ಕಲಬುರಗಿ, ಏ.6: ಕರ್ನಾಟಕದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೇನು ಕಡಿಮೆ ಇಲ್ಲ. ಸತತ ಎರಡು ಬಾರಿ ವಿನಯ್ ಕುಮಾರ್ ಪಡೆ ರಣಜಿ ಗೆದ್ದ ಸಾಧನೆ ಮಾಡಿದೆ. ಆದರೆ, ಅನೇಕ ಪ್ರತಿಭಾವಂತರಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಆಟಗಾರರಿಗೆ ಸೂಕ್ತ ಸ್ಥಾನ ಸಿಗುತ್ತಿಲ್ಲ ಎಂಬ ಕೊರಗಿದೆ. ಇದು ಈಗ ಹೆಚ್ಚುವರಿ ರಣಜಿ ತಂಡಕ್ಕಾಗಿ ಬೇಡಿಕೆ ಹುಟ್ಟಿಸಿದೆ.
ಹೈದರಾಬಾದ್ -ಕರ್ನಾಟಕ ವಿಭಾಗದ ಪ್ರತಿಭೆಗಳಿಗೆ ಸೂಕ್ತ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಕರ್ನಾಟಕಕ್ಕೆ ಎರಡು ರಣಜಿ ತಂಡ ಬೇಕು ಎಂದು ಕಲಬುರಗಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಆಗ್ರಹಿಸಿದೆ. [ಸ್ಪಿನ್ ಚತುರ ಗದಗಿನ ಜೋಶಿ]
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ)ಗೆ ಈ ಬಗ್ಗೆ ಹೈದರಾಬಾದ್ -ಕರ್ನಾಟಕ ವಿಭಾಗದ ಕ್ರಿಕೆಟ್ ಸಂಸ್ಥೆ ಅಧಿಕೃತ ಪತ್ರ ಬರೆದು ಮನವಿ ಮಾಡಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎಸ್. ರಾಜಶೇಖರ್, ಈ ರೀತಿ ಪ್ರತ್ಯೇಕ ತಂಡ ಹೊಂದಲು ರಣಜಿಯಲ್ಲಿ ಅವಕಾಶವಿದೆ .ಆಂಧ್ರಪ್ರದೇಶ ವಿಭಜನೆಯಾಗುವುದಕ್ಕೂ ಮೊದಲೇ ಹೈದರಾಬಾದ್ ಹಾಗೂ ಆಂಧ್ರಪ್ರದೇಶ ತಂಡಗಳು ಕ್ರಿಕೆಟ್ ಆಡಿವೆ. ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳಿವೆ. ಇದೇ ರೀತಿ ರಾಜ್ಯದಿಂದಲೂ ಎರಡು ತಂಡ ಆಡಿಸುವುದಕ್ಕೆ ಮಾನ್ಯತೆ ಸಿಗಬೇಕಿದೆ. [ಗುಂಡಪ್ಪ ವಿಶ್ವನಾಥ್ ದಾಖಲೆ ಮುರಿದ ಕರುಣ್]
ಸಂವಿಧಾನದ ಪ್ರಕಾರ 371ವಿಧಿ ಅನ್ವಯ ಹೈದರಾಬಾದ್- ಕರ್ನಾಟಕ ಪ್ರಾಂತ್ಯಕ್ಕೆ ವಿಶೇಷ ಸ್ಥಾನ ಮಾನ ಸಿಗಬೇಕಿದೆ. ಇದೆಲ್ಲ ಸಾಧ್ಯವಾಗಬೇಕಾದರೆ ಪ್ರತ್ಯೇಕ ತಂಡದ ಅಗತ್ಯವಾಗಿದೆ ಎಂದರು.
ಈ ಬಗ್ಗೆ ಕೆಎಸ್ ಸಿಎ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಮಂಡಿಸಿ ಚರ್ಚಿಸಲಾಗುವುದು. ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗೆ ಈ ಬಗ್ಗೆ ತಿಳಿಸಲಾಗುವುದು ಎಂದು ಪಾಟೀಲ್ ಹೇಳಿದರು. [ತಮಿಳುನಾಡು ಬಗ್ಗು ಬಡಿದು ಟ್ರೋಫಿ ಎತ್ತಿದ ಕರ್ನಾಟಕ]

ಈ ಬಾರಿ ರಣಜಿ ವಿಜೇತ ತಂಡ : ಆರ್. ವಿನಯ್ ಕುಮಾರ್, ಮನೀಷ್ ಪಾಂಡೆ (ಉಪನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಆರ್. ಸಮರ್ಥ್,ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಎಚ್.ಎಸ್. ಶರತ್.
ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್, ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಮ್ಯಾನೇಜರ್: ಬಿ ಸಿದ್ದರಾಮು.
ರಾಜ್ಯಕ್ಕೆ ಎರಡು ತಂಡಗಳು ಸಿಕ್ಕರೆ ಅನೇಕ ಪ್ರತಿಭಾವಂತರಿಗೆ ಅವಕಾಶ ಸಿಗುತ್ತದೆ. ಕರ್ನಾಟಕದೆಲ್ಲೆಡೆ ಮೈದಾನಗಳು, ಕ್ರಿಕೆಟ್ ಅಸೋಸಿಯೇಷನ್ ಹಾಗೂ ಆಟಗಾರರಿಗೆ ಬೇಕಾದ ಮೂಲ ಸೌಕರ್ಯ ಕೂಡಾ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. (ಒನ್ ಇಂಡಿಯಾ ಸುದ್ದಿ)