ಭಾರೀ ಕುತೂಹಲ ಮೂಡಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಎಲ್ಲಾ ರೀತಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೆಗಾ ಹರಾಜು ಪ್ರಕ್ರಿಯೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಾರಿ ಮೆಗಾ ಹರಾಜು ಅಖಾಡದಲ್ಲಿ ಸ್ಟಾರ್ ಆಟಗಾರರ ದಂಡೆಯಿದ್ದು, ಎಲ್ಲರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟಲು ರಣತಂತ್ರ ರೂಪಿಸಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಕೂಡ ತೆರೆಮರೆಯಲ್ಲಿ ಮೆಗಾ ಹರಾಜಿಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಒಮ್ಮೆಯೂ ಐಪಿಎಲ್ ಕಪ್ ಗೆಲ್ಲದ ಆರ್ಸಿಬಿ 2025ರ ಟೂರ್ನಿಯಲ್ಲಿ ಚಾಂಪಿಯನ್ ಆಗಲು ಯೋಜನೆ ಹಾಕಿಕೊಂಡಿದೆ. ಇದರ ಮೊದಲ ಹೆಜ್ಜೆಯನ್ನು ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ಆರ್ಸಿಬಿ ಇಟ್ಟಿದೆ.

ಕಳೆದ 18 ಐಪಿಎಲ್ ಆವೃತ್ತಿಗಳಲ್ಲಿ ಒಂದಲ್ಲ ಒಂದು ಎಡವಟ್ಟಿನಿಂದ ಆರ್ಸಿಬಿ ಇನ್ನೂ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಹರಾಜಿನಲ್ಲಿ ಆರ್ಸಿಬಿ ಎಡವಟ್ಟು ಮಾಡುತ್ತಲೇ ಬಂದಿದೆ. ತಂಡದ ಗೆಲುವಿಗಾಗಿ ಉತ್ತಮ ಪ್ರದರ್ಶನ ನೀಡುವ ಬೌಲರ್, ಆಲ್ರೌಂಡರ್ ಖರೀದಿಯಲ್ಲಿ ಆರ್ಸಿಬಿ ಎಡವಿದ ಪರಿಣಾಮ ಟೂರ್ನಿಯಲ್ಲಿ ಏರಿಳಿತಗಳನ್ನು ಕಂಡಿದೆ. ಆರ್ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗ ಅಷ್ಟೊಂದು ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ. ಆದರೆ, ಈ ಬಾರಿ ಬಲಿಷ್ಠ ಬೌಲಿಂಗ್ ವಿಭಾಗವನ್ನು ಕಟ್ಟಲು ಮುಂದಾಗಿರುವ ಬಗ್ಗೆ ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸುಳುವು ಕೊಟ್ಟಿದ್ದಾರೆ. ಮತ್ತೊಂದೆಡೆ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಐಪಿಎಲ್ 2025ರ ಟೂರ್ನಿಗೆ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
IPL 2025: ಇದೇ ಆವೃತ್ತಿಯಲ್ಲಿ ಕನ್ನಡಿಗನ ಐಪಿಎಲ್ ಕೆರಿಯರ್ ಅಂತ್ಯವಾಗುತ್ತಾ?
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ಆರ್ಸಿಬಿ ದೇಶೀಯ ಯುವ ಆಟಗಾರರನ್ನು ಟ್ರಯಲ್ಗೆ ಕರೆದಿದೆ. ಈ ಆರ್ಸಿಬಿ ಟ್ರಯಲ್ ಪ್ರಕ್ರಿಯೆಯಲ್ಲಿ ಸಾಕಷ್ಟು ಯುವ ಆಟಗಾರರು ಭಾಗವಹಿಸಿದ್ದಾರೆ. ಈ ಹಿಂದೆಯೂ ಆರ್ಸಿಬಿ ಟ್ರಯಲ್ ನಡೆಸಿತ್ತು. ಆದರೆ ಈ ಬಾರಿ ಆರ್ಸಿಬಿ ದಿನೇಶ್ ಕಾರ್ತಿಕ್ ನೇತೃತ್ವದಲ್ಲಿ ದೇಶೀ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಲು ಮುಂದಾಗಿರುವುದು ವಿಶೇಷ. ಏಕೆಂದರೆ ದಿನೇಶ್ ಕಾರ್ತಿಕ್ ಎಲ್ಲಾ ಆಟಗಾರರನ್ನು ಬಹಳ ಹತ್ತಿರದಿಂದ ನೋಡಿದ್ದು, ತಂಡಕ್ಕೆ ಬೇಕಾದ ಕೌಲಿಟಿ ಸ್ಟಾರ್ ಯುವ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ.
ದಿನೇಶ್ ಕಾರ್ತಿಕ್ ಕ್ರಿಕೆಟ್ ಕಾಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದು, ಸ್ಥಳೀಯ ಆಟಗಾರರ ಬಗ್ಗೆ ಹೆಚ್ಚು ಮಾಹಿತಿ ಇದೆ. ತಮಿಳುನಾಡು ಪ್ರೀಮಿಯರ್ ಲೀಗ್, ಮಹಾರಾಜ ಕಪ್, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಸೂಕ್ಷ್ಮ ಗಮನಿಸಿರುವ ದಿನೇಶ್ ಕಾರ್ತಿಕ್, ಅದ್ಭುತ ಪ್ರದರ್ಶನ ನೀಡಿರುವ ಆಟಗಾರರ ಮೇಲೆ ಕಣ್ಣಿಡಲಾಗಿದೆ. ಬ್ಯಾಟಿಂಗ್ ಪಿಚ್ ಆಗಿರುವ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೌಲರ್ಗಳು ಪರಿಣಾಮಕಾರಿ ಬೌಲಿಂಗ್ ಮಾಡುವುದು ಕಷ್ಟದ ಮಾತು. ಹೀಗಾಗಿ ಆರ್ಸಿಬಿ ತಂಡಕ್ಕೆ ಅನುಭವಿ, ಮಿಸ್ಟರಿ ಬೌಲರ್ಗಳ ಅಗ್ಯತೆವಿದೆ. ಹೀಗಾಗಿ ಬಲಿಷ್ಠ ತಂಡವನ್ನು ಕಟ್ಟಲು ದಿನೇಶ್ ಕಾರ್ತಿಕ್ ನೀಡುವ ಸಲಹೆ ಆರ್ಸಿಬಿ ಪಾಲಿಗೆ ತುಂಬಾ ಮಹತ್ವದಾಗಿದೆ.
ದಿನೇಶ್ ಕಾರ್ತಿಕ್ ನೇತೃತ್ವದಲ್ಲಿ ನಡೆದಿರುವ ಟ್ರಯಲ್ ಪ್ರಕ್ರಿಯೆಯಲ್ಲಿ ಹಲವು ಉತ್ತಮ ಆಟಗಾರರು ಗಮನ ಸೆಳೆದಿದ್ದಾರೆ. ಅದರಲ್ಲಿ ಕರ್ನಾಟಕದ ಮಿಸ್ಟರಿ ಬೌಲರ್ ಎಂದೇ ಸದ್ದು ಮಾಡುತ್ತಿರುವ ದೀಪಕ್ ದೇವಾಡಿಗ, ಬೌಲಿಂಗ್ ಆಲ್ರೌಂಡರ್ ಮನ್ವಂತ್ ಕುಮಾರ್, ಶುಭಮ್ ದುಬೆ, ತಮಿಳುನಾಡು ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್, ದೆಹಲಿಯ ವೇಗದ ಬೌಲರ್ ಮೋನೆ ಗ್ರವಾಲ್ ಅವರಂತಹ ಆಟಗಾರರನ್ನು ಹೆಡ್ಕೋಚ್ ಆಂಡಿ ಫ್ಲವರ್ ಮತ್ತು ದಿನೇಶ್ ಕಾರ್ತಿಕ್ ಮೆಚ್ಚಿಕೊಂಡಿದ್ದಾರೆ. ಇದಲ್ಲದೆ, ಕಳೆದ ವರ್ಷ ಐಪಿಎಲ್ನಲ್ಲಿ ಕಮಾಲ್ ಮಾಡಿದ ಕೆಕೆಆರ್ ಯುವ ಬ್ಯಾಟರ್ ಆಂಗ್ಕ್ರಿಶ್ ರಘುವಂಶಿ, ಪಂಜಾಬ್ ಕಿಂಗ್ಸ್ ಪರ ಮಿಂಚಿದ ಆಶುತೋಷ್ ಶರ್ಮಾ ಕೂಡ ಆರ್ಸಿಬಿ ಟ್ರಯಲ್ನಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.