ಕನ್ನಡಿಗ ಕೆ. ಗೌತಮ್ ಆಟಕ್ಕೆ ಅಪಾರ ಮೆಚ್ಚುಗೆ: ಅದ್ಭುತ ಆಟ ಎಂದರು ವಾರ್ನ್
ಜೈಪುರ, ಏಪ್ರಿಲ್ 23: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ರೋಚಕ ಗೆಲುವು ತಂದಿತ್ತ ಕನ್ನಡಿಗ ಕೆ. ಗೌತಮ್ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.
ತಂಡದ ಗೆಲುವಿಗೆ 17 ಎಸೆತಗಳಲ್ಲಿ 35 ರನ್ ಬೇಕಿದ್ದಾಗ ಕೆ. ಗೌತಮ್ ಕ್ರೀಸ್ಗೆ ಇಳಿದಿದ್ದರು. ತಂಡ ಆಗಲೇ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ತವರಿನ ಅಂಗಳದಲ್ಲಿ ಸತತ ಎರಡನೆಯ ಸೋಲು ಕಾಣುವ ಭೀತಿ ಎದುರಾಗಿತ್ತು. ಪ್ರಮುಖ ಬ್ಯಾಟ್ಸ್ಮನ್ಗಳೆಲ್ಲರೂ ವಿಕೆಟ್ ಒಪ್ಪಿಸಿದ್ದರಿಂದ ಮುಂಬೈ ತಂಡಕ್ಕೆ ಸುಲಭದ ಗೆಲುವು ಸಿಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದು ಕೆ. ಗೌತಮ್.
ಸಂಜು ಸ್ಯಾಮ್ಸನ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಆಟವಾಡಿ ರನ್ ಗತಿ ಹೆಚ್ಚಿಸಿದ್ದರೂ, ರಾಜಸ್ಥಾನ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಗೌತಮ್ ಬ್ಯಾಟಿಂಗ್. ಕೇವಲ 11 ಎಸೆತಗಳಲ್ಲಿ 33 ರನ್ ಬಾರಿಸಿದ ಗೌತಮ್ ಆಟದಲ್ಲಿ, 4 ಬೌಂಡರಿ ಮತ್ತು 2 ಸಿಕ್ಸರ್ಗಳು ಸೇರಿದ್ದವು. ಮುಂಬೈ ತೆಕ್ಕೆಗೆ ಜಾರಿದ್ದ ಪಂದ್ಯವನ್ನು ಮರಳಿ ತಮ್ಮೆಡೆಗೆ ಸೆಳೆದುಕೊಂಡ ಗೌತಮ್, ರಾಜಸ್ಥಾನ ತಂಡದ ಪರ ಹೀರೊ ಆದರು.
ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಶೇನ್ ವಾರ್ನ್, ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಸೇರಿದಂತೆ ಅನೇಕರು ಗೌತಮ್ ಆಟವನ್ನು ಕೊಂಡಾಡಿದ್ದಾರೆ.
ಅದ್ಭುತ ಆಟ: ವಾರ್ನ್ ಮೆಚ್ಚುಗೆ
ಗೌತಮ್ ಅಬ್ಬರದ ಆಟವನ್ನು ಕಂಡು ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ನಾಯಕ, ಹಾಲಿ ಮೆಂಟರ್ ಶೇನ್ ವಾರ್ನ್ ಖುಷಿಯಾಗಿದ್ದಾರೆ. ವೈಯಕ್ತಿಕ ಕೆಲಸಗಳ ಕಾರಣ ವಾರ್ನ್ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ. ಶೀಘ್ರದಲ್ಲಿಯೇ ಅವರು ಭಾರತಕ್ಕೆ ಬಂದು ರಾಜಸ್ಥಾನ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೌಲ್ಯ ಸಾಬೀತುಪಡಿಸಿಕೊಂಡ ಗೌತಮ್
ಕಳೆದ ಐಪಿಎಲ್ ಆವೃತ್ತಿಯಲ್ಲಿ 2 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದರೂ, ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ದೊರಕಿರಲಿಲ್ಲ. ಈ ಬಾರಿ ದೇಸಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಗಮನ ಸೆಳೆದಿದ್ದ ಗೌತಮ್, ರಾಜಸ್ಥಾನ ತಂಡಕ್ಕೆ ಬರೋಬ್ಬರಿ 6,20 ಕೋಟಿಗೆ ಹರಾಜಾಗಿದ್ದರು. ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು, ಮುಂಬೈ ವಿರುದ್ಧ ಸ್ಫೋಟಿಸುವ ಮೂಲಕ ತಮ್ಮ ಮೌಲ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಡಿಸದೆ ಇಡೀ ಟೂರ್ನಿಯಲ್ಲಿ ಬೆಂಚು ಕಾಯುವಂತೆ ಮಾಡಿದ್ದ ಮುಂಬೈ ತಂಡಕ್ಕೂ ಗೌತಮ್, ಉತ್ತರ ನೀಡಿದ್ದಾರೆ.

ಜೀವಮಾನದ ಅನುಭವ
ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಅರ್ಧಶತಕ ಗಳಿಸಿ ಗೆಲುವಿನ ಹಾದಿಯತ್ತ ಕೊಂಡೊಯ್ದ ಸಂಜು ಸ್ಯಾಮ್ಸನ್, ಈ ಪಂದ್ಯ ಗೌತಮ್ ಮತ್ತು ನಮ್ಮೆಲ್ಲರಿಗೂ ಜೀವಮಾನದ ವಿಶಿಷ್ಟ ಅನುಭವ. ಆ ಸಮಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದರು ಎಂದು ಹೇಳಿದ್ದಾರೆ. ಪಂದ್ಯದ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್ ಅವರೇ. ಆದರೆ ತಂಡದ ಗೆಲುವಿನಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯ ಎಂದು ಸಂಜು ಹೇಳಿದ್ದಾರೆ.

ಯಾರೀತ ಎಂದು ಕೇಳಿದ್ದರು ಲಿಯಾನ್
ಕಳೆದ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತಕ್ಕೆ ಬಂದಿದ್ದಾಗ ಬೋರ್ಡ್ ಪ್ರೆಸಿಡೆಂಟ್ ಇಲೆವೆನ್ ತಂಡದ ಎದುರು ಅಭ್ಯಾಸ ಪಂದ್ಯವಾಡಿತ್ತು. ಆಗ ಪಂದ್ಯದ ಮೂರನೇ ದಿನ ಶ್ರೇಯಸ್ ಅಯ್ಯರ್ ಜತೆಗೂಡಿದ ಗೌತಮ್, ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದರು. ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ನಥಾನ್ ಲಿಯಾನ್ ಬೌಲಿಂಗ್ನಲ್ಲಿ ನಾಲ್ಕು ಸಿಕ್ಸರ್ಗಳನ್ನು ಚಚ್ಚಿದ್ದರು. 68 ಎಸೆತಗಳಲ್ಲಿ 74 ರನ್ ಬಾರಿಸಿದ್ದರು. ಆಗ ಲಿಯಾನ್, ನಾನ್ಸ್ಟ್ರೇಕ್ನಲ್ಲಿದ್ದ ಶ್ರೇಯಸ್ ಅಯ್ಯರ್ಗೆ ಯಾರೀತ? ಎಂದು ಕೇಳಿದ್ದರು. ಇದನ್ನು ಸ್ವತಃ ಶ್ರೇಯಸ್ ಅಯ್ಯರ್ ಬಹಿರಂಗಪಡಿಸಿದ್ದರು. ಈಗ ಗೌತಮ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.
ಬಿಂಬಿಸಿಕೊಳ್ಳುವ ಅವಕಾಶ
ಕೃಷ್ಣಪ್ಪ ಗೌತಮ್ ಅವರಂತಹ ಆಟಗಾರರು ಆರೇಳು ವರ್ಷಗಳಿಂದ ದೇಸಿ ಕ್ರಿಕೆಟ್ನಲ್ಲಿ ಅನಾಮಧೇಯರಾಗಿ ಉಳಿದಿದ್ದಾರೆ. ಐಪಿಎಲ್ನಿಂದ ನನಗೆ ಇಷ್ಟವಾಗುತ್ತಿರುವ ಅಂಶವೇ ಇದು. 30 ವರ್ಷವಾಗುವ ವೇಳೆಗೆ ಅವರು ಭಾರತ ತಂಡಕ್ಕೆ ಆಡುವ ಕನಸು ಬಹುತೇಕ ಕಮರಿ ಹೋಗುತ್ತದೆ. ಈ ದೊಡ್ಡ ಹಂತದಲ್ಲಿ ಅವರಿಗೆ ಮಿಂಚುವ ಅವಕಾಶ ದೊರಕುತ್ತಿದೆ ಎಂದು ರೋಹಿತ್ ಪ್ರಧಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications