ಋತುರಾಜ್ ಗಾಯಕ್ವಾಡ್
ಐಪಿಎಲ್ 2021ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಪೈಕಿ ಋತಿರಾಜ್ ಗಾಯಕ್ವಾಡ್ ಪ್ರಮುಖರು. ಹೀಗಾಗಿ ಮುಂದಿನ ಟಿ20 ವಿಶ್ವಕಪ್ಗೆ ಸ್ಥಾನ ಪಡೆಯುವ ರೇಸ್ನಲ್ಲಿ ಋತು ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಆಡಿದ 16 ಪಂದ್ಯಗಳಲ್ಲಿ 635 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಟೂರ್ನಿಯಲ್ಲಿ ಅತಿ ಹಗೆಚ್ಚು ರನ್ ಗಳಿಸಿದ ಸಾಧನೆಯೊಂದಿಗೆ ನಂತರ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಋತುರಾಜ್ ಗಾಯಕ್ವಾಡ್ ಈಗಾಗಲೇ ಭಾರತಕ್ಕೆ ಪಾದಾರ್ಪಣೆ ಮಾಡಿದ್ದು ಭವಿಷ್ಯದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಬಾಬರ್ ಹಾಗೂ ಕೊಹ್ಲಿ ನಡುವಿನ ಹೋಲಿಕೆ ಸಲ್ಲದು: ಬಾಬರ್ ಅಜಮ್ ವ್ಯಕ್ತಿತ್ವ ಕೊಹ್ಲಿಗೆ ವಿರುದ್ಧವಾಗಿದೆ!
ವೆಂಕಟೇಶ್ ಐಯ್ಯರ್
ಈ ಬಾರಿಯ ಐಪಿಎಲ್ನಲ್ಲಿ ಅದರಲ್ಲೂ ಯುಎಇ ಚರಣದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅದ್ಭುತ ರೀತಿಯಲ್ಲಿ ತಿರುಗು ಬೀಳು ಕಾರಣವಾಗಿದ್ದು ಹಾಗೂ ಫೈನಲ್ಗೆ ಪ್ರವೇಶ ಪಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಆಟಗಾರ ಎಂದರೆ ಅದು ವೆಂಕಟೇಶ್ ಐಯ್ಯರ್. ಮಧ್ಯಮ ವೇಗದ ಬೌಲರ್ ಕೂಡ ಆಗಿರುವ ಕಾರಣ ವೆಂಕಟೇಶ್ ಐಯ್ಯರ್ ಆಲ್ರೌಂಡರ್ ಆಗಿ ಕೊಡುಗೆ ನಿಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದೊಂದಿಗೆ ನೆಟ್ ಬೌಲರ್ ಆಗಿ ಸಾಥ್ ನೀಡಿದ್ದರು. ಹೀಗಾಗಿ ಹಾರ್ದಿಕ್ ಪಾಂಡ್ಯ ಮುಂದಿನ ಟಿ20 ವಿಶ್ವಕಪ್ಗೆ ಆಯ್ಕೆಯಾಗಲು ವಿಫಲವಾದರೆ ಆ ಸ್ಥಾನವನ್ನು ವೆಂಕಟೇಶ್ ಐಯ್ಯರ್ ವಶಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅವೇಶ್ ಖಾನ್
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತದ ಬೌಲಿಂಗ್ ಪ್ರದರ್ಶನ ನೋಡಿದ ನಂತರ ಮುಂದಿನ ವಿಶ್ವಕಪ್ ವೇಳೆಗೆ ತಮಡದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ಈ ಬಾರಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಮುಂದಿನ ವಿಶ್ವಕಪ್ ವೇಳೆಗೆ ಈ ಆಟಗಾರರು ಮರಳಿ ತಮ್ಮ ಫಾರ್ಮ್ ಕಂಡುಕೊಳ್ಳಲು ವಿಫಲವಾದರೆ ಆ ಸ್ಥಾನವನ್ನು ಯುವ ಆಟಗಾರರು ಆಕ್ರಮಿಸಿಕೊಳ್ಳುವುದು ಸ್ಪಷ್ಟ. ಹೀಗೆ ಅವಕಾಶಕ್ಕಾಗಿ ಕಾಯುತ್ತಿರುವವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಮಡದ ಪರವಾಗಿ ಮಿಂಚಿದ ಆವೇಶ್ ಖಾನ್ ಕೂಡ ಒಬ್ಬರು. ಪವರ್ಪ್ಲೇ ಹಾಗೂ ಡೆತ್ ಓವರ್ ಎರಡರಲ್ಲಿಯೂ ಉತ್ತಮ ಬೌಲಿಂಗ್ ನಡೆಸುವ ಆವೇಶ್ ಖಾನ್ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾಗೆ ಉತ್ತಮ ಜೊತೆಗಾರನಾಗುವ ಸಾಧ್ಯತೆಯಿದೆ.
ಹರ್ಷಲ್ ಪಟೇಲ್
ಆರ್ಸಿಬಿ ತಂಡದ ಪರವಾಗಿ ಕಳೆದ ಐಪಿಎಲ್ನಲ್ಲಿ ಆಡಿ ಅಮೋಘ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್ ಮುಂದಿನ ಟಿ20 ವಿಶ್ವಕಪ್ನಲ್ಲಿ ಅವಕಾಶ ಪಡೆಯಬಹುದಾದ ಆಟಗಾರರ ಪೈಕಿ ಪ್ರಮುಖ ಆಟಗಾರನಾಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಹರ್ಷಲ್ ಪಟೇಲ್ 32 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಹರ್ಷಲ್ ಪಟೇಲ್ ಯುವ ಆಟಗಾರನಲ್ಲದಿದ್ದರೂ ಬೌಲಿಂಗ್ನಲ್ಲಿರುವ ಮೊನಚು ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಪ್ರವಾಸಕ್ಕೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಹರ್ಷಲ್ ಸಜ್ಜಾಗಿದ್ದಾರೆ.
ಮೊಹಮ್ಮದ್ ಸಿರಾಜ್
ಟಿ20 ಕ್ರಿಕೆಟ್ನಲ್ಲಿ ಸಾಕಷ್ಟು ಸುಧಾರಣೆ ಕಂಡ ಬೌಲರ್ಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ ರಾಷ್ಟ್ರೀಯ ತಂಡದ ಪರವಾಗಿ ಅದದಭುತ ಪ್ರದರ್ಶನ ನಿಡಿ ಮಿಂಚುತ್ತಿರುವ ಸಿರಾಜ್ ಐಪಿಎಲ್ನಲ್ಲಿ ಆರ್ಸಿಬಿ ಪರವಾಗಿ ಅದ್ಭುತ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ವಿಕೆಟ್ ಹಾಗೂ ರನ್ ನಿಯಂತ್ರಣದಲ್ಲಿ ಸಿರಾಜ್ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಅದರಲ್ಲೂ ಡೆತ್ ಓವರ್ಗಳಲ್ಲಿ ಸಿರಾಜ್ ತೋರಿದ ಚಾಕಚಕ್ಯತೆ ಕ್ರಿಕೆಟ್ ಪಂಡಿತರನ್ನು ಮೆಚ್ಚುಗೆಗೊಳಿಸಿದೆ. ಯಾರ್ಕರ್ ಹಾಗೂ ವೇಗದಲ್ಲಿನ ಏರಿಳಿತಗಳನ್ನು ಪರಿಣಾಮಕಾರಿಯಾಗಿ ಮಾಡಬಲ್ಲ ವೇಗಿ ಸಿರಾಜ್. ಹೀಗಾಗಿ ಮುಂದಿನ ಟಿ0 ವಿಶ್ವಕಪ್ಗೆ ಸಿರಾಜ್ ಅವರನ್ನು ಆಯ್ಕೆಗಾರರು ಪರಿಗಣಿಸಬಹುದು. ಆದರೆ ಅದಕ್ಕಾಗಿ ಭಾರತದ ಈ ವೇಗಿ ಈಗಿನ ಪ್ರದರ್ಶನವನ್ನು ಸ್ಥಿರವಾಗಿ ನೀಡುವುದು ಅನಿವಾರ್ಯ.