Asia Cup 2022: ರಾಹುಲ್ ಅಲ್ಲ, ಈತ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿ; ಪಾಕ್ ಕ್ರಿಕೆಟಿಗ

2022ರ ಏಷ್ಯಾ ಕಪ್ ಟೂರ್ನಿ ಇನ್ನು ಕೇವಲ ಎರಡು ವಾರಗಳಲ್ಲಿ ಪ್ರಾರಂಭವಾಗುತ್ತಿದ್ದು, ಇದೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಅತ್ಯುತ್ತಮವಾದ ತಂಡದ ವಿರುದ್ಧ ತಮ್ಮನ್ನು ತಾವು ಪರೀಕ್ಷಿಸಲು ಎಲ್ಲಾ ತಂಡಗಳಿಗೆ ಇದು ಅಮೂಲ್ಯವಾದ ಅವಕಾಶವಾಗಿದೆ.
ಭಾರತ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಆಗಸ್ಟ್ 28ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯ ವಿಶ್ವದ ಗಮನ ಸೆಳೆದಿದೆ.
ಕಳೆದ ಬಾರಿ 2021ರ ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಭಾರತ ತಂಡವನ್ನು ಸಮಗ್ರವಾಗಿ ಸೋಲಿಸಿತ್ತು. ಆಗ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು, ಆದರೆ ಈಗ ರೋಹಿತ್ ಶರ್ಮಾ ತಂಡದ ಚುಕ್ಕಾಣಿ ಹಿಡಿದಿದ್ದಾರೆ.

ಗಾಯದಿಂದ ವಾಪಸಾಗಿರುವ ಉಪನಾಯಕ ಕೆಎಲ್ ರಾಹುಲ್
ನಾಯಕನಾಗಿ ಮಾತ್ರವಲ್ಲದೆ ಸ್ಟಾರ್ ಓಪನರ್ ಆಗಿಯೂ ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣು ಇರುತ್ತದೆ. ಅವರು ಮತ್ತು ಇತರ ಬ್ಯಾಟ್ಸ್ಮನ್ ಓಪನರ್ ಒದಗಿಸುವ ಆರಂಭ ಭಾರತಕ್ಕೆ ನಿರ್ಣಾಯಕವಾಗಿರುತ್ತದೆ.
ಗಾಯದಿಂದ ವಾಪಸಾಗಿರುವ ಉಪನಾಯಕ ಕೆಎಲ್ ರಾಹುಲ್ ಅವರಿಗೆ ಅಗ್ರಸ್ಥಾನದಲ್ಲಿ ಜೊತೆಯಾಟಗಾರನಾಗಲು ಮುಂಚೂಣಿಯಲ್ಲಿರುವಂತೆ ತೋರುತ್ತಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಬೇರೆ ಹೆಸರನ್ನು ಸೂಚಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಆರಂಭಿಕರಾಗಲಿ
"ರೋಹಿತ್ ಶರ್ಮಾ ಅವರೊಂದಿಗೆ ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಮುಂದುವರಿಯಲು ನಾನು ಬಯಸುತ್ತೇನೆ. ರೋಹಿತ್ ಅವರೊಂದಿಗಿನ ಅವರ ಸ್ಥಿರತೆಯು ಆರಂಭಿಕರಾಗಿ ಅದ್ಭುತವಾಗಿದೆ. ಕೆಎಲ್ ರಾಹುಲ್ ತಂಡಕ್ಕೆ ಮರಳುತ್ತಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಇರಬೇಕೆಂದು ನಾನು ಬಯಸುತ್ತೇನೆ," ಎಂದಿದ್ದಾರೆ.
"ಕೆಎಲ್ ರಾಹುಲ್ ವಿಭಿನ್ನ ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಅವರು ಎಲ್ಲಾ ಸಂದರ್ಭಗಳಲ್ಲಿಯೂ ರನ್ ಗಳಿಸಿದ್ದಾರೆ. ಹಾಗಾಗಿ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಭಾರತದ ಪರ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಬೇಕೆಂದು ನಾನು ಬಯಸುತ್ತೇನೆ," ಎಂದು ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಹೆಚ್ಚಾಗಿ ನಂ.3 ಅಥವಾ 4 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೂ, ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಅವರು ಆರಂಭಿಕ ಆಟಗಾರರಾಗಿ ಬಡ್ತಿ ಪಡೆದರು. ಸರಣಿಯಲ್ಲಿ ಅವರ ಸ್ಕೋರ್ಗಳು- 24, 11, 76, 24 ರನ್ಗಳಾಗಿವೆ.

ಜಿಂಬಾಬ್ವೆ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ನಾಯಕ
ಟೀಂ ಇಂಡಿಯಾ ಏಷ್ಯಾ ಕಪ್ಗೆ ಮುಂಚಿತವಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್ 18ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲು ಸಜ್ಜಾಗಿದೆ. ಜಿಂಬಾಬ್ವೆ ವಿರುದ್ಧದ ಸರಣಿಗೆ ಮತ್ತೆ ಫಿಟ್ ಆಗಿ ತಂಡಕ್ಕೆ ಮರಳಿರುವ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದರೆ, ಈ ಹಿಂದೆ ನಾಯಕರಾಗಿ ನೇಮಕವಾಗಿದ್ದ ಶಿಖರ್ ಧವನ್ ಅವರನ್ನು ಉಪ ನಾಯಕ ಸ್ಥಾನಕ್ಕೆ ನೇಮಿಸಲಾಗಿದೆ.
ಇದಕ್ಕೂ ಮುನ್ನ ಜುಲೈ 30ರಂದು ಬಿಸಿಸಿಐ ಪ್ರಕಟಿಸಿದ ಆರಂಭಿಕ 15 ಸದಸ್ಯರ ತಂಡದಲ್ಲಿ ಕೆಎಲ್ ರಾಹುಲ್ ಹೆಸರು ಇರಲಿಲ್ಲ ಮತ್ತು ಶಿಖರ್ ಧವನ್ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ, ಗುರುವಾರ ಬಿಸಿಸಿಐ ಹೇಳಿಕೆಯಲ್ಲಿ ಕೆಎಲ್ ರಾಹುಲ್ಗೆ ಆಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಮೂರು ಏಕದಿನ ಪಂದ್ಯಗಳು ಆಗಸ್ಟ್ 18, 20 ಮತ್ತು 22ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿವೆ.

ಏಷ್ಯಾಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ , ರವಿಂಚದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications