
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಗೆದ್ದು ಬೀಗಿದ್ದು, ಕ್ರಿಸ್ಗೇಲ್ ಜೊತೆಗೂಡಿ ಓಪನರ್ ಮಂದೀಪ್ ಸಿಂಗ್ ತಂಡವನ್ನು ಗೆಲುವಿನ ದಡ ತಲುಪಿಸಿದ್ದಾರೆ.
56 ಎಸೆತಗಳಲ್ಲಿ ಅಜೇಯ 66 ರನ್ ಕಲೆಹಾಕಿದ ಮಂದೀಪ್ ಸಿಂಗ್ ಇನ್ನಿಂಗ್ಸ್ನಲ್ಲಿ ಎಂಟು ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸ್ರ್ಗಳಿದ್ದವು. ಮತ್ತೊಂದೆಡೆ ಕ್ರಿಸ್ಗೇಲ್ 51 ರನ್ಗಳಿಸಿ ಗೆಲುವಿನ ಕೊನೆಯಲ್ಲಿ ಔಟಾದರು. ಆದರೆ ಮದೀಪ್ ಪಂದ್ಯದ ಆರಂಭದಿಂದಲೂ ತಂಡದ ಗೆಲುವಿಗೆ ಟೊಂಕಕಟ್ಟಿ ನಿಂತು ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಎಂಟು ವಿಕೆಟ್ಗಳ ಗೆಲುವು ತಂದುಕೊಟ್ಟರು.
ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡ ಮಂದೀಪ್ ಸಿಂಗ್ ಆ ನೋವಿನಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದಕ್ಕಾಗಿ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಅಜೇಯ ಅರ್ಧಶತಕವನ್ನು ಮಂದೀಪ್ ತಮ್ಮ ದಿವಂಗತ ತಂದೆಗೆ ಅರ್ಪಿಸಿದ್ದಾರೆ.
ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಮಂದೀಪ್ ''ನಾನು ಯಾವಾಗಲೂ ನಾಟ್ ಔಟ್ ಆಗಿರಬೇಕು ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. ನಾನು ಇಂದು ಅದನ್ನು ಮಾಡಿದ್ದೇನೆ ನನಗೆ ಸಂತೋಷವಾಗಿದೆ. ನನಗೆ ವಿಶೇಷ, ವಿಶೇಷ ಇನ್ನಿಂಗ್ಸ್ " ಎಂದು ಮಂದೀಪ್ ಸಿಂಗ್ ಹೇಳಿದ್ದಾರೆ.
ಇಂತಹ ನೋವಿನ ಸಂದರ್ಭದಲ್ಲಿಯೂ ಕೆಚ್ಚೆದೆಯ ಮಂದೀಪ್ ಆಟ ಕಂಡು ಕರ್ನಾಟಕ ಮೂಲದ ಕ್ರಿಕೆಟಿಗ ವಿನಯ್ ಕುಮಾರ್ ಹೊಗಳಿದ್ದಾರೆ. ನಿಮ್ಮ ಅಜೇಯ 66ರನ್ಗಳ ಇನ್ನಿಂಗ್ಸ್ ಕಂಡು ನಿಮ್ಮ ತಂದೆ ಖುಷಿ ಪಟ್ಟಿರುತ್ತಾರೆ. ಇದು ಹೆಚ್ಚಿನ ಶ್ರದ್ಧೆ ಮತ್ತು ಸಾಕಷ್ಟು ಆತ್ಮಸ್ಥೈರ್ಯ ಇದ್ದವರಿಂದ ಮಾತ್ರ ಇಂತಹ ಪ್ರದರ್ಶನ ನೀಡಲು ಸಾಧ್ಯ ಎಂದು ವಿನಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ವಿನಯ್ ಅಷ್ಟೇ ಅಲ್ಲದೆ ಆರ್ಸಿಬಿ ಸ್ಪಿನ್ನರ್ ಯುಜವೇಂದ್ರ ಚಹಾಲ್ ಸೇರಿದಂತೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಮಂದೀಪ್ ದಿಟ್ಟತನ ಮತ್ತು ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.