2023ರ ದೇವಧರ್ ಟ್ರೋಫಿ ಫೈನಲ್ ಹಂತಕ್ಕೆ ತಲುಪಲು ಪಶ್ಚಿಮ ವಲಯ ತಂಡದ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪೂರ್ವ ವಲಯ ತಂಡ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತು.
ಮಂಗಳವಾರ, ಆಗಸ್ಟ್ 1ರಂದು ಪುದುಚೇರಿಯಲ್ಲಿ ನಡೆದ ತಮ್ಮ ಕೊನೆಯ ರೌಂಡ್-ರಾಬಿನ್ ಗುಂಪು ಹಂತದ ಪಂದ್ಯದಲ್ಲಿ ಪೂರ್ವ ವಲಯ ತಂಡವು ಪಶ್ಚಿಮ ವಲಯ ತಂಡವನ್ನು 157 ರನ್ಗಳಿಂದ ಮಣಿಸಿತು.

ಪೂರ್ವ ವಲಯ ಮತ್ತು ಪಶ್ಚಿಮ ವಲಯ ತಂಡಗಳಿಗೆ 50 ಓವರ್ಗಳ ದೇವಧರ್ ಟ್ರೋಫಿ ದೇಶೀಯ ಪಂದ್ಯಾವಳಿಯಲ್ಲಿ ಫೈನಲ್ಗೆ ಪ್ರವೇಶಿಸುವ ಅವಕಾಶವನ್ನು ಪಡೆದುಕೊಂಡಿದ್ದವು. ಏಕೆಂದರೆ, ಹಿಂದಿನ 4 ಪಂದ್ಯಗಳಿಂದ ತಲಾ 12 ಅಂಕ ಗಳಿಸಿದ್ದ ಎರಡೂ ತಂಡಗಳಿಗೆ ಒತ್ತಡವಿತ್ತು.
ಆದರೆ, ಪೂರ್ವ ವಲಯ ತಂಡದ ರಿಯಾನ್ ಪರಾಗ್ ಅವರ ಸತತ ಎರಡನೇ ಶತಕ ಮತ್ತು ಮಣಿಶಂಕರ್ ಮುರಾಸಿಂಗ್ ಅವರ 5 ವಿಕೆಟ್ ಗೊಂಚಲು ಪಶ್ಚಿಮ ವಲಯ ತಂಡವನ್ನು ಸೋಲಿಸಲು ನೆರವಾಯಿತು ಹಾಗೂ ಫೈನಲ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಗುರುವಾರ, ಆಗಸ್ಟ್ 3ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡವು ಮಯಾಂಕ್ ಅಗರ್ವಾಲ್ ನಾಯಕತ್ವದ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.
2023ರ ದೇವಧರ್ ಟ್ರೋಫಿ ಪಂದ್ಯಾವಳಿಯಲ್ಲಿ ರಿಯಾನ್ ಪರಾಗ್ ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿ, ಸ್ಫೋಟಕ ಬ್ಯಾಟಿಂಗ್ ಪರಾಕ್ರಮ ತೋರಿಸಿದರು. ಕೇವಲ 68 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸಮೇತ ಅಜೇಯ 102 ರನ್ ಗಳಿಸಿದರು. ಪಶ್ಚಿಮ ವಲಯಕ್ಕೆ 320 ರನ್ಗಳ ಸವಾಲಿನ ಗುರಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಮ್ಮ ಅಗ್ರ ಮೂವರು ಬ್ಯಾಟರ್ಗಳ ಅಭಿಮನ್ಯು ಈಶ್ವರನ್ (38 ರನ್), ಉತ್ಕರ್ಷ್ ಸಿಂಗ್ (50 ರನ್) ಮತ್ತು ವಿರಾಟ್ ಸಿಂಗ್ (42 ರನ್) ಉತ್ತಮ ಆರಂಭದ ಹೊರತಾಗಿಯೂ ಪೂರ್ವ ವಲಯ ತಂಡವು 157 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಆದರೆ, 6ನೇ ಕ್ರಮಾಂಕದಲ್ಲಿ ಬಂದ ರಿಯಾನ್ ಪರಾಗ್ ಕೇವಲ 68 ಎಸೆತಗಳಲ್ಲಿ 102 ರನ್ ಗಳಿಸಿದರು. ಅವರಿಗೆ 47 ಎಸೆತಗಳಲ್ಲಿ 53 ರನ್ ಗಳಿಸಿದ ವಿಕೆಟ್ ಕೀಪರ್ ಕುಶಾಗ್ರ ಅವರು ಸಾಥ್ ನೀಡಿದರು.
ರಿಯಾನ್ ಪರಾಗ್ ಅವರ ಬ್ಯಾಟಿಂಗ್ ಪ್ರದರ್ಶನಕ್ಕೆ ಬೆಂಬಲವಾಗಿ ಮತ್ತೊಬ್ಬ ಉದಯೋನ್ಮುಖ ತಾರೆ ಮಣಿಶಂಕರ್ ಮುರಾಸಿಂಗ್ ತಮ್ಮ ಏಳು ಓವರ್ಗಳ ಕೋಟಾದಲ್ಲಿ ಕೇವಲ 28 ರನ್ಗಳನ್ನು ನೀಡಿ 5 ಪ್ರಮುಖ ವಿಕೆಟ್ಗಳನ್ನು ಪಡೆದರು. ಈ ಮೂಲಕ ಪಶ್ಚಿಮ ವಲಯವನ್ನು ಕೇವಲ 162 ರನ್ಗಳಿಗೆ ಕಟ್ಟಿಹಾಕುವಲ್ಲಿ ಸಹಕಾರಿಯಾದರು.
ಪ್ರತ್ಯುತ್ತರವಾಗಿ, ಪಶ್ಚಿಮ ವಲಯ ತಂಡದ ಚೇಸಿಂಗ್ನಲ್ಲಿ ವಿಕೆಟ್ ಕೀಪರ್ ಹಾರ್ವಿಕ್ ದೇಸಾಯಿ ಏಕಾಂಗಿ ಹೋರಾಟ ನಡೆಸಿದರು. ಹಾರ್ವಿಕ್ ದೇಸಾಯಿ 92 ಎಸೆತಗಳಲ್ಲಿ 13 ಬೌಂಡರಿ ಮತ್ತ 2 ಸಿಕ್ಸರ್ ಸಮೇತ 92 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳು ಸಾಥ್ ನೀಡಲು ವಿಫಲರಾದರು.
ತಮ್ಮ ಹಿಂದಿನ ಪಂದ್ಯದಲ್ಲಿ 83 ರನ್ ಬಾರಿಸಿದ್ದ ಶಿವಂ ದುಬೆ ಸೊನ್ನೆ ಸುತ್ತಿದರೆ, ರಾಹುಲ್ ತ್ರಿಪಾಠಿ ಕೂಡ ಯಾವುದೇ ರನ್ ಗಳಿಸಲು ವಿಫಲರಾದರು.