ಪಂದ್ಯ ಸೋತು ಕಂಗೆಟ್ಟು ಕೊಹ್ಲಿ ವೆಬ್ಸೈಟ್ ಹ್ಯಾಕ್ ಮಾಡಿದ ಬಾಂಗ್ಲಾ ಖದೀಮರು

ನವದೆಹಲಿ, ಅಕ್ಟೋಬರ್ 3: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಸೋಲು ಕಂಡು ಮತ್ತೆ ನಿರಾಶೆ ಅನುಭವಿಸಿದ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಮತ್ತೊಂದು 'ಸಾಹಸ' ಮೆರೆದಿದ್ದಾರೆ.
ಏಷ್ಯಾ ಕಪ್ ಫೈನಲ್ನಲ್ಲಿ ಭರ್ಜರಿ ಶತಕ ಬಾರಿಸಿದ ಆರಂಭಿಕ ಆಟಗಾರ ಲಿಟನ್ ದಾಸ್ ಅವರನ್ನು ಧೋನಿ ಸ್ಟಂಪ್ ಔಟ್ ಮಾಡಿದ್ದರು. ಇದರ ತೀರ್ಪು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಕ್ಯಾಮೆರಾ ಕಣ್ಣಿಗೆ ಲಿಟನ್ ದಾಸ್ ಕಾಲು ಕ್ರೀಸ್ ಮೇಲೆಯೇ ಇರುವುದು ಸ್ಪಷ್ಟವಾಗಿತ್ತು. ಕ್ರಿಕೆಟ್ ನಿಯಮಾವಳಿ ಪ್ರಕಾರ ಶೂ ಕ್ರೀಸ್ನ ಒಳಭಾಗದಲ್ಲಿ ಸ್ವಲ್ಪವಾದರೂ ಇರಬೇಕು. ಕ್ರೀಸ್ ಮೇಲೆಯೇ ಇದ್ದರೆ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.
ಆದರೆ, ಎಂದಿನಂತೆಯೇ ಬಾಂಗ್ಲಾದೇಶದ ಅಭಿಮಾನಿಗಳು ಸೋಲಿನ ಹತಾಶೆಯಲ್ಲಿ ಬಿಸಿಸಿಐ ಮತ್ತು ಐಸಿಸಿ ವಿರುದ್ಧ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಐಸಿಸಿ ಎಂದರೆ ಬಿಸಿಸಿಐ. ಬಿಸಿಸಿಐ ತಾಳಕ್ಕೆ ತಕ್ಕಂತೆ ಐಸಿಸಿ ಕುಣಿಯುತ್ತಿದೆ ಎಂಬ ಟೀಕೆಗಳನ್ನು ಮಾಡಿದ್ದಾರೆ.
ಚಿತ್ರ ಕೃಪೆ:ವಿರಾಟ್ ಕೊಹ್ಲಿ ಫ್ಯಾನ್ಸ್ ಕ್ಲಬ್ ಪೇಜ್

ಕೊಹ್ಲಿ ವೆಬ್ಸೈಟ್ ಹ್ಯಾಕ್
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಾಂಗ್ಲಾದ ಕಿಡಿಗೇಡಿ ಅಭಿಮಾನಿಗಳು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅಧಿಕೃತ ವೆಬ್ಸೈಟ್ ಹ್ಯಾಕ್ ಮಾಡಿ ದ್ವೇಷ ತೀರಿಸಿಕೊಂಡಿದ್ದಾರೆ.
ಸೈಬರ್ ಸೆಕ್ಯುರಿಟಿ ಆಂಡ್ ಇಂಟೆಲಿಜೆನ್ಸ್ (ಸಿಎಸ್ಐ) ಎಂಬ ಬಾಂಗ್ಲಾದೇಶಿ ಹ್ಯಾಕರ್ಗಳ ತಂಡವೊಂದು ಮೂರನೇ ಅಂಪೈರ್ ನಿರ್ಣಯದ ನಾಲ್ಕು ಚಿತ್ರಗಳ ಕೊಲಾಜ್ ಮಾಡಿ ಕೊಹ್ಲಿ ವೆಬ್ ಪುಟದಲ್ಲಿ ಪ್ರಕಟಿಸಿದ್ದಾರೆ.
ಏಷ್ಯಾ ಕಪ್ ಫೈನಲ್ನಲ್ಲಿ ಅಂಪೈರ್ ಅನ್ಯಾಯದ ತೀರ್ಪು ನೀಡಿದ್ದಾರೆ. ಆ ಅಂಪೈರ್ ವಿರುದ್ಧ ಐಸಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೇಗೆ ಔಟ್ ವಿವರಿಸಿ
'ಡಿಯರ್ ಐಸಿಸಿ,
ಕ್ರಿಕೆಟ್ ಜೆಂಟಲ್ಮೆನ್ಗಳ ಕ್ರೀಡೆಯಾಗಿ ಬಳಕೆಯಾಗುತ್ತಿಲ್ಲವೇ?
ಎಲ್ಲಾ ತಂಡಗಳಿಗೂ ನ್ಯಾಯಬದ್ಧ ಹಕ್ಕು ಇಲ್ಲವೇ?
ಅದು ಹೇಗೆ ಔಟ್ ಎಂದು ವಿವರಿಸಿ? ಇಡೀ ಜಗತ್ತಿಗೆ ನೀವು ಅಧಿಕೃತವಾಗಿ ಕ್ಷಮೆ ಕೋರದೆ ಇದ್ದರೆ ಮತ್ತು ಅಂಪೈರ್ ವಿರುದ್ಧ ಕ್ರಮ ತೆಗೆದುಕೊಳ್ಳದೆ ಹೋದರೆ ಪ್ರತಿ ಬಾರಿ ವೆಬ್ಸೈಟ್ ಸರಿಪಡಿಸಿದಾಗಲೂ ಹ್ಯಾಕ್ ಮಾಡುತ್ತೇವೆ'
ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಎರಡು ಕುತೂಹಲಕಾರಿ ಅಂಶಗಳು!

ಈ ಅನ್ಯಾಯ ನಿಮಗೆ ಆಗಿದ್ದರೆ?
'ನನ್ನ ಭಾರತೀಯ ಸಹೋದರ ಮತ್ತು ಸಹೋದರಿಯರೇ, ನಿಮಗೆ ಅಗೌರವ ತೋರಿಸುತ್ತಿಲ್ಲ. ದಯವಿಟ್ಟು ಇದರ ಬಗ್ಗೆ ಯೋಚಿಸಿ. ನಿಮ್ಮ ತಂಡಕ್ಕೆ ಹೀಗೆ ಅನ್ಯಾಯ ಆಗಿದ್ದರೆ ನಿಮಗೆ ಹೇಗೆ ಅನಿಸುತ್ತಿತ್ತು? ಆಟದಲ್ಲಿ ಪ್ರತಿಯೊಂದು ರಾಷ್ಟ್ರೀಯ ತಂಡವನ್ನೂ ಸಮಾನವಾಗಿ ಕಾಣಬೇಕು.
ನಾವು ಕೊನೆಯವರೆಗೂ ಹೋರಾಟ ಮಾಡುತ್ತೇವೆ' ಎಂದು ಸಿಎಸ್ಐ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ.
ಏಷ್ಯಾ ಕಪ್: ಭಾರತ-ಬಾಂಗ್ಲಾದೇಶ ಪಂದ್ಯದ ಕುತೂಹಲಕಾರಿ ಅಂಕಿ ಅಂಶಗಳು

ಭವಿಷ್ಯದಲ್ಲಿ ಇನ್ನೂ ಇದೆ
ಅದೇ ದಿನ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಪ್ರಕಟಿಸಿರುವ ಸಿಎಸ್ಐ, 'ಕ್ರಿಕೆಟ್ ಜೆಂಟಲ್ಮೆನ್ ಆಟ ಎನ್ನುವುದು ನಮಗೆಲ್ಲಾ ಗೊತ್ತು. ಆದರೆ, ಪ್ರತಿ ಬಾರಿಯೂ ಬಾಂಗ್ಲಾದೇಶ ಅನ್ಯಾಯಕ್ಕೆ ಒಳಗಾಗುತ್ತಿದೆ. ಅದಕ್ಕೆ ಪ್ರತಿಭಟನಾತ್ಮಕವಾಗಿ ವಿರಾಟ್ ಕೊಹ್ಲಿ ಅಧಿಕೃತ ವೆಬ್ಸೈಟ್ಅನ್ನು ಹ್ಯಾಕ್ ಮಾಡಿದ್ದೇವೆ. ಭವಿಷ್ಯದಲ್ಲಿ ಇಂತಹ ನಿದರ್ಶನಗಳು ಸಾಕಷ್ಟು ನಡೆಯಲಿವೆ' ಎಂದು ಎಚ್ಚರಿಕೆ ನೀಡಿದೆ.
ಅಳುವುದು ಇದು ಮೊದಲೇನಲ್ಲ
ಅಂಪೈರ್ ನಿರ್ಣಯದ ವಿರುದ್ಧ ಬಾಂಗ್ಲಾದೇಶದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದು ಮೊದಲೇನಲ್ಲ. ಅದರಲ್ಲಿಯೂ ಭಾರತದ ವಿರುದ್ಧದ ಪಂದ್ಯಗಳ ಸೋಲಿನಲ್ಲಿ ಅಂಪೈರ್ ನಿರ್ಣಯವನ್ನೇ ಮುಂದಿಟ್ಟುಕೊಂಡು ಆರೋಪಿಸುವುದು ಮಾಮೂಲಿ.
2015ರ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ರೋಹಿತ್ ಶರ್ಮಾ 90 ರನ್ ಗಳಿಸಿದ್ದಾಗ ರುಬೆಲ್ ಹಸನ್ ಎಸೆದ ಫುಲ್ಟಾಸ್ ಎಸೆತಕ್ಕೆ ಕ್ಯಾಚ್ ನೀಡಿದ್ದರು. ಆದರೆ, ಚೆಂಡು ಸೊಂಟದ ಮಟ್ಟದ ಎತ್ತರದಲ್ಲಿ ಇದ್ದಿದ್ದರಿಂದ ನೋಬಾಲ್ ಎಂದು ಅಂಪೈರ್ ತೀರ್ಮಾನ ನೀಡಿದ್ದರು.
ಈ ಪಂದ್ಯವನ್ನು ಬಾಂಗ್ಲಾದೇಶ 109 ರನ್ಗಳಿಂದ ಸೋತಿತ್ತು. ಆದರೆ, ಅದು ನೋಬಾಲ್ ಆಗಿರಲಿಲ್ಲ. ರೋಹಿತ್ ಔಟ್ ಎಂದು ತೀರ್ಪು ನೀಡಿದ್ದರೆ ನಾವೇ ಗೆಲ್ಲುತ್ತಿದ್ದೆವು ಎನ್ನುವುದು ಬಾಂಗ್ಲಾದೇಶದ ವಾದವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications