
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಾಮ್, ಕೊರೊನಾವೈರಸ್ನಿಂದ ನಲುಗುತ್ತಿರುವ ಭಾರತಕ್ಕೆ ಪ್ರಾರ್ಥಿಸಿದ್ದಾರೆ. ಕೋವಿಡ್-19 ದ್ವಿತೀಯ ಅಲೆಯ ವೇಳೆ ಭಾರತದಲ್ಲಿ ಬಹಳಷ್ಟು ಮಂದಿ ಸೋಂಕಿಗೀಡಾಗಿದ್ದಾರೆ. ಹೀಗಾಗಿ ದೇಶಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಿಸುವ ಶಕ್ತಿ ಬರಲಿ ಎಂದು ಬಾಬರ್ ಕೋರಿದ್ದಾರೆ.
ಟ್ವೀಟ್ ಮಾಡಿರುವ ಬಾಬರ್ ಅಝಾಮ್, 'ಈ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿರುವ ಮಂದಿಗಾಗಿ ಪಾರ್ಥಿಸೋಣ. ಎಲ್ಲರೂ ಜೊತೆಯಾಗಿದ್ದು ಪ್ರಾರ್ಥಿಸಬೇಕಾದ ಸಮಯವಿದು. ನಮ್ಮ ಸುರಕ್ಷತೆಗೋಸ್ಕರವಾಗಿ ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ,' ಎಂದು ಬಾಬರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾವೈರಸ್ ಕಾರಣಕ್ಕಾಗಿ ಭಾರತ ಈಗ ವಿಶ್ವದ ಗಮನ ಸೆಳೆಯುತ್ತಿದೆ. ದೇಶದಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್ಗಳ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಎದುರಾಗಿದೆ. ಇತ್ತ ಕೊರೊನಾ ಸೋಂಕಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ.
ಭಾರತದಲ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ನಡೆಯುತ್ತಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಅನೇಕ ಆಟಗಾರರು ಹಿಂದೆ ಸರಿಯುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಡುವ ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಕೇನ್ ರಿಚರ್ಡ್ಸನ್, ರಾಜಸ್ಥಾನ್ನ ಆ್ಯಂಡ್ರ್ಯೂ ಟೈ, ಡೆಲ್ಲಿಯ ಆರ್ ಅಶ್ವಿನ್ ಐಪಿಎಲ್ನಿಂದ ದೂರ ಉಳಿಸಿದ್ದಾರೆ.