
ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿರುವ ಭಾರತದ ಸ್ಟಾರ್ ರಸ್ಲರ್ ಸುಶೀಲ್ ಕುಮಾರ್ ತನಿಖೆ ಎದುರಿಸಬೇಕಾದ ಭೀತಿಯಲ್ಲಿದ್ದಾರೆ. ದೆಹಲಿಯ ಛತ್ರಸಾಲ್ ಸ್ಟೇಡಿಯಂ ಬಳಿ ಗಲಾಟೆ ನಡೆದು ಒಬ್ಬ ರಸ್ಲರ್ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸುಶೀಲ್ ಮೇಲೆ ಆರೋಪ ಕೇಳಿಬಂದಿದೆ.
ಛತ್ರಸಾಲ್ ಸ್ಟೇಡಿಯಂನ ಒಳಗೆ 23ರ ಹರೆಯದ ರಸ್ಲರ್ನ ಮೇಲೆ ಬೇರೆ ರಸ್ಲರ್ಗಳು ಸೇರಿ ಗಂಭೀರವಾಗಿ ಹಲ್ಲೆ ಮಾಡಿದ್ದರು. ಗಂಭೀರ ಗಾಯಗೊಂಡ ರಸ್ಲರ್ ಕೊನೆಯುಸಿರೆಳೆದರೆ, ಆತನ ಇಬ್ಬರು ಸ್ನೇಹಿತರು ಗಾಯಗೊಂಡಿದ್ದರು.
ರಸ್ಲರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ನಲ್ಲಿ ಸುಶೀಲ್ ಕುಮಾರ್ ಹೆಸರೂ ಇದೆ. ಹೀಗಾಗಿ ಸುಶೀಲ್ ಕೂಡ ತನಿಖೆ ಎದುರಿಸಬೇಕಾಗಿ ಬಂದಿದೆ. ಪೊಲೀಸರ ಪ್ರಕಾರ, ಕುಮಾರ್, ಅಜಯ್, ಸೋನು, ಸಾಗರ್, ಅಮಿತ್ ಮಧ್ಯೆ ಪಾರ್ಕಿಂಗ್ ಏರಿಯಾದಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಒಬ್ಬ ರಸ್ಲರ್ ಸತ್ತಿದ್ದ.
'ಅಪರಾಧದ ಸ್ಥಳ ಮತ್ತು ಸ್ಥಳದಲ್ಲಿ ದೊರೆತ ಎಲ್ಲಾ ಐದು ವಾಹನಗಳನ್ನು ಪರಿಶೀಲಿಸಲಾಗಿದೆ. ತಪಾಸಣೆಯ ಸಮಯದಲ್ಲಿ, ಒಂದು ಸ್ಕಾರ್ಪಿಯೋದಲ್ಲಿ ಒಂದು ಡಬಲ್ ಬ್ಯಾರೆಲ್ ಲೋಡೆಡ್ ಗನ್ ಕಂಡುಬಂದಿದೆ ಮತ್ತು ಎರಡು ಮರದ ತುಂಡುಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ,' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.