
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ವೈಟ್ಬಾಲ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಟಿ20 ಮಾದರಿಯಲ್ಲಿ ಅತ್ಯಂತ ಸ್ಥಿತ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟೆಸ್ಟ್ ಮಾದರಿಗೂ ಸೇರ್ಪಡೆಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸ್ವತಃ ಸೂರ್ಯಕುಮಾರ್ ಯಾದವ್ ಕೂಡ ಟೆಸ್ಟ್ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಬಹುದೊಡ್ಡ ಕನಸು ಎಂದಿದ್ದರು.
ಈ ವಿಚಾರವಾಗಿ ಮಾಜಿ ಕ್ರಿಕೆಟಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಮೂರು ಮಾದರಿಯಲ್ಲಿಯೂ ಆಡುವ ಬಗ್ಗೆ ಆಕಾಶ್ ಚೋಪ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂರು ಮಾದರಿಯಲ್ಲಿಯೂ ಆಡುವುದರಿಂದಾಗಿ ಆಟಗಾರನ ಮೇಲೆ ಒತ್ತಡ ಹೆಚ್ಚಾಗಲಿದ್ದು ಇದರಿಂದಾಗಿ ಗಾಯಗೊಳ್ಳುವ ಸಾಧ್ಯತೆಗಳು ಕೂಡ ಇದೆ ಎಂದಿದ್ದಾರೆ ಆಕಾಶ್ ಚೋಪ್ರ.
"ಆಟಗಾರ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರೆ ಆತ ಎಲ್ಲಾ ಮೂರು ಮಾದರಿಯಲ್ಲಿಯೂ ಆಟಬೇಕು ಎಂದು ಬಯಸುದು ನಮ್ಮ ದೇಶದಲ್ಲಿ ಒಂದು ಗೀಳಾಗಿದೆ. ಈ ಹಂತದಲ್ಲಿ ಶುಬ್ಮನ್ ಗಿಲ್ ಬಗ್ಗೆ ಕೂಡ ನಾವು ಅದೇ ರೀತಿ ಬಯಸುತ್ತಿದ್ದೇವೆ. ಈ ಹಿಂದೆ ರಿಷಭ್ ಪಂತ್ ಬಗ್ಗೆ ಕೂಡ ಈ ವಿಚಾರವಾಗಿ ಸಾಕಷ್ಟು ಒತ್ತಾಯಗಳು ಕೇಳಿಬಂದಿದ್ದವು. ಅವರು ಎಲ್ಲಾ ಮಾದರಿಯಲ್ಲಿಯೂ ಆಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗ ಸೂರ್ಯಕುಮಾರ್ ಯಾದವ್ ಬಗ್ಗೆಯೂ ಅದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಅವರ ಬ್ಯಾಟಿಂಗ್ನ ಮಟ್ಟದ ಬಗ್ಗೆ ಇಲ್ಲಿ ಯಾವುದೇ ಪ್ರಶ್ನೆಗಳು ಇಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ.
ಇನ್ನು ಈಗ ಭಾರತ ಟೆಸ್ಟ್ ತಂಡದಲ್ಲಿ ಸೂರ್ಯಕುಮಾರ್ ಯಾದವ್ಗೆ ಅವಕಾಶ ನಿಡಲು ಬೇಕಾದ ಸ್ಥಾನ ಕೂಡ ಇಲ್ಲ ಎಂದಿರುವ ಚೋಪ್ರ ಅಂಥಾ ಅವಕಾಶ ಇದ್ದಾಗ ಖಂಡಿತಾ ಆತ ತಂಡದೊಳಗೆ ಸೇರಿಕೊಳ್ಳಲಿ. ಆದರೆ ಬಲವಂತವಾಗಿ ಆತನಿಗಾಗಿ ಅವಕಾಶ ನೀಡುವುದು ಸೂಕ್ತವಲ್ಲ ಎಂದಿದ್ದಾರೆ ಚೋಪ್ರ. "ಯಾಕೆ ಬಲವಂತವಾಗಿ ಟೆಸ್ಟ್ ತಂಡದೊಳಗೆ ಆತನನ್ನು ಸೇರ್ಪಡೆಗೊಳಿಸಬೇಕು? ಅದರ ಅಗತ್ಯವಿಲ್ಲ. ಸಾಕಷ್ಟು ಅವಕಾಶಗಳು ಖಾಲಿಯಿದ್ದಾಗ ಆತನನ್ನು ಆಡಿಸಬೇಕಾಗುತ್ತದೆ ಎಂಬ ಸಂದರ್ಭ ಬಂದಾಗ ಆಡಿಸಬಹುದು. ಆದರೆ ಆತನಿಗೆ 5 ಅಥವಾ 6ನೇ ಕ್ರಮಾಂಕ ನೀಡಿ ಆಡಿಸಬೇಕು. ನನಗೆ ವೈಯಕ್ತಿಕವಾಗಿ ಆತ ವೈಟ್ಬಾಲ್ ಬ್ಯಾಟರ್ ಆಗಿಯೇ ಉಳಿಯಬೇಕೆಂಬುದು ಬಯಕೆ" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಸೂರ್ಯಕುಮಾರ್ ಯಾದವ್ ಇತ್ತೀಚೆಗಷ್ಟೇ ಅಂತ್ಯವಾದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದರು. 51 ಎಸೆತಗಳಲ್ಲಿ ಅಜೇಯ 117 ರನ್ ಗಳಿಸಿದ ಸೂರ್ಯ ಈ ವರ್ಷ ಕೂಡ ತಮ್ಮ ಅದ್ಭುತ ಫಾರ್ಮ್ ಮುಂದುವರಿಸುಇವ ವಿಶ್ವಾಸ ಮೂಡಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಅವರ ಈ ಶತಕ ಕಳೆದ ಆರು ತಿಂಗಳ ಅವಧಿಯಲ್ಲಿ ಬಂದ ಮೂರನೇ ಶತಕ ಎಂಬುದು ಗಮನಾರ್ಹ ಅಂಶ.