
ಬೆಂಗಳೂರು, ಜೂ. 3: ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಿಂದ ಗಾಯಾಳು ವಿಕೇಟ್ ಕೀಪರ್, ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಹೊರ ಬಿದ್ದಿದ್ದಾರೆ. ಅವರ ಸ್ಥಾನವನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ತುಂಬಲಿದ್ದಾರೆ.
ಐಪಿಎಲ್ ಪಂದ್ಯದ ವೇಳೆ ಸಹಾ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅವರಿಗೆ ಸುಮಾರು ಆರು ವಾರಗಳಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವುದರಿಂದ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದೆ.
ಜೂನ್ 14ರಂದು ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಏಕ ಮಾತ್ರ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ. ಸಹಾ ಬದಲಿಗೆ ಕಾರ್ತಿಕ್ ಗೆ ಬಿಸಿಸಿಐ ಅವಕಾಶ ನೀಡಿರುವುದರಿಂದ ಕೀಪರ್, ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ಗೆ ಅವಕಾಶ ಕೈ ತಪ್ಪಿದಂತಾಗಿದೆ.
ಈ ಪಂದ್ಯದಿಂದ ಹೊರಗುಳಿದಿರುವ ಸಹಾ ಅವರು ಮಹತ್ವದ ಇಂಗ್ಲೆಂಡ್ ಸರಣಿ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮೇ 25ರಂದು ನಡೆದಿದ್ದ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್ ರೈಸರ್ಸ್ ಮತ್ತು ಕೋಲ್ಕತ್ತಾ ತಂಡಗಳು ಮುಖಾಮುಖಿಯಾಗಿದ್ದವು. ಸನ್ ರೈಸರ್ಸ್ ತಂಡವನ್ನು ಪ್ರತಿನಿಧಿಸಿದ್ದ ಸಹಾ ಪಂದ್ಯದ ವೇಳೆ ಬಲ ಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು.