ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಮತ್ತು ನಾಲ್ಕು ಬಾರಿಯ ಚಾಂಪಿಯನ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇದೀಗ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್ ಪರಾಗ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಪ್ರಶ್ನಿಸಿದ್ದಾರೆ. ರಿಯಾನ್ ಪರಾಗ್ ಐಪಿಎಲ್ 2023ರಲ್ಲಿ ಹೇಳಿಕೊಳ್ಳುವಷ್ಟು ಪ್ರಭಾವಶಾಲಿಯಾಗಿಲ್ಲ. ಆಡಿದ ಮೂರು ಇನ್ನಿಂಗ್ಸ್ಗಳಲ್ಲಿ 117.24ರ ಸ್ಟ್ರೈಕ್ರೇಟ್ನಲ್ಲಿ ಕೇವಲ 34 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 20 ರನ್ ಆಗಿದೆ.

2022ರ ಐಪಿಎಲ್ನಲ್ಲಿ ಫೈನಲ್ ಹಂತಕ್ಕೆ ತಲುಪಿದ್ದ ರಾಜಸ್ಥಾನ ರಾಯಲ್ಸ್ ತಂಡ ಅದೇ ಪ್ರದರ್ಶನವನ್ನು ಪುನರಾವರ್ತಿಸಲು ಎದುರು ನೋಡುತ್ತಿದ್ದು, ಆಕಾಶ್ ಚೋಪ್ರಾ ಅವರ ಪ್ರಕಾರ, ಟಿ20 ಕ್ರಿಕೆಟ್ನಲ್ಲಿ ನಾಲ್ಕನೇ ಕ್ರಮಾಂಕವು ನಿರ್ಣಾಯಕವಾಗಿದೆ. ಅದು ಇನ್ನಿಂಗ್ಸ್ ನಿರ್ಮಿಸುವ ಮತ್ತು ಸ್ಕೋರ್ ಬೋರ್ಡ್ನಲ್ಲಿ ರನ್ ಕಲೆಹಾಕುವ ಜವಾಬ್ದಾರಿಯನ್ನು ಹೊಂದಿದೆ ಎಂದಿದ್ದಾರೆ.
"ರಾಜಸ್ಥಾನ ರಾಯಲ್ಸ್ ತಂಡ ಇನ್ನೂ ರಿಯಾನ್ ಪರಾಗ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುತ್ತಿದೆ. ಆತ ಅಲ್ಲಿ ಏಕೆ ಆಡುತ್ತಿದ್ದಾನೆ ಎಂದು ರಾಜಸ್ಥಾನ ತಂಡಕ್ಕೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಒಂದು ಓವರ್ನಲ್ಲಿ ನಾಲ್ಕು ಸಿಕ್ಸರ್ ಬಾರಿಸುತ್ತೇನೆ ಎಂದು ಟ್ವೀಟ್ ಕೂಡ ಮಾಡಿದ್ದಾರೆ. ಮುಂದೊಂದು ದಿನ ರಿಯಾನ್ ಬಾರಿಸುವುದು ಖಚಿತ. ಈ ಐಪಿಎಲ್ನಲ್ಲಿ ಇಷ್ಟು ಎಸೆತಗಳಲ್ಲಿ ಸಿಕ್ಸರ್ ಬಾರಿಸುವುದರೊಳಗೆ ಸಂಜೆಯಾಗುತ್ತದೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಲೇವಡಿ ಮಾಡಿದ್ದಾರೆ.

ಇದೇ ವೇಳೆ, ರಾಜಸ್ಥಾನ ರಾಯಲ್ಸ್ ತಂಡದ ಧ್ರುವ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರು ರಿಯಾನ್ ಪರಾಗ್ ಅವರಿಗಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಆಕಾಶ್ ಚೋಪ್ರಾ ಗಮನಸೆಳೆದರು.
IPL 2023: ಸಿಎಸ್ಕೆ ಬತ್ತಳಿಕೆಗೆ ಸೇರ್ಪಡೆಯಾದ ಶ್ರೀಲಂಕಾದ ಮಾರಕ ಜೋಡಿ ಅಸ್ತ್ರ; ಎಂಸ್ ಧೋನಿ ಫುಲ್ ಖುಷ್!
"ಉತ್ತಮವಾಗಿ ಆಡುತ್ತಿರುವ ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆದರೆ, ಕಳಪೆಯಾಗಿರುವ ರಿಯಾನ್ ಪರಾಗ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ರನ್ ಗಳಿಸಲಿಲ್ಲವೆಂದು ದೇವದತ್ ಪಡಿಕ್ಕಲ್ರನ್ನು ಕ್ಷಣಾರ್ಧದಲ್ಲಿ ಕೈಬಿಟ್ಟಿದ್ದೀರಿ. ಆ ಒಬ್ಬ ಆಟಗಾರನಿಗಾಗಿ ರಾಜಸ್ಥಾನ ತಂಡ ಅಂಟಿಕೊಂಡಿದೆ. ರಿಯಾನ್ ಪರಾಗ್ ಮೇಲೆ ನಂಬಿಕೆಯ ಹೂಡಿಕೆ ಇದೆ," ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.

ರಾಜಸ್ಥಾನ ರಾಯಲ್ಸ್ ಸಂಭಾವ್ಯ ಆಡುವ 11ರ ಬಳಗ: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್.