ಮುಂಬೈ, ಮಾ.12: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಣಜಿ ಅಂತಿಮ ಹಣಾಹಣಿಯಲ್ಲಿ ತಮಿಳುನಾಡು ತಂಡವನ್ನು ಬಗ್ಗು ಬಡಿದು ಕರ್ನಾಟಕ ತಂಡ ರಣಜಿ ಚಾಂಪಿಯನ್ ಎನಿಸಿಕೊಂಡಿದೆ.
ಸತತ ಎರಡನೇ ಬಾರಿ ವಿನಯ್ ಕುಮಾರ್ ನೇತೃತ್ವದ ತಂಡ ರಣಜಿ ಚಾಂಪಿಯನ್ ಆಗಿದ್ದಾರೆ. ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಇನ್ನಿಂಗ್ಸ್ ಹಾಗೂ 217 ರನ್ ಗಳ ಭಾರಿ ಅಂತರದಿಂದ ಸೋಲಿಸಿದ ಕರ್ನಾಟಕದ ಕ್ರಿಕೆಟ್ ಕಲಿಗಳು ವಿಜಯೋತ್ಸವ ಆಚರಿಸಿದ್ದಾರೆ.
626ರನ್ ಗುರಿ ಬೆನ್ನು ಹತ್ತಿದ ತಮಿಳುನಾಡು ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಅಂತಿಮ ದಿನದಂದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ತಮಿಳುನಾಡು ಪರ ವಿಜಯ್ ಶಂಕರ್, ದಿನೇಶ್ ಕಾರ್ತಿಕ್ ಶತಕ ಹಾಗೂ ಬಾಬಾ ಅಪರಾಜಿತ್ ಅರ್ಧಶತಕ ನೆರವಿನಿಂದ ಒಳ್ಳೆ ಚೇಸ್ ಮಾಡಿದರೂ ವಿನಯ್ ಪಡೆ ಬೌಲಿಂಗ್ ದಾಳಿಗೆ ತಕ್ಕ ಉತ್ತರ ನೀಡಲಾಗದೆ 411ಕ್ಕೆ 9 ವಿಕೆಟ್ ಕಳೆದುಕೊಂಡು ಸೊಲೊಪ್ಪಿಕೊಂಡಿತು. ಪ್ರಶಾಂತ್ ಪರಮೇಶ್ವರನ್ ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಲಿಲ್ಲ. [ಗುಂಡಪ್ಪ ವಿಶ್ವನಾಥ್ ದಾಖಲೆ ಮುರಿದ ಕರುಣ್]

ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 762 (ಕೆಎಲ್ ರಾಹುಲ್ 188, ಕರುಣ್ ನಾಯರ್ 328, ವಿನಯ್ ಕುಮಾರ್ 105*)
ತಮಿಳುನಾಡು 134 (ವಿನಯ್ ಕುಮಾರ್ 34/5) ಹಾಗೂ 411 (ವಿಜಯ್ ಶಂಕರ್ 103, ದಿನೇಶ್ ಕಾರ್ತಿಕ್ 120, ಶ್ರೇಯಸ್ ಗೋಪಾಲ್ 4/126)
ಪಂದ್ಯ ಶ್ರೇಷ್ಠ: ತ್ರಿಶತಕ ವೀರ ಕರುಣ್ ನಾಯರ್.
ವಿಜೇತ ತಂಡ: ಆರ್. ವಿನಯ್ ಕುಮಾರ್, ಮನೀಷ್ ಪಾಂಡೆ (ಉಪನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಆರ್. ಸಮರ್ಥ್,ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಎಚ್.ಎಸ್. ಶರತ್. [ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್]
ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಮ್ಯಾನೇಜರ್: ಬಿ ಸಿದ್ದರಾಮು

ಡಿ.7, 2014ರಂದು ಆರಂಭವಾದ ಕರ್ನಾಟಕದ ರಣಜಿ ಸೀಸನ್ ಆರಂಭವಾಗಿತ್ತು. ತಮಿಳುನಾಡಿನ ವಿರುದ್ಧ ಮೊದಲ ಪಂದ್ಯದಲ್ಲಿ 285 ರನ್ ಬೃಹತ್ ಜಯ ದಾಖಲಿಸಿದ್ದ ಕರ್ನಾಟಕ ಫೈನಲ್ ನಲ್ಲೂ ಭಾರಿ ಅಂತರದ ಗೆಲುವು ದಾಖಲಿಸಿ ಟ್ರೋಫಿ ಎತ್ತಿದೆ. ಕೋಚ್ ಗಳಾದ 'ಜ್ಯಾಕ್' ಹಾಗೂ 'ಮ್ಯಾಕ್' ಮತ್ತೊಮ್ಮೆ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
1995-96ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಕರ್ನಾಟಕ ಇನಿಂಗ್ಸ್ ಮುನ್ನಡೆ ಪಡೆದು ಟ್ರೋಫಿ ಜಯಿಸಿತ್ತು. ಈಗ 19 ವರ್ಷಗಳ ಬಳಿಕ ಫೈನಲ್ನಲ್ಲಿ ಮತ್ತೊಮ್ಮೆ ಗೆಲುವು ಗಳಿಸಿದೆ.
ಸುಮಾರು 27 ಪಂದ್ಯಗಳು ಅಜೇಯವಾಗಿ ಉಳಿದು 14ನೇ ಬಾರಿ ರಣಜಿ ಫೈನಲ್ ಪ್ರವೇಶಿಸಿದ ವಿಜಯ್ ಪಡೆ 8ನೇ ಬಾರಿಗೆ ಚಾಂಪಿಯನ್ ಎನಿಸಿದೆ. ಕರ್ನಾಟಕ ತಂಡಕ್ಕೆ ಒನ್ ಇಂಡಿಯಾದಿಂದ ಅಭಿನಂದನೆಗಳು
ಒನ್ ಇಂಡಿಯಾ ಸುದ್ದಿ