ಪಾಕಿಸ್ತಾನಕ್ಕೆ ಸೋಲಿನ ಬೆನ್ನಲ್ಲೇ ಶೋಯೆಬ್ ಮಲಿಕ್ ನಿಗೂಢ ಟ್ವೀಟ್: ಕಿಡಿಕಾರಿದ ಪಾಕ್ ಅಭಿಮಾನಿಗಳು

ಏಷ್ಯಾ ಕಪ್ 2022ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಶ್ರೀಲಂಕಾಗೆ ಶರಣಾಗಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದೆ. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಬರುತ್ತಿದೆ. ಈ ಸಂದರ್ಭದಲ್ಲಿ ಹಿರಿಯ ಆಟಗಾರ ಶೋಯೆಬ್ ಮಲಿಕ್ ಅವರ ನಿಗೂಢಾರ್ಥದ ಟ್ವೀಟ್ ಒಂದು ಎಲ್ಲರ ಗಮನಸೆಳೆದಿದೆ.
ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 23 ರನ್ಗಳ ಅಂತರದಿಂದ ಸೋಲು ಅನುಭವಿಸಿತು. ಈ ಮೂಲಕ ಮೂರನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಪಾಕ್ ಪಡೆ ಕಳೆದುಕೊಂಡಿದೆ. ಪಾಕಿಸ್ತಾನದ ವೇಗಿಗಳು ಒಂದು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡವನ್ನು 58 ರನ್ಗಳಿಗೆ 5 ವಿಕೆಟ್ ಪಡೆಯುವ ಮೂಲಕ ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ನಂತರ ಶ್ರೀಲಂಕಾ ಪರವಾಗಿ ಭಾನುಕಾ ರಾಜಪಕ್ಸೆ ಹಾಗೂ ವನಿಂದು ಹಸರಂಗ ಅವರ ಪ್ರದರ್ಶನದಿಂದಾಗಿ ಪಾಕ್ಗೆ ಹಿನ್ನಡೆಯುಂಟಾಯಿತು. ನಂತರ ಬ್ಯಾಟಿಂಗ್ನಲ್ಲಿಯೂ ಬಾಬರ್ ಅಜಂ ಪಡೆ ತೀವ್ರ ನಿರಾಸೆ ಅನುಭವಿಸಿದೆ.
ಕುತೂಹಲ ಮೂಡಿಸಿದ ಶೋಯೆಬ್ ಮಲಿಕ್ ಟ್ವೀಟ್
ಇನ್ನು ಪಾಕಿಸ್ತಾನ ತಂಡ ಅನುಭವಿಸಿದ ಈ ಸೋಲಿನ ಬಳಿಕ ಪಾಕಿಸ್ತಾನದ ಹಿರಿಯ ಕ್ರಿಕೆಟ್ ಆಟಗಾರ ಸದ್ಯ ಪಾಕ್ ತಂಡದಿಂದ ಹೊರಬಿದ್ದಿರುವ ಶೋಯೆಬ್ ಮಲಿಕ್ ಟ್ವೀಟ್ವೊಂದನ್ನು ಮಾಡಿದ್ದಾರೆ. "ಗೆಳೆತನ, ಇಷ್ಟ ಹಾಗೂ ಇಷ್ಟಪಡದ ಸಂಸ್ಕೃತಿಯಿಂದ ನಾವು ಯಾವಾಗ ಹೊರಗೆ ಬರುತ್ತೇವೆ. ಅಲ್ಲಾ ಯಾವಾಗಲೂ ಪ್ರಾಮಾಣಿಕರಿಗೆ ಸಹಾಯ ಮಾಡುತ್ತಾನೆ" ಎಂದು ಶೋಯೆಬ್ ಮಲಿಕ್ ಮಾಡಿರುವ ಟ್ವೀಟ್ ಗೊಳದಲ ಹಾಗೂ ಕುತೂಹಲ ಮೂಡಿಸಿದೆ. ಪಾಕಿಸ್ತಾನ ತಂಡದಲ್ಲಿ ಅವಕಾಶ ನೀಡದಿರುವ ಅಸಾಧಾನವನ್ನು ಶೋಯೆಬ್ ಮಲಿಕ್ ಹೀಗೆ ಹೊರಹಾಕುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಪ್ರತಿಕ್ರಿಯೆ ನೀಡಿದ ಕಮ್ರಾನ್ ಅಕ್ಮಲ್: ನೆಟ್ಟಿಗರಿಂದ ತರಾಟೆ
ಇನ್ನು ಶೋಯೆಬ್ ಮಲಿಕ್ ಮಾಡಿದ ಈ ಟ್ವೀಟ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಪ್ರತಿಕ್ರಿಯೆ ನೀಡಿದ್ದಾರೆ. 'ಉಸ್ತಾದ್ ಅವರೇ, ಹೆಚ್ಚು ಪ್ರಾಮಾಣಿಕವಾಗಿ ಇರಬೇಡಿ" ಎಂದು ಕಮ್ರಾನ್ ಅಕ್ಮಲ್ ಪ್ರತಿಕ್ರಿಯಿಸಿದ್ದಾರೆ. ಈ ಇಬ್ಬರ ಟ್ವೀಟ್ಗೆ ಕೂಡ ಪಾಕಿಸ್ತಾನದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಒಬ್ಬರು ಅಭಿಮಾನಿ, ಸಾವಿರಾರು ಬಾರಿ ಸೋತರೂ ನಾವು ನಿಮ್ಮನ್ನು ಮತ್ತೆ ಪಾಕಿಸ್ತಾನ ತಂಡದಲ್ಲಿ ನೋಡಲು ಬಯಸುವುದಿಲ್ಲ" ಎಂದಿದ್ದಾರೆ. ಮತ್ತೋರ್ವ ಅಭಿಮಾನಿ "ಏಷ್ಯಾ ಕಪ್ ಫೈನಲ್ನಲ್ಲಿ ಸೋತ ಕೋಪದಲ್ಲಿರುವ ಪಾಕಿಸ್ತಾನದ ಅಭಿಮಾನಿಗಳನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ"ಎಂದಿದ್ದಾರೆ. ಹೀಗೆ ಸಾಕಷ್ಟು ಅಭಿಮಾಮನಿಗಳು ಪಾಕಿಸ್ತಾನದ ಹಿರಿಯ ಕ್ರಿಕೆಟಿಗರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮತ್ತೆ ವೈಫಲ್ಯ ಅನುಭವಿಸಿದ ಪಾಕ್ ನಾಯಕ
ಇನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ. ಈ ಟೂರ್ನಿಗೂ ಹಿಂದೆ ಅದ್ಭುತ ಪ್ರದರ್ಶನ ನೀಡಿ ಉತ್ತಮ ಲಯದಲ್ಲಿದ್ದ ಬಾಬರ್ ಏಷ್ಯಾ ಕಪ್ನಲ್ಲಿಯೂ ಸ್ಥಿರ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಆಸರೆಯಾಗುವ ವಿಶ್ವಾಸ ಮೂಡಿಸಿದ್ದರು. ಆದರೆ ಏಷ್ಯಾ ಕಪ್ ಟೂರ್ನಿಯ ಯಾವ ಪಂದ್ಯದಲ್ಲಿಯೂ ಬಾಬರ್ ಅಜಂ ಅವರಿಂದ ಉತ್ತಮ ಪ್ರದರ್ಶನ ಬಾರಲೇ ಇಲ್ಲ. ಇದು ಪಾಕಿಸ್ತಾನ ತಂಡಕ್ಕೆ ಭಾರೀ ಆಘಾತ ನೀಡಿದೆ.

ಫೈನಲ್ ಪಂದ್ಯದ ಹೀರೋಗಳು
ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಲು ಕಾರಣವಾಗಿದ್ದು ಮೂವರು ಆಟಗಾರು. ಭಾನುಕಾ ರಾಜಪಕ್ಷ, ವನಿಂದು ಹಸರಂಗ ಹಾಗೂ ಪ್ರಮೋದ್ ಮದುಶನ್. ಬ್ಯಾಟಿಂಗ್ನಲ್ಲಿ ಭಾನುಕಾ ರಾಜಪಕ್ಷ ಶ್ರೀಲಂಕಾ ಪಾಲಿಗೆ ಅಕ್ಷರಶಃ ಹೀರೋ ಆಗಿ ಮೆರೆದಿದ್ದಾರೆ. ಕೇವಲ 45 ಎಸೆತಗಳಲ್ಲಿ 71 ರನ್ ಸಿಡಿಸಿದ ರಾಜಪಕ್ಷ ತಂಡ ಸವಾಲಿನ ಗುರಿ ನೀಡಲು ಕಾರಣವಾದರು. ಇನ್ನು ಈ ಪಂದ್ಯದ ಮೂಲಕ ಕೇವಲ ಎರಡನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುತ್ತಿರುವ ಪ್ರಮೋದ್ ಮದಿಶನ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು ಆಲ್ರೌಂಡರ್ ಪ್ರದರ್ಶನ ನೀಡಿದ ಹಸರಂಗಾ ಮೊದಲಿಗೆ ಬ್ಯಾಟಿಂಗ್ನಲ್ಲಿ ಮಹತ್ವದ 36 ರನ್ಗಳ ಕೊಡುಗೆ ನೀಡಿದರೆ ನಂತರ ಬೌಲಿಂಗ್ನಲ್ಲಿಯೂ ಮೂರು ವಿಕೆಟ್ ಕಿತ್ತ ಮಿಂಚಿದ್ದಾರೆ. ಈ ಮೂಲಕ ಶ್ರೀಲಂಕಾ ಗೆಲುವಿಗೆ ಕಾರಣವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications