ಬುಧಚಾರ, ಆಗಸ್ಟ್ 30ರಂದು ಪಾಕಿಸ್ತಾನದ ಮುಲ್ತಾನ್ನಲ್ಲಿ ಚಾಲನೆಗೊಳ್ಳಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಹಾಲಿ ಚಾಂಪಿಯನ್ ಶ್ರೀಲಂಕಾ ಕೊನೆಗೂ ತನ್ನ ತಂಡವನ್ನು ಪ್ರಕಟಿಸಿದೆ.
ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್)ನಲ್ಲಿ ಅಗ್ರ ರನ್ ಸ್ಕೋರರ್ ಮತ್ತು ಅಗ್ರ ವಿಕೆಟ್ ಟೇಕರ್ ಆಗಿರುವ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ದುಷ್ಮಂತ ಚಮೀರ, ಲಹಿರು ಮಧುಶಂಕ ಮತ್ತು ಲಹಿರು ಕುಮಾರ ಅವರಂತಹ ಆಟಗಾರರ ಜೊತೆಗೆ ಪ್ರಮುಖ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.

ಹೀಗಾಗಿ, ಶ್ರೀಲಂಕಾ ತಂಡದ ಬೌಲಿಂಗ್ ಘಟಕವು ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ. ಆದರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರನ್ನು ಹೊಂದಿದೆ.
ಗಾಯಗೊಂಡಿರುವ ಆಟಗಾರರ ಸ್ಥಾನಕ್ಕೆ ಬಿನೂರ ಫೆರ್ನಾಂಡೋ ಮತ್ತು ಪ್ರಮೋದ್ ಮದುಶನ್ ಅವರು ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಥೀಶ ಪತಿರಾನ ಮತ್ತು ಕಸುನ್ ರಜಿತಾ ಮೇಲೆ ಹೆಚ್ಚಿನ ಅವಲಂಬಿತವಾಗಿದೆ.
ಇದೇ ವೇಳೆ ಕುಸಾಲ್ ಪೆರೇರಾ ಎರಡು ವರ್ಷಗಳ ಅಂತರದ ನಂತರ ಶ್ರೀಲಂಕಾ ತಂಡದ ಭಾಗವಾಗಿದ್ದಾರೆ. ಆದರೆ, ಸ್ಟಾರ್ ಕ್ರಿಕೆಟಿಗ ಸದ್ಯ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆರಂಭಿಕ ಪಂದ್ಯಗಳಲ್ಲಿ ಅವರ ಲಭ್ಯತೆ ಅನುಮಾನವೆನಿಸಿದೆ.

ಇನ್ನು, ಕುಸಾಲ್ ಪೆರೇರಾ ಪುನರಾಗಮನ ಶ್ರೀಲಂಕಾ ತಂಡಕ್ಕೆ ಹೆಚ್ಚು ಅಗತ್ಯವಿರುವ ಅನುಭವವನ್ನು ತರಲಿದ್ದಾರೆ ಮತ್ತು ಗುಣಮಟ್ಟದ ಪ್ರದರ್ಶನಗಳೊಂದಿಗೆ ಮುಂಬರುವ ಏಕದಿನ ವಿಶ್ವಕಪ್ಗಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಆಲ್ರೌಂಡರ್ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಆಡಲಿದೆ.
ನಿವೃತ್ತಿ ವಾಪಸ್ ಪಡೆದ ಹೊರತಾಗಿಯೂ ಖಾಯಂ ನಾಯಕ ತಮೀಮ್ ಇಕ್ಬಾಲ್ ಅವರ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶವು ಪಂದ್ಯಾವಳಿಗೆ ಉತ್ತಮ ತಂಡವನ್ನು ಘೋಷಿಸಿದೆ. ಆದರೆ, ಸ್ವಲ್ಪ ಅನುಭವಿ ಆಟಗಾರರ ಕೊರತೆಯಿದೆ.
ಇನ್ನು ಆಲ್ರೌಂಡರ್ ಶಕೀಬ್ ಅಲ್ ಹಸನ್ ನಾಯಕತ್ವದಲ್ಲಿ ಬಾಂಗ್ಲಾದೇಶ ತಂಡವು ತಮ್ಮ ಗೆಲುವಿನ ಅವಕಾಶಗಳ ಬಗ್ಗೆ ವಿಶ್ವಾಸ ಹೊಂದಿದೆ. ಏಷ್ಯಾ ಕಪ್ ಪಂದ್ಯಾವಳಿ ಸೂಪರ್ 4ಗೆ ಅರ್ಹತೆ ಪಡೆಯುವ ಗುರಿಯನ್ನು ಹೊಂದಿದೆ.
ಇತ್ತ ಹಾಲಿ ಚಾಂಪಿಯನ್ ಶ್ರೀಲಂಕಾ ಕೂಡ ಅದೇ ಗುರಿಯನ್ನು ಹೊಂದಿದ್ದು, ತಮ್ಮ ಲೀಗ್ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲಿದೆ. ಆದರೆ ತಮ್ಮ ತವರು ಮೈದಾನದಲ್ಲಿ ಸೂಪರ್ 4 ಪಂದ್ಯಗಳನ್ನು ಆಡುತ್ತಾರೆ. ಹೀಗಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆದು ಮತ್ತೊಮ್ಮೆ ಪ್ರಶಸ್ತಿ ಮೇಲೆ ಕಣ್ಣಿಡುವುದು ಗುರಿಯಾಗಿದೆ.
ದಸುನ್ ಶನಕ (ನಾಯಕ), ಪಾಥುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಜನಿತ್ ಪೆರೆರಾ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ ತೀಕ್ಷಣ, ದುನಿತ್ ವೆಲ್ಲಾಲಗೆ, ಮಥೀಶ ಪತಿರಾನ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫೆರ್ನಾಂಡೋ, ಪ್ರಮೋದ್ ಮಧುಶನ್.