
ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಶ್ಲಾಘಿಸಿದ್ದು, 2022ರ ವರ್ಷವು ಅವರಿಗೆ ಸೇರಿದೆ ಎಂದು ಹೇಳಿದ್ದಾರೆ.
32ರ ಹರೆಯದ ಸೂರ್ಯಕುಮಾರ್ ಯಾದವ್ ಐಸಿಸಿ ಪುರುಷರ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ.
ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಹೆಚ್ಚಿನ ಭಾರತೀಯ ಬ್ಯಾಟರ್ಗಳು ಫಾರ್ಮ್ಗಾಗಿ ಹೋರಾಡುತ್ತಿರುವಾಗ, ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಈ ವರ್ಷವು ಆತನಿಗೆ ಸೇರಿದೆ ಎಂದು ಅಭಿಪ್ರಾಯಪಟ್ಟರು.
"ಈ ವರ್ಷ ಸೂರ್ಯಕುಮಾರ್ ಯಾದವ್ ಅವರಿಗೆ ಸೇರಿದ್ದು. ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ನಲ್ಲಿ ಏನಾಯಿತು ಎಂಬುದನ್ನು ಗಮನಿಸಿದರೆ, ಈ ವರ್ಷ ಭಾರತ ತಂಡಕ್ಕೆ ಉತ್ತಮವಾಗಿರಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ನಲ್ಲಿ ಪ್ರಕಾಶಮಾನವಾಗಿ ಮಿಂಚಲು ಸಾಧ್ಯವಾಯಿತು," ಎಂದು ಚೋಪ್ರಾ ಹೇಳಿದ್ದಾರೆ.

ಕಡಿಮೆ ಅವಧಿಯಲ್ಲಿ ಟಿ20 ಬ್ಯಾಟರ್ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಲು ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿದರು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದರು.
ಜಿಂಬಾಬ್ವೆಯ ಸಿಕಂದರ್ ರಜಾ, ಇಂಗ್ಲೆಂಡ್ನ ಸ್ಯಾಮ್ ಕರ್ರಾನ್ ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಜೊತೆಗೆ ವರ್ಷದ ಅತ್ಯುತ್ತಮ ಟಿ20 ಆಟಗಾರನಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಆಟಗಾರ ಸೂರ್ಯಕುಮಾರ್ ಯಾದವ್ ಎಂಬುದು ಗಮನಾರ್ಹ ಸಂಗತಿ.
"ಸೂರ್ಯಕುಮಾರ್ ಯಾದವ್ ಸತತವಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಮತ್ತು ಬ್ಯಾಟರ್ಗಳ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನನ್ನ ಪ್ರಕಾರ, ಅವರು ವರ್ಷದ ಅತ್ಯುತ್ತಮ ಟಿ20 ಬ್ಯಾಟರ್ ಆಗಿದ್ದಾರೆ. ಅವರ ದಾಖಲೆ ನಂಬಲಾಗದಂತಿದ್ದು, ಅವರು ಬ್ಯಾಟಿಂಗ್ ಮಾಡಿದ ರೀತಿ ಸೊಗಸಾಗಿತ್ತು," ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಇದೇ ವೇಳೆ ಆಕಾಶ್ ಚೋಪ್ರಾ ಅವರು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿದರು. ಕೊಹ್ಲಿ ವರ್ಷವಿಡೀ ಫಾರ್ಮ್ಗಾಗಿ ಹೋರಾಡಿದರು ಮತ್ತು ಐಪಿಎಲ್ ಸೇರಿದಂತೆ ಕೆಲವು ಕಡಿಮೆ ಸ್ಕೋರ್ಗಳನ್ನು ಮಾಡಿದರು. ಆದರೆ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ನಲ್ಲಿ ತಮ್ಮ ಫಾರ್ಮ್ಗೆ ಮರಳಿದರು. ಭಾರತ ತಂಡಕ್ಕಾಗಿ ಕೆಲವು ಅದ್ಭುತ ಪ್ರದರ್ಶನಗಳನ್ನು ನೀಡಿದರು ಎಂದರು.
"ವಿರಾಟ್ ಕೊಹ್ಲಿಯೂ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರು ಫಾರ್ಮ್ಗಾಗಿ ವರ್ಷಪೂರ್ತಿ ಹೆಣಗಾಡಿದರು ಮತ್ತು ಅವರ ಬ್ಯಾಟಿಂಗ್ ಪ್ರದರ್ಶನಗಳು ಐಪಿಎಲ್ನಲ್ಲೂ ಸಾಕಷ್ಟು ಕಳಪೆಯಾಗಿದ್ದವು. ಅವರಿಗೆ ಈ ವರ್ಷ ಕೆಟ್ಟದಾಗಿತ್ತು. ಆದರೆ ಪರಿಸ್ಥಿತಿಗಳನ್ನು ಅವರು ಹಿಂತಿರುಗಿಸಲು ಸಾಧ್ಯವಾಯಿತು. ಅವರು 2022ರ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯ ಪಿಚ್ ಸಾಕಷ್ಟು ಸವಾಲಾಗಿತ್ತು. ಆದರೆ ಕೊಹ್ಲಿ ಉತ್ತಮ ರನ್ ಗಳಿಸುವಲ್ಲಿ ಯಶಸ್ವಿಯಾದರು ಹಾಗೂ ಶತಕದ ಬರವನ್ನು ಈ ವರ್ಷ ನೀಗಿಸಿಕೊಂಡರು," ಎಂದು ಆಕಾಶ್ ಚೋಪ್ರಾ ಹೇಳಿದರು.