2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುತ್ತಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಂಭಾವ್ಯ ಅಧ್ಯಕ್ಷ ಝಾಕಾ ಅಶ್ರಫ್ ಅವರು ಬುಧವಾರ ವಿರೋಧ ವ್ಯಕ್ತಪಡಿಸಿದ್ದರು.
ಇತ್ತೀಚಿನ ಬೆಳವಣಿಗೆಯಲ್ಲಿ, ಝಾಕಾ ಅಶ್ರಫ್ ತಮ್ಮ ಹಿಂದಿನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ ಮತ್ತು ಏಷ್ಯಾ ಕಪ್ ನಡೆಯುವುದನ್ನು ತಡೆಯುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ಮುಂದಿನ ಪಿಸಿಬಿ ಅಧ್ಯಕ್ಷರಾಗಿ ನಜಮ್ ಸೇಥಿ ಅವರ ಉತ್ತರಾಧಿಕಾರಿಯಾಗಲು ಝಾಕಾ ಅಶ್ರಫ್ ಸಜ್ಜಾಗಿದ್ದಾರೆ. ಬುಧವಾರ ಮಾಧ್ಯಮ ಸಂದರ್ಶನದಲ್ಲಿ ಅಶ್ರಫ್ ಅವರು ಹೈಬ್ರಿಡ್ ಮಾದರಿಯ ಏಷ್ಯಾ ಕಪ್ ಪಂದ್ಯಾವಳಿಯನ್ನು ಒಪ್ಪುವುದಿಲ್ಲ ಎಂದಿದ್ದರು.

ಇದು ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿ ಬಗ್ಗೆ ಮಾತುಕತೆ ಪುನರಾರಂಭಿಸಬೇಕೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವಾದವನ್ನು ಹುಟ್ಟುಹಾಕಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ""ಈಗಾಗಲೇ ನಿರ್ಧಾರವನ್ನು ಮಾಡಲಾಗಿದೆ, ಆದ್ದರಿಂದ ನಾವು ಅದರೊಂದಿಗೆ ನಡೆಯಬೇಕಾಗುತ್ತದೆ'' ಎಂದು ಝಾಕಾ ಅಶ್ರಫ್ ಹೇಳಿದರು.
"ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಈ ಸಂಪೂರ್ಣ ಹೈಬ್ರಿಡ್ ಮಾದರಿ ಪಂದ್ಯಾವಳಿಯು ಪಾಕಿಸ್ತಾನಕ್ಕೆ ಪ್ರಯೋಜನಕಾರಿಯಾಗಿಲ್ಲ. ಹೀಗಾಗಿ ನಾನು ಅದನ್ನು ಇಷ್ಟಪಡಲಿಲ್ಲ," ಎಂದು ಝಾಕಾ ಅಶ್ರಫ್ ತಿಳಿಸಿದ್ದಾರೆ.
"ಆತಿಥೇಯ ರಾಷ್ಟ್ರವಾಗಿರುವುದರಿಂದ ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಡಬೇಕು ಎಂದು ಖಚಿತಪಡಿಸಿಕೊಳ್ಳಲು ಪಾಕಿಸ್ತಾನ (ಪಿಸಿಬಿ) ಉತ್ತಮವಾಗಿ ಮಾತುಕತೆ ನಡೆಸಬೇಕಿತ್ತು. ಶ್ರೀಲಂಕಾ ಹೆಚ್ಚಿನ ಪಂದ್ಯಗಳನ್ನು ಆಯೋಜಿಸುತ್ತದೆ, ಪಾಕಿಸ್ತಾನ ಕೇವಲ ನಾಲ್ಕು ಪಂದ್ಯಗಳನ್ನು ಆಯೋಜಿಸುತ್ತದೆ. ಹೀಗೆ ಬಿಟ್ಟುಬಿಡುವುದು ನಮ್ಮ ದೇಶದ ಹಿತದೃಷ್ಟಿಯಿಂದ ಸರಿಯಲ್ಲ,"ಎಂದು ಪಿಸಿಬಿ ಸಂಭಾವ್ಯ ಅಧ್ಯಕ್ಷ ಝಾಕಾ ಅಶ್ರಫ್ ಅಭಿಪ್ರಾಪಟ್ಟರು.
"ಆದರೆ, ಈಗಾಗಲೇ ಏಷ್ಯಾ ಕಪ್ ಪಂದ್ಯಾವಳಿ ನಡೆಸುವ ನಿರ್ಧಾರವನ್ನು ಮಾಡಲಾಗಿದೆ. ಆದ್ದರಿಂದ ನಾವು ಅದರೊಂದಿಗೆ ಹೋಗಬೇಕಾಗಿದೆ. ನಾನು ನಿರ್ಬಂಧಿಸುವುದಿಲ್ಲ ಅಥವಾ ನಿರ್ಧಾರವನ್ನು ಒಪ್ಪಿಕೊಳ್ಳದಿರುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ, ಆದರೆ ಬದ್ಧತೆಯನ್ನು ಗೌರವಿಸುತ್ತೇನೆ. ಆದರೆ, ಮುಂದೆ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ದೇಶದ ಹಿತಾಸಕ್ತಿಗಾಗಿ ತೆಗೆದುಕೊಳ್ಳಲಾಗುವುದು," ಎಂದು ಝಾಕಾ ಅಶ್ರಫ್ ತಿಳಿಸಿದ್ದಾರೆ.
2023ರ ಏಷ್ಯಾ ಕಪ್ ಪಂದ್ಯಾವಳಿಯು ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದ ನಂತರ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿದರು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಂತರ ನಜಮ್ ಸೇಥಿ ಅವರ ಪ್ರಸ್ತಾಪವನ್ನು ಒಪ್ಪಿಕೊಂಡಿತು. ಈ ಮಾದರಿಯು ಪಂದ್ಯಾವಳಿಯ ಒಟ್ಟು 13 ಪಂದ್ಯಗಳಲ್ಲಿ ಪಾಕಿಸ್ತಾನವು ನಾಲ್ಕು ಪಂದ್ಯಗಳನ್ನು ಆಯೋಜಿಸಲಿದ್ದರೆ, ಶ್ರೀಲಂಕಾ ದೇಶವು ಫೈನಲ್ ಸೇರಿದಂತೆ 9 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನ ಕಾರಣದಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಸಲಾಗುತ್ತದೆ.
ಶ್ರೀಲಂಕಾ ಜೊತೆಗೆ, ಯುಎಇ ಸಂಭಾವ್ಯ ತಟಸ್ಥ ಸ್ಥಳವಾಗಿತ್ತು. ಆದರೆ, ಬಾಂಗ್ಲಾದೇಶವು ಸೆಪ್ಟೆಂಬರ್ನಲ್ಲಿ ಯುಎಇನಲ್ಲಿ ಕಠಿಣ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿತು. ಹಲವು ಸಭೆಗಳಲ್ಲಿ ಚರ್ಚೆಯ ನಂತರ, ಎರಡು ರಾಷ್ಟ್ರಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಲಹೆಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಪ್ಪಿಕೊಂಡಿತು.
ಝಾಕಾ ಅಶ್ರಫ್ ಅವರು ವೈಯಕ್ತಿಕವಾಗಿ ಏಷ್ಯಾ ಕಪ್ ಪಂದ್ಯಾವಳಿ ಬಗ್ಗೆ ಹೇಳಿಕೆಗಳನ್ನು ನೀಡಿದ್ದರೂ, ಪಾಕಿಸ್ತಾನ ಪ್ರಧಾನಿ ಅವರನ್ನು ಮತ್ತು ಸುಪ್ರೀಂ ಕೋರ್ಟ್ ವಕೀಲ ಮುಸ್ತಫಾ ರಾಮ್ಡೇ ಅವರನ್ನು ಪಿಸಿಬಿಯ ಆಡಳಿತ ಮಂಡಳಿಗೆ ಸೇರಲು ಆಯ್ಕೆ ಮಾಡಿದರು.
ಇದರ ಪರಿಣಾಮವಾಗಿ, ಅಶ್ರಫ್ ಝಾಕಾ ಅವರು ನಜಮ್ ಸೇಥಿಯ ಉತ್ತರಾಧಿಕಾರಿಯಾಗಿ ಪಿಸಿಬಿಯ ನೂತನ ಅಧ್ಯಕ್ಷರಾಗುವ ನಿರೀಕ್ಷೆಯಿದೆ. ಮತ್ತೊಂದು ಬಾರಿಗೆ ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ನಜಮ್ ಸೇಥಿ ಈ ಹಿಂದೆಯೇ ಹೇಳಿದ್ದರು.