ತಿರುವನಂತಪುರಂ, ಜೂ.24: ಎಲ್ಲಿಯ ಜರ್ಮನಿ ಎಲ್ಲಿಯ ಕೇರಳ, ಆದರೂ ಎರಡಕ್ಕೂ ಸಂಬಂಧ ಬೆಸೆದುಕೊಳ್ಳುತ್ತಿದೆ. ಕೇರಳದ ಆಯುರ್ವೇದ ಪ್ರಚಾರಕ್ಕಾಗಿ ಜರ್ಮನಿಯ ಟೆನಿಸ್ ತಾರೆ ಸ್ಟೆಫಿ ಗ್ರಾಫ್ ಅವರನ್ನು ರಾಯಭಾರಿಯಾಗಿ ನೇಮಿಸಲು ಕೇರಳ ಸರ್ಕಾರದ ಕ್ಯಾಬಿನೆಟ್ ಬುಧವಾರ ನಿರ್ಧರಿಸಿದೆ.
ಕೇರಳದ ಆಯುರ್ವೇದಕ್ಕೆ ಪ್ರಚಾರ ಸಿಕ್ಕರೆ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂದು ಸಿಎಂ ಉಮ್ಮನ್ ಚಾಂಡಿ ಹೇಳಿದ್ದಾರೆ. ಈ ಬಗ್ಗೆ ಸ್ಟೆಫಿ ಗ್ರಾಫ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೇರಳದ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಮಾತುಕತೆ ನಡೆಸುತ್ತಿದೆ.ಒಪ್ಪಂದಕ್ಕೆ ಸಹಿ ಬೀಳಬೇಕಿದೆ ಎಂದಿದ್ದಾರೆ.

22 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಗ್ರಾಫ್ ಅವರಿಗೆ ಜಾಗತಿಕವಾಗಿ ಅಪಾರ ಅಭಿಮಾನಿಗಳಿದ್ದಾರೆ ಅದರೆ, ಆಯುರ್ವೇದಕ್ಕೂ ಅವರಿಗೂ ಯಾವ ರೀತಿ ನಂಟು ಇದೆಯೋ ಕೇರಳ ಸಿಎಂಗೆ ಗೊತ್ತು ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಆಯುರ್ವೇದ ಹಾಗೂ ಪ್ರವಾಸೋದ್ಯಮ ರಾಯಭಾರಿಯಾಗಿ ಶಾರುಖ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಪಟ್ಟಿ ಮಾಡಿ ಕೊನೆಗೆ ಸ್ಟೆಫಿ ಗ್ರಾಫ್ ಅವರನ್ನು ಆಯ್ಕೆ ಮಾಡಲಾಗಿದೆ.