ಭಾನುವಾರ, ಜುಲೈ 30ರಂದು ಪುದುಚೇರಿಯಲ್ಲಿ ನಡೆದ 2023ರ ದೇವಧರ್ ಟ್ರೋಫಿ ಪಂದ್ಯಾವಳಿಯ ರೋಚಕ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಪೂರ್ವ ವಲಯ ತಂಡದ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ದಕ್ಷಿಣ ವಲಯ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಾಯಿ ಸುದರ್ಶನ್ ತಲಾ ಅರ್ಧಶತಕ ಬಾರಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಪೂರ್ವ ವಲಯ ನೀಡಿದ್ದ 230 ರನ್ಗಳ ಗುರಿಯನ್ನು ದಕ್ಷಿಣ ವಲಯ 44.2 ಓವರ್ಗಳಲ್ಲಿ ತಲುಪಿತು.

ಮಯಾಂಕ್ ಅಗರ್ವಾಲ್ 88 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರೆ, ಸಾಯಿ ಸುದರ್ಶನ್ 67 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 53 ರನ್ ಗಳಿಸಿದರಲ್ಲದೆ, ಎರಡನೇ ವಿಕೆಟ್ಗೆ ಈ ಜೋಡಿ ಅಮೋಘ 118 ರನ್ಗಳ ಜೊತೆಯಾಟ ನೀಡಿ ಗೆಲುವಿಗೆ ಸಹಕಾರಿಯಾಯಿತು.
ಮಯಾಂಕ್ ಅಗರ್ವಾಲ್ ಮತ್ತು ಸಾಯಿ ಸುದರ್ಶನ್ ಜೋಡಿ ನಿರ್ಗಮನದ ನಂತರ, ಎನ್ ಜಗದೀಸನ್ 32 ರನ್ ಮತ್ತು ರೋಹಿತ್ ರಾಯುಡು 24 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು ದಕ್ಷಿಣ ವಲಯ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಪೂರ್ವ ವಲಯ ತಂಡದ ಪರ ಅಭಿಮನ್ಯು ಈಶ್ವರನ್ 12 ರನ್, ವಿರಾಟ್ ಸಿಂಗ್ 49 ರನ್, ಸುಭ್ರಾಂಶು ಸೇನಾಪತಿ 44 ರನ್, ಆಕಾಶ್ ದೀಪ್ 44 ರನ್ ಮತ್ತು ಮುಖ್ತಾರ್ ಹುಸೇನ್ ಅವರ 33 ರನ್ಗಳ ನೆರವಿನಿಂದ ತಂಡ 229 ರನ್ ಗಳಿಸಿತು.
ದಕ್ಷಿಣ ವಲಯ ತಂಡದ ಪರ ವಿ ಕೌಶಿಕ್ 37 ರನ್ಗೆ 3 ವಿಕೆಟ್, ಸಾಯಿ ಕಿಶೋರ್ 45 ರನ್ಗೆ 3 ವಿಕೆಟ್, ವಿಧ್ವತ್ ಕಾವೇರಪ್ಪ40 ರನ್ಗೆ 2 ವಿಕೆಟ್, ವಾಷಿಂಗ್ಟನ್ ಸುಂದರ್ 41 ರನ್ಗೆ 1 ವಿಕೆಟ್ ಮತ್ತು ವಿಜಯ್ಕುಮಾರ್ ವೈಶಾಕ್ 62 ರನ್ಗೆ 1 ವಿಕೆಟ್ ಪಡೆಯುವ ಮೂಲಕ ಸಾಮೂಹಿಕ ಬೌಲಿಂಗ್ ಪ್ರದರ್ಶನ ನೀಡಿದರು.
ಈ ಪಂದ್ಯದ ನಂತರ, ದಕ್ಷಿಣ ವಲಯ ತಂಡವು ಅಧ್ಭುತ ಫಾರ್ಮ್ನಲ್ಲಿದ್ದು, ಸತತ ನಾಲ್ಕು ಗೆಲುವುಗಳನ್ನು ದಾಖಲಿಸುವ ಮೂಲಕ 16 ಅಂಕಗಳೊಂದಿಗೆ 2023ರ ದೇವಧರ್ ಟ್ರೋಫಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು ಪೂರ್ವ ವಲಯ ತಂಡವು ಶ್ಲಾಘನೀಯ ಪ್ರದರ್ಶನ ನೀಡಿದ್ದು, ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.