
ನವದೆಹಲಿ, ಏಪ್ರಿಲ್ 24: ಐಪಿಎಲ್ನಲ್ಲಿ ಫ್ರಾಂಚೈಸಿಗಳಿಗೆ ಮಾರ್ಗದರ್ಶಕರಾಗಿ ಮತ್ತು ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸದಸ್ಯರಾಗಿರುವ ವಿಚಾರಕ್ಕೆ ಸಂಬಂಧಿಸಿ ಸಂಘರ್ಷ ಹಿತಾಸಕ್ತಿ ಆರೋಪದ ಮೇರೆಗೆ ಭಾರತದ ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ಗೆ ಬಿಸಿಸಿಐ ಓಂಬುಡ್ಸ್ಮನ್ ಕಮ್ ಎಥಿಕ್ಸ್ ಆಫೀಸರ್ ಡಿಕೆ ಜೈನ್ ನೋಟಿಸ್ ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಮೆಂಟರ್ ಆಗಿದ್ದರೆ, ಲಕ್ಷ್ಮಣ್ ಕೂಡ ಸನ್ ರೈಸರ್ಸ್ ಹೈದರಾಬಾದ್ಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಅಧ್ಯಕ್ಷ, ಕ್ರಿಕೆಟ್ ಅಡ್ವೈಸರ್ ಕಮಿಟಿ ಸದಸ್ಯ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಾರ್ಗದರ್ಶಿ ಹೀಗೆ ತ್ರಿಪಾತ್ರ ನಿರ್ವಹಿಸಿದ್ದಕ್ಕಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಇದೇ ಆರೋಪ ಎದುರಿಸಿದ್ದರು.
ಈ ಮೂವರೂ ಮಾಜಿ ಕ್ರಿಕೆಟಿಗರು ಸಿಎಸಿಯಲ್ಲಿದ್ದಾಗ ಜುಲೈ 2017ರಂದು ರಾಷ್ಟ್ರೀಯ ತಂಡದ ಮುಖ್ಯಕೋಚ್ ಆಗಿ ರವಿ ಶಾಸ್ತ್ರಿ ಅವರನ್ನು ಆರಿಸಿದ್ದರು. ಅದೇ ಇವರ ಕೊನೆಯ ಸಭೆ. ನೋಟಿನ್ನಲ್ಲಿ ಜೈನ್, ತೆಂಡೂಲ್ಕರ್ ಮತ್ತು ಲಕ್ಷ್ಮಣ್ ಇಬ್ಬರೂ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿ ಏಪ್ರಿಲ್ 28ರ ಒಳಗಾಗಿ ಲಿಖಿತ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಿದ್ದಾರೆ ಎನ್ನಲಾಗಿದೆ.