ಇಂದು (ಸೆಪ್ಟೆಂಬರ್ 9) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೂಪರ್ 4 ಸುತ್ತಿನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು, ಅನೌಪಚಾರಿಕ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಪಾಕಿಸ್ತಾನ ಸಾಧಾರಣ ಗುರಿ ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿದ್ದು, ಎದುರಾಳಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 122 ರನ್ಗಳ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಆರಂಭಿಕರಾಗಿ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ ಕಣಕ್ಕಿಳಿದರು. ಆದರೆ ತಂಡದ ಮೊತ್ತ 28 ರನ್ಗಳಾಗಿದ್ದಾಗ 14 ರನ್ ಗಳಿಸಿ ಆಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಔಟಾದರು. ನಂತರ ಬಂದ ಫಖರ್ ಜಮಾನ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ನಾಯಕ ಬಾಬರ್ ಅಜಂ 30 ರನ್ ಗಳಿಸಿ ಆಡುತ್ತಿದ್ದಾಗ ವನಿಂದು ಹಸರಂಗಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆಗ ತಂಡದ ಮೊತ್ತ 68 ಆಗಿತ್ತು. ಮಧ್ಯಮ ಕ್ರಮಾಂಕದಲ್ಲಿ ನವಾಜ್ 26 ರನ್ ಗಳಿಸಿದರು. ಉಳಿದಂತೆ ಕೆಳ ಕ್ರಮಾಂಕದಲ್ಲಿ ಯಾರೂ ಶ್ರೀಲಂಕಾ ಬೌಲರ್ಗಳನ್ನು ಎದುರಿಸಲಿಲ್ಲ.
ಇನ್ನು ಬೌಲಿಂಗ್ನಲ್ಲಿ ಶ್ರೀಲಂಕಾ ಪರ ವನಿಂದು ಹಸರಂಗಾ 4 ಓವರ್ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರು. ಮಹೀಶ್ ತೀಕ್ಷಣ 4 ಓವರ್ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು. ಪ್ರಮೋದ್ ಮದುಶಣ 2.1 ಓವರ್ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಧನಂಜಯ ಡಿ ಸಿಲ್ವಾ, ಚಮಿಕಾ ಕರುಣಾರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.
ಪಾಕಿಸ್ತಾನದ ಆಡುವ ಹನ್ನೊಂದರ ಬಳಗ:
ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಂ(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸನೈನ್, ಹಸನ್ ಅಲಿ
ಶ್ರೀಲಂಕಾದ ಆಡುವ ಹನ್ನೊಂದರ ಬಳಗ:
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ