ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಬಹುನಿರೀಕ್ಷಿತ ಪಂದ್ಯ ಎಂದರೆ ಅದು ಏಷ್ಯಾಕಪ್ನ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟ. ಶನಿವಾರ ನಡೆಯಲಿರುವ ಈ ಪಂದ್ಯದ ಮೇಲೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ಅಭಿಮಾನಿಗಳು ಮಾತ್ರವಲ್ಲ. ಎಲ್ಲಾ ಕ್ರಿಕೆಟ್ ಪ್ರೇಮಿಗಳು ಕೂಡ ಈ ರಣರೋಚಕ ಕದನವನ್ನು ಎದುರು ನೋಡುತ್ತಿದ್ದಾರೆ.
ಪ್ರತಿ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಇರುವ ಒತ್ತಡಗಳು ಈ ಬಾರಿ ಕೂಡ ಇದೆ. ಎರಡು ತಂಡಗಳು ಕೂಡ ಈ ಪಂದ್ಯವನ್ನು ಗೆಲ್ಲಲೇಬೇಕು ಎನ್ನುವ ಹಠದೊಂದಿಗೆ ಕಣಕ್ಕಿಳಿಯುವುದು ಸಹಜ. ಅಭಿಮಾನಿಗಳಂತು ಯಾವ ಕಾರಣಕ್ಕೂ ಈ ಪಂದ್ಯದಲ್ಲಿ ಸೋಲಬಾರದು ಎನ್ನುವ ಮನಸ್ಥಿತಿಯೊಂದಿಗೆ ಪಂದ್ಯವನ್ನು ಎದುರುನೋಡುತ್ತಿದ್ದಾರೆ.

ಇನ್ನು ಪಾಕಿಸ್ತಾನ ತಂಡ ಪ್ರಸ್ತುತ ಏಕದಿನ ಮಾದರಿಯಲ್ಲಿ ನಂಬರ್ 1 ತಂಡವಾಗಿದ್ದು ಭಾರತಕ್ಕೆ ಈ ಬಾರಿ ಕಠಿಣ ಸವಾಲಿರುವುದು ನಿಶ್ಚಿತ. ಅಲ್ಲದೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಬಲಿಷ್ಠ ಆಟಗಾರರನ್ನು ಪಾಕಿಸ್ತಾನ ತಂಡ ಹೊಂದಿದ್ದು ಸಮತೋಲಿತವಾಗಿದೆ. ಹಾಗಾಗಿ ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕಾದರೆ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಕಣಕ್ಕಿಳಿಯಬೇಕಾಗಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದರೂ ಈ ಕೆಳಗಿನ ಮೂವರು ಆಟಗಾರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರವೇ ಭಾರತಕ್ಕೆ ಗೆಲುವು ಸಾಧ್ಯ. ಹಾಗಾದರೆ ಆ ಮೂವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ.
ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪ್ರಸ್ತುತ ತಂಡದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಭಾರತದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿರುದ್ಧ ಸಾಕಷ್ಟು ರಣತಂತ್ರಗಳನ್ನು ಹೆಣೆದಿರುತ್ತಾರೆ. ಅವರ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಬೇಕಿದ್ದರೆ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಮತ್ತೋರ್ವ ಆಟಗಾರ ತಿರುಗೇಟು ನೀಡಬೇಕಿದೆ. ಅದಕ್ಕಾಗಿ ಶುಬ್ಮನ್ ಗಿಲ್ ಅತ್ಯಂತ ಸಮರ್ಥ ಬ್ಯಾಟರ್ ಕೂಡ ಹೌದು. ಆರಂಭದಲ್ಲಿಯೇ ಪಾಕಿಸ್ತಾನದ ಬಲಿಷ್ಠ ಬೌಲಿಂಗ್ ವಿಭಾಗದ ಮೇಲೆ ಮೇಲುಗೈ ಸಾಧಿಸಬೇಕಿದ್ದರೆ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿಬೇಕಿದೆ.
ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ಆಟಗಾರ ರವೀಂದ್ರ ಜಡೇಜಾ ಭಾರತ ತಂಡದ ಸಮತೋಲನವನ್ನು ಹೆಚ್ಚಿಸುವ ಆಟಗಾರ. ಬ್ಯಾಟಿಂಗ್ನಲ್ಲಿ ಕೆಳ ಕ್ರಮಾಂಕದಲ್ಲಿ ಅವಕಾಶ ಸಿಕ್ಕರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಅಲ್ಲದೆ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆಗಿ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಅಗತ್ಯ. ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಮಂಕುಬೂದಿ ಎರಚಬೇಕಿದ್ದರೆ ಜಡ್ಡು ಪಾತ್ರ ನಿರ್ಣಾಯಕ.
ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿಯೇ ಕಾಣಿಸುತ್ತಿದೆ. ಆದರೆ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಗಾಯದ ಕಾರಣದಿಂದಾಗಿ ಸುದೀರ್ಘ ಕಾಲ ದೂರವುಳಿದಿದ್ದು ಇತ್ತೀಚೆಗೆ ಕಮ್ಬ್ಯಾಕ್ ಮಾಡಿ ಮಿಂಚಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಉತ್ತಮ ಲಯವನ್ನು ಮುಂದುವರಿಸುವ ವಿಶ್ವಾಸ ಮೂಡಿಸಿದ್ದಾರೆ. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಭಾರತ ಬೌಲಿಂಗ್ ವಿಭಾಗದಲ್ಲಿ ವಿಶೇಷ ಭರವಸೆ ಮೂಡಿಸಿರುವ ಆಟಗಾರ ಎಂದರೆ ಅದು ಮೊಹಮ್ಮದ್ ಸಿರಾಜ್. ಆಕ್ರಮಣಕಾರಿ ಮನೋಭಾವದ ಸಿರಾಜ್ ಪಾಕ್ ವಿರುದ್ಧದ ಪಂದ್ಯಕ್ಕೆ ವಿಶೇಷ ರಣತಂತ್ರವನ್ನು ಹೊಂದಿರುವುದಲ್ಲಿ ಅನುಮಾಣವಿಲ್ಲ. ಅವರ ಲೆಕ್ಕಾಚಾರಗಳು ಈ ಪಂದ್ಯದಲ್ಲಿ ಹೇಗೆ ಕಾರ್ಯಗತಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಯಾವುದೇ ಎದುರಾಳಿಗಳಿಗೂ ಆತಂಕ ಮೂಡಿಸುವ ಬೌಲರ್. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡಕ್ಕೆ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಪಾಕಿಸ್ತಾನದ ಬಲಿಷ್ಠವಾದ ಅಗ್ರಕ್ರಮಾಂಕಕ್ಕೆ ಆಘಾತ ನೀಡಲು ಬೂಮ್ರಾ ಮಿಂಚುವುದು ಅನಿವಾರ್ಯ. ಬೂಮ್ರಾ ಅವರಿಂದ ಅತ್ಯುತ್ತಮ ಪ್ರದರ್ಶನ ಬಂದಲ್ಲಿ ಭಾರತ ಸುಲಭವಾಘಿ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.