಸ್ ಅನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿರುವುದು ವಿಷಾದನೀಯ. ಹೀಗಾಗಿ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಹಾಗು ಸಮಾರೋಪ ಸಮಾರಂಭದಲ್ಲಿ ಭಾರತೀಯ ರಾಯಭಾರಿ ಭಾಗವಹಿಸುವುದಿಲ್ಲ" ಎಂದಿದ್ದಾರೆ.
2020 ರ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಪಡೆಗಳ ಮೇಲೆ ಚೀನಾ ಸೈನಿಕರು ದಾಳಿ ನಡೆಸಲು ಪ್ರಯತ್ನಿಸಿದಾಗ ಕಿ ಫಾಬಾವೊ ಎಂಬ ಸೈನಿಕನನ್ನು ಭಾರತೀಯ ಪಡೆಗಳು ಸೆರೆಹಿಡಿದಿತ್ತು. ಅದೇ ಕಿ ಫಾಬಾವೊ ಒಲಿಂಪಿಕ್ಸ್ ಜ್ಯೋತಿ ರಿಲೇಯಲ್ಲಿ ಭಾಗವಹಿಸಿದ್ದ ಎಂದು ಆಸ್ಟ್ರೇಲಿಯಾದ ಪತ್ರಿಕೆ ದಿ ಕ್ಲಾಕ್ಸನ್ನ ತನಿಖಾ ವರದಿ ತಿಳಿಸಿದೆ.
ಈ ಮಧ್ಯೆ ಕ್ರೀಡಾಕೂಟದ ಪ್ರಸಾರಕರಾದ ದೂರದರ್ಶನ ಕೂಡ ಚಳಿಗಾಲದ ಒಲಿಂಪಿಕ್ಸ್ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತ ಈ ಕ್ರೀಡಾಕೂಟಕ್ಕೆ ರಾಜತಾಂತ್ರಿಕ ಬಹಿಷ್ಕಾರ ಹಾಕಿದ ಬಳಿಕ ದೂರದರ್ಶನ ಕೂಡ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದ ನೇರಪ್ರಸಾರಕ್ಕೆ ಬಹಿಷ್ಕಾರ ಹಾಕಲು ನಿರ್ಧರಿಸಿದೆ.
ಈ ವರ್ಷದ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಭಾರತದಿಂದ ಆರಿಫ್ ಖಾನ್ ಮಾತ್ರ ಪ್ರವೇಶ ಪಡೆದಿದ್ದಾರೆ. ಜಮ್ಮು ಕಾಶ್ಮಿರ ಮೂಲದ ಆರಿಫ್ ಖಾನ್ ಸ್ಲಾಲೋಮ್ ಈವೆಂಟ್ನಲ್ಲಿ (ಆಲ್ಪೈನ್ ಸ್ಕೀಯಿಂಗ್) ಭಾರತವನ್ನು ಪ್ರತಿನಿಧಿಸಲಿದ್ದಾರೆ.