
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಟಿ20 ಅಭ್ಯಾಸ ಪಂದ್ಯ ಮಳೆಯ ಕಾರಣದಿಂದಾಗಿ ಫಲಿತಾಂಶವಿಲ್ಲದೆ ಕೊನೆಗೊಂಡಿತು. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು.
ನಂತರ ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಿತು 2.2 ಓವರ್ ವೇಳೆಗೆ 19 ರನ್ ಗಳಿಸಿ ಯಶಸ್ವಿಯಾಗಿ ಚೇಸಿಂಗ್ ಆರಂಭಿಸಿದಾಗಲೇ, ಮಳೆ ಪಂದ್ಯವನ್ನು ಅಡ್ಡಿಪಡಿಸಿತು. ಮಳೆ ಹೆಚ್ಚಾದ ಕಾರಣವನ್ನು ಪಂದ್ಯವನ್ನು ರದ್ದುಗೊಳಿಸಲಾಯಿತು.
ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ, ಈ ಪಂದ್ಯದ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ತಮ್ಮ ಮೊದಲನೇ ಓವರ್ ನಲ್ಲಿಯೇ ಅಫ್ಘಾನಿಸ್ತಾನದ ರಹಮುನಲ್ಲಾ ಗುರ್ಬಾಜ್ರನ್ನು ಯಾರ್ಕರ್ ಎಸೆಯುವ ಮೂಲಕ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು.
ವಿಕೆಟ್ಕೀಪರ್-ಬ್ಯಾಟರ್ ತನ್ನ ಬ್ಯಾಟ್ ಅನ್ನು ಕೆಳಕ್ಕೆ ಇಳಿಸುವ ವೇಳೆಗಾಗಲೇ ವೇಗವಾಗಿ ಬಂದ ಚೆಂಡು ಕಾಲ್ಬೆರಳುಗಳಿಗೆ ಅಪ್ಪಳಿಸಿತು. ತೀವ್ರ ನೋವಿನಿಂದ ನರಳುತ್ತಿದ್ದ ಗುರ್ಬಾಜ್ ಸಹಾಯಕರ ಆಸರೆ ಪಡೆದು ಮೈದಾನದಿಂದ ಹೊರನಡೆದರು. ತಕ್ಷಣವೇ ಅವರನ್ನು ಸ್ಕ್ಯಾನ್ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ಗುರ್ಬಾಜ್ ಆರೋಗ್ಯ ವಿಚಾರಿಸಿದ ಬಾಬರ್, ಶಾಹೀನ್
ಪಂದ್ಯ ಅರ್ಧಕ್ಕೆ ರದ್ದಾದ ನಂತರ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಬೌಲರ್ ಶಾಹೀನ್ ಶಾ ಅಫ್ರಿದಿ ಗಾಯಗೊಂಡ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಅವರ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿದರು. ಅಜಮ್ ಮತ್ತು ಶಾಹೀನ್ ಗುರ್ಬಾಜ್ ಅವರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಕಾಲ್ಬೆರಳುಗಳಿಗೆ ಗಾಯವಾಗಿದೆಯೇ ಎನ್ನುವ ಬಗ್ಗೆ ಪರೀಕ್ಷಿಸಿದರು. ಗುರ್ಬಾಜ್ ಪಾಕಿಸ್ತಾನದ ಆಟಗಾರರ ವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೈಕುಲುಕಿ ಅಭಿನಂದನೆ ಸಲ್ಲಿಸಿದರು.
ಎಲ್ಲಾ ಗಮನವು ಶಾಹೀನ್ ಮೇಲೆ ಕೇಂದ್ರೀಕೃತವಾಗಿತ್ತು ಮತ್ತು ಅವರು ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ನೀಡಿದರು. ಮೊದಲ ಎರಡು ಓವರ್ಗಳಲ್ಲಿ ಅವರು ಕೇವಲ ನಾಲ್ಕು ರನ್ಗಳನ್ನು ಬಿಟ್ಟುಕೊಟ್ಟರು ಮತ್ತು ಎರಡು ವಿಕೆಟ್ ಪಡೆದರು.
ಎಡಗೈ ವೇಗಿ ಭಾರತಕ್ಕೆ ದೊಡ್ಡ ಎಚ್ಚರಿಕೆ ನೀಡಿದರು. ರೋಹಿತ್ ಶರ್ಮಾ ಮತ್ತು ತಂಡ ಎಡಗೈ ಬೌಲರ್ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿರುವ ಅಂಕಿ ಅಂಶಗಳಿಲ್ಲ. ಶಾಹೀನ್ ಅಫ್ರಿದಿ ಈ ಮೊದಲು ಭಾರತದ ಆರಂಭಿಕರನ್ನು ಔಟ್ ಮಾಡಿದ್ದಾರೆ. ಅಕ್ಟೋಬರ್ 23ರಂದು ಶಾಹೀನ್ ಅಫ್ರಿದಿ ಭಾರತಕ್ಕೆ ತೊಂದರೆ ಕೊಡುತ್ತಾರಾ ಅಥವಾ ಅವರನ್ನು ಭಾರತದ ಬ್ಯಾಟರ್ ಸಮರ್ಥವಾಗಿ ಎದುರಿಸುತ್ತಾರಾ ಎನ್ನುವುದನ್ನು ನೋಡಬೇಕಿದೆ.