ಗುರುವಾರ ಟೀಮ್ ಇಂಡಿಯಾ ಹಾಗೂ ನಮೀಬಿಯಾ ತಂಡಗಳ ನಡುವೆ ಟಿ20 ವಿಶ್ವಕಪ್ನ ಲೀಗ್ ಹಂತದ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಎರಡನೇ ಜಯ ಸಾಧಿಸಿದೆ. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಆದರೆ ಈ ಪಂದ್ಯಕ್ಕೂ ಮುನ್ನ ನಡೆದ ಟಾಸ್ನಲ್ಲಿ ಸೂರ್ಯಕುಮಾರ್ ಯಾದವ್ ನೀಡಿದ ಆ ಒಂದು ಹೇಳಿಕೆ ನಿಜಕ್ಕೂ ಪಾಕಿಸ್ತಾನ ಬೌಲರ್ಸ್ಗಳು ನೆಮ್ಮದಿಯನ್ನು ಹೆಚ್ಚಿಸಿರಬಹುದು. ಅಷ್ಟಕ್ಕೂ ಸೂರ್ಯಕುಮಾರ್ ಯಾದವ್ ನೀಡಿದ ಆ ಹೇಳಿಕೆ ಏನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಟೀಮ್ ಇಂಡಿಯಾ ಹಾಗೂ ನಮೀಬಿಯಾ ತಂಡಗಳು ಮೈದಾನಕ್ಕೆ ಇಳಿದಾಗ ಎಲ್ಲರ ಕಣ್ಣುಗಳು ಸೂರ್ಯಕುಮಾರ್ ಯಾದವ್ ಅವರ ಮೇಲೆ ನೆಟ್ಟಿದ್ದವು. ಸೂರ್ಯಕುಮಾರ್ ಯಾದವ್ ಟಾಸ್ಗೆ ಬಂದಾಗ ಅವರು ತಂದ ತಂಡದ ಲಿಸ್ಟ್ನಲ್ಲಿ ಯಾರಿಗೆಲ್ಲಾ ಸ್ಥಾನ ನಿಡಲಾಗಿದೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿತ್ತು. ನಮೀಬಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಟಾಸ್ ಸೋತರೂ ಸೂರ್ಯಕುಮಾರ್ ಯಾದವ್ ಪಡೆಗೆ ಮೊದಲು ಬ್ಯಾಟ್ ಮಾಡುವ ಅವಕಾಶ ಲಭಿಸಿತು. ಆದರೆ ಗಾಯಾಳು ಅಭಿಷೇಕ್ ಶರ್ಮಾ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ತೀರ್ಮಾನ ಬಂದಿರಲಿಲ್ಲ. ಟಾಸ್ ಬಳಿಕ ಸೂರ್ಯಕುಮಾರ್ ಯಾದವ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಅಭಿಷೇಕ್ ಶರ್ಮಾ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಗುಣಮುಖರಾಗಲು ಇನ್ನು ಕೆಲವು ದಿನಗಳು ಬೇಕು. ಅವರು ಇನ್ನು ಎರಡು ಪಂದ್ಯ ಮಿಸ್ ಮಾಡಿಕೊಳ್ಳಬಹುದು ಎಂದು ಹೇಳಿದರು. ಈ ಹೇಳಿಕೆ ಸದ್ಯ ಸಂಚಲನ ಮೂಡಿಸಿದೆ. ಟಾಸ್ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಅಭಿಷೇಕ್ ಶರ್ಮಾ, ಪಾಕ್ ವಿರುದ್ಧದ ಪಂದ್ಯವನ್ನು ಆಡುವುದು ಅನುಮಾನ ಎನ್ನುವ ರೀತಿಯಲ್ಲಿ ಸೂರ್ಯಕುಮಾರ್ ಯಾದವ್ ಹೇಳಿಕೆ ನೀಡಿದರು.
ಟಾಸ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ನೀಡಿರುವ ಹೇಳಿಕೆ ಪಾಕ್ ಬೌಲರ್ಗಳಿಗೆ ಸಮಾಧಾನ ತಂದಿರಬಹುದು. ಅಭಿಷೇಕ್ ಶರ್ಮಾ ಬಿರುಸಿನ ಆಟಕ್ಕೆ ಹೆಸರುವಾಸಿಯಾದ ಆಟಗಾರ. ತಾವು ಎದುರಿಸುವ ಮೊದಲ ಎಸೆತದಿಂದಲೇ ಎದುರಾಳಿ ಬೌಲರ್ಗಳನ್ನು ಒತ್ತಡಕ್ಕೆ ತಳ್ಳುವ ಪ್ಲೇಯರ್. ಏಷ್ಯಾ ಕಪ್ ಟಿ20 ಟೂರ್ನಿಯಲ್ಲೂ ಅಭಿಷೇಕ್ ಶರ್ಮಾ ಇದೇ ರೀತಿಯ ಬ್ಯಾಟಿಂಗ್ ನಡೆಸಿದ್ದರು.
ಪಾಕಿಸ್ತಾನದ ವಿರುದ್ಧ ಅಭಿಷೇಕ್ ಶರ್ಮಾ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಆಡಿರುವ ಮೂರು ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 110 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಅರ್ಧಶತಕ ಸಹ ಸೇರಿದೆ. ಇದೇ ವೇಳೆ ಅಭಿಷೇಕ್ 11 ಬೌಂಡರಿ, 7 ಸಿಕ್ಸರ್ ಸಿಡಿಸಿದ್ದಾರೆ.
ಭಾರತ, ಟಿ20 ವಿಶ್ವಕಪ್ನಲ್ಲಿ ತನ್ನ ಅಭಿಯಾನವನ್ನು ಯುಎಸ್ಎ ವಿರುದ್ಧ ಮುಂಬೈನಲ್ಲಿ ಆಡಿತು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕವೇ ಅವರ ಹೊಟ್ಟೆಯಲ್ಲಿ ಸಮಸ್ಯೆ ಇರುವುದು ಕಂಡು ಬಂದಿತು. ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ತಂಡ ದೆಹಲಿಗೆ ಪ್ರಯಾಣ ಬೆಳೆಸಿದ ಬಳಿಕವೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿಲ್ಲ. ಪರಿಣಾಮ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲದೆ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಡಿಸ್ಚಾರ್ಜ್ ಸಹ ಮಾಡಲಾಯಿತು. ಇವರು ಮುಂಬೈನಲ್ಲಿ ನಡೆದ ಅಭ್ಯಾಸದ ವೇಳೆ ತಿಂದ ಆಹಾರದಿಂದಾಗಿ ಅವರಿಗೆ ಸಮಸ್ಯೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಬಿಸಿಸಿಐ ವೈದ್ಯಕೀಯ ತಂಡ ಸಹ ಇವರ ಆರೋಗ್ಯದ ಮೇಲೆ ಮೇಲ್ವಿಚಾರಣೆ ನಡೆಸುತ್ತಿದೆ.