
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತದಿಂದ ಆಘಾತಕಾರಿಯಾಗಿ ಹೊರಬಿದ್ದು ನಿರಾಸೆ ಮೂಡಿಸಿತ್ತು. ಈ ಪ್ರದರ್ಶನದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಇನ್ನೂ ನಡೆಯುತ್ತಲೇ ಇದೆ. ಟೀಮ್ ಇಂಡಿಯಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಭಾರತದ ಓರ್ವ ಆಟಗಾರ ಈ ಟೂರ್ನಿಯಲ್ಲಿ ಆಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎಂದಿದ್ದಾರೆ.
ಟೀಮ್ ಇಂಡಿಯಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಕ್ ವಿಶ್ವಕಪ್ ಆಡುವ ಬಳಗದಲ್ಲಿ ಅವಕಾಶ ಪಡೆಯಬೇಕಾಗಿತ್ತು ಎಂದಿದ್ದಾರೆ. ಚಾಹಲ್ ಆಡಿದ್ದರೆ ಎದುರಾಳಿ ತಂಡಗಳಿಗೆ ಮತ್ತಷ್ಟು ಹಾನಿಯುಂಟು ಮಾಡುತ್ತಿದ್ದರು ಎಂದಿರುವ ಡಿಕೆ ಸ್ಪಿನ್ನರ್ ಚಾಹಲ್ ಆಯ್ಕೆರ ಕುತೂಹಲಕಾರಿ ನಿರ್ಧಾರವಾಗಿರುತ್ತಿತ್ತು ಎಂದಿದ್ದಾರೆ.
ಟಿ20 ವಿಶ್ವಕಪ್ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಭಾರತ ಸೆಮಿಫೈನಲ್ನಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಇಂಗ್ಲೆಂಡ್ ತಂಡದ ವಿರುದ್ಧ 10 ವಿಕೆಟ್ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಭಾರತದ ಯಾವ ಬೌಲರ್ ಕೂಡ ಕನಿಷ್ಠ ಒಂದು ವಿಕೆಟ್ ಪಡೆಯಲು ಕೂಡ ವಿಫಲವಾಗಿದ್ದರು. ವಿಪರ್ಯಾಸವೆಂದರೆ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ಗೆ ಈ ಟೂರ್ನಿಯಲ್ಲಿ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ದೊರೆತಿರಲಿಲ್ಲ. ಇದು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರಿಂದ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
ಕ್ರಿಕ್ಬಜ್ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ದಿನೇಶ್ ಕಾರ್ತಿಕ್ ಈ ವಿಚಾರವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯುಜುವೇಂದ್ರ ಚಾಹಲ್ ಬದಲಿಗೆ ಆರ್ ಅಶ್ವಿನ್ ಅವರನ್ನು ಆಡಿಸುವ ನಿರ್ಧಾರ ಕೋಚ್ ಹಾಗೂ ನಾಯಕನದ್ದಾಗಿತ್ತು, ಅವರು ಟೂರ್ನಿಯಲ್ಲಿ ತಮ್ಮ ಅಭಿಯಾನವನ್ನು ಉತ್ತಮವಾಗಿಯೇ ಆರಂಭಿಸಿದರು. ಆದರೆ ಅಂತ್ಯ ಮಾತ್ರ ಉತ್ತಮವಾಗಿರಲಿಲ್ಲ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಈ ಎಲ್ಲಾ ನಿರ್ಧಾರಗಳನ್ನು ಕೂಡ ಕೋಚ್ ಹಾಗೂ ನಾಯಕ ತೆಗೆದುಕೊಳ್ಳುತ್ತಾರೆ. ಕೆಲ ಆಟಗಾರರ ಮೇಲಿನ ನಂಬಿಕೆಯಿಂದಾಗಿ ಅವರು ಇಂಥಾ ನಿರ್ಧಾರಗಳನ್ನು ತೆಗೆದಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆರ್ ಅಶ್ವಿನ್ ಟೂರ್ನಿಯನ್ನು ಅದ್ಭುತವಾಗಿಯೇ ಆರಂಭಿಸಿದ್ದರು, ಆದರೆ ಅಂತ್ಯ ಮಾತ್ರ ಉತ್ತಮವಾಗಿರಲಿಲ್ಲ. ಆದರೆ ಚಾಹಲ್ಗೆ ಅವಕಾಶ ದೊರೆತಿದ್ದರೆ ಖಂಡಿತವಾಗಿಯೂ ಎದುರಾಳಿಗಳಿಗೆ ಹೆಚ್ಚಿನ ಹಾನಿಯುಂಟು ಮಾಡಿರುತ್ತಿದ್ದರು" ಎಂದಿದ್ದಾರೆ ದಿನೇಶ್ ಕಾರ್ತಿಕ್.
ಇನ್ನು ದಿನೇಶ್ ಕಾರ್ತಿಕ್ 2022 ಭಾರತ ಕ್ರಿಕೆಟ್ ತಂಡದ ಪಾಲಿಗೆ ಅತ್ಯಂತ ಸಾಧಾರಣ ವರ್ಷವಾಗಿತ್ತು ಎಂದಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿದ್ದ ಅವಕಾಶವನ್ನು ಭಾರತ ಕೈಯ್ಯಾರೆ ಹಾಳುಮಾಡಿಕೊಂಡಿತ್ತು ಎಂದಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡ ಸಾಕಷ್ಟು ವಿಚಾರಗಳಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದಿದ್ದಾರೆ.