
ಖಾಸಗಿ ನ್ಯೂಸ್ ಚಾನೆಲ್ ನಡೆಸಿದ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯ ವಿವಾದದ ನಂತರ, ಕೊನೆಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡ ಮತ್ತು ಬಿಸಿಸಿಐನ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಿದ ನಂತರ ಚೇತನ್ ಶರ್ಮಾ ಭಾರೀ ವಿವಾದ ಮೈಮೇಲೆಳೆದುಕೊಂಡಿದ್ದರು.
ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಬಿಸಿಸಿಐ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದು, ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ಬಿರುಕನ್ನು ಬಹಿರಂಗಗೊಳಿಸಿದ್ದರು.
ಇನ್ನು ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹಲವು ಆಟಗಾರರು ಶೇ.80ರಿಂದ 85ರಷ್ಟು ಫಿಟ್ ಆಗಿದ್ದರೂ ನಕಲಿ ಫಿಟ್ನೆಸ್ ಚುಚ್ಚುಮದ್ದು ಬಳಸುತ್ತಿದ್ದಾರೆ. ಇದರಿಂದ ಪ್ರಭಾವಿ ಆಟಗಾರರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಚೇತನ್ ಶರ್ಮಾ ಮಾತನಾಡಿದ್ದರು.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನ ನಂತರ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಲಾಗಿತ್ತು. ಆದರೆ, ಕಳೆದ ತಿಂಗಳು ಚೇತನ್ ಶರ್ಮಾ ಅವರನ್ನು ಮುಖ್ಯ ಆಯ್ಕೆಗಾರರಾಗಿ ಮರುನೇಮಕ ಮಾಡಲಾಗಿತ್ತು.

ಕಳೆದ ಮೂರು ದಿನಗಳಿಂದ ಹಿಂದೆ ನಡೆಸಲಾದ ವಿವಾದಾತ್ಮಕ ಕುಟುಕು ಕಾರ್ಯಾಚರಣೆಯ ನಂತರ, ಚೇತನ್ ಶರ್ಮಾರನ್ನು ವಜಾಗೊಳಿಸಲು ತೀವ್ರ ಒತ್ತಡ ಕೇಳಿಬಂದಿತ್ತು. ಶುಕ್ರವಾರದಂದು ಸ್ವತಃ ಚೇತನ್ ಶರ್ಮಾ ತಮ್ಮ ರಾಜೀನಾಮೆ ಪತ್ರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ರವಾನಿಸಿದ್ದು, ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಸ್ಟಿಂಗ್ ಆಪರೇಶನ್ನಲ್ಲಿ ಚೇತನ್ ಶರ್ಮಾ ಅವರು ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಡುವಿನ ಬಾಂಧವ್ಯ, ರೋಹಿತ್ ಶರ್ಮಾ ಅವರ ಟಿ20 ಕ್ರಿಕೆಟ್ ಭವಿಷ್ಯ ಮತ್ತು ಹಾರ್ದಿಕ್ ಪಾಂಡ್ಯ ಅವರು ಭವಿಷ್ಯದ ನಾಯಕ ಎಂಬ ಬಗ್ಗೆ ಬಹಿರಂಗಪಡಿಸಿದ್ದರು.
Chetan Sharma Sting: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಭಿನ್ನಾಭಿಪ್ರಾಯ ಬಿಚ್ಚಿಟ್ಟ ಚೇತನ್ ಶರ್ಮಾ
ಚೇತನ್ ಶರ್ಮಾ ಅವರ ರಾಜೀನಾಮೆಯಿಂದಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಅಂತಿಮ ಎರಡು ಪಂದ್ಯಗಳು ಮತ್ತು ಏಕದಿನ ಸರಣಿಗೆ ಆಯ್ಕೆ ಸಮಿತಿಯು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಕುಳಿತುಕೊಳ್ಳಬೇಕಿತ್ತು. ಭಾರತ ತಂಡದ ಆಯ್ಕೆ ಸಮಿತಿ ಸಭೆ ಇದೀಗ ಕಗ್ಗಂಟಾಗಿದೆ.
ಆಂತರಿಕ ವಿಚಾರಣೆ ಪೂರ್ಣಗೊಳ್ಳುವವರೆಗೆ ಶರ್ಮಾ ಸಭೆಗೆ ಹಾಜರಾಗದಂತೆ ಬಿಸಿಸಿಐ ನಿರ್ಬಂಧ ಹೇರುವ ಸಾಧ್ಯತೆ ಇದ್ದು, ಚೇತನ್ ಶರ್ಮಾರನ್ನು ಸಭೆಗೆ ಹಾಜರಾಗಲು ಅನುಮತಿ ನಿರಾಕರಿಸಿದರೆ, ಶಿವಸುಂದರ್ ದಾಸ್ ಹಂಗಾಮಿ ಅಧ್ಯಕ್ಷರಾಗುವ ಸಾಧ್ಯತೆ ಇದೆ.