
ಗ್ರೋಸ್-ಇಸ್ಲೆಟ್ (ಸೇಂಟ್ ಲೂಸಿಯಾ), ಜೂ. 18: ಸ್ವೀಟ್ ಬಳಸಿ ಬಾಲ್ ಟ್ಯಾಂಪರಿಂಗ್ ನಡೆಸಿದ ಆರೋಪವನ್ನು ಶ್ರೀಲಂಕಾ ನಾಯಕ ದಿನೇಶ್ ಚಂಡಿಮಾಲ್ ತಳ್ಳಿಹಾಕಿದ್ದಾರೆ. ಹಾಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಮುಕ್ತಾಯದ ಬಳಿಕ ನಡೆಯಲಿರುವ ವಿಚಾರಣೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾನುವಾರ ತಿಳಿಸಿದೆ.
'ಐಸಿಸಿ ನಿಯಮ ಉಲ್ಲಂಘಿಸಿರುವ ಆರೋಪವನ್ನು ದಿನೇಶ್ ಚಂಡಿಮಾಲ್ ನಿರಾಕರಿಸಿದ್ದಾರೆ. ಆದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸೇಂಟ್ ಲೂಸಿಯಾ ಟೆಸ್ಟ್ ಮುಕ್ತಾಯದ ಬಳಿಕ ಜಾವಗಲ್ ಶ್ರೀನಾಥ್ ನೇತೃತ್ವದ ಐಸಿಸಿ ಮ್ಯಾಚ್ ರೆಫರೀಗಳ ಸಮಿತಿ ನಡೆಸುವ ವಿಚಾರಣೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ' ಎಂದು ಐಸಿಸಿ ಹೇಳಿದೆ.
ಶುಕ್ರವಾರ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ನಾಯಕ ಚಂಡಿಮಾಲ್ ಅವರು ತನ್ನ ಎಡ ಕಿಸೆಯಿಂದ ಸಿಹಿ ತಿನಿಸೇನನ್ನೋ ತೆಗೆದು ಬಾಯಿಗೆ ಹಾಕಿಕೊಂಡಿದ್ದು, ಆಮೇಲೆ ಬಾಲ್ ಗೆ ಹಚ್ಚಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಅಂಪೈರ್ ಗಳು ಚಂಡಿಮಾಲ್ ಮೇಲೆ ಚೆಂಡು ವಿರೂಪದ ಆರೋಪ ಹೊರಿಸಿದ್ದರು.
2016ರಲ್ಲೂ ಇಂಥದ್ದೇ ವಿವಾದ ನಡೆದಿತ್ತು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ತಿನಿಸನ್ನು ಬಾಯಿಂದ ತೆಗೆದು ಚೆಂಡಿಗೆ ಹಚ್ಚಿದ್ದರು. ಇದೂ ವಿಡಿಯೋದಲ್ಲಿ ಸೆರೆಯಾಗಿತ್ತಲ್ಲದೆ ತಪ್ಪಿಗಾಗಿ ಡು ಪ್ಲೆಸಿಸ್ ಗೆ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡ ವಿಧಿಸಲಾಗಿತ್ತು.