2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಇದಕ್ಕಾಗಿ ಎಲ್ಲಾ ಹತ್ತು ತಂಡಗಳು ತಯಾರಿ ಆರಂಭಿಸಿವೆ.
ಭಾರತ ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದೆ. ಹೀಗಾಗಿ ಏಷ್ಯಾ ಕಪ್ ಮೂಲಕ ಭಾರತ ತನ್ನ ತಂಡದ ಸಂಯೋಜನೆಯಲ್ಲಿ ತೊಡಗಿದೆ.

ಇದೇ ವೇಳೆ ಭಾರತ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ 2023ರ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಸೌರವ್ ಗಂಗೂಲಿ, ಭಾರತ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ ವಿಶ್ವಕಪ್ ಗೆಲ್ಲುತ್ತೇವೆ. ಏಕೆಂದರೆ ತಂಡ ಬಲಿಷ್ಠವಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 8ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾರತ ತನ್ನ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಲಿದೆ. ಆ ಬಳಿಕ ಹೈ-ವೋಲ್ಟೇಜ್ ಪಂದ್ಯದಲ್ಲಿ ಅಕ್ಟೋಬರ್ 14ರಂದು ಅಹಮದಾಬಾದ್ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

"ಭಾರತದ ಬ್ಯಾಟರ್ಗಳು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು. ಅವರು ಚೆನ್ನಾಗಿ ಬ್ಯಾಟ್ ಮಾಡಿದರೆ ಭಾರತ ತಂಡ ಗೆಲ್ಲುತ್ತದೆ. ವಿಶ್ವಕಪ್ ಬೇರೆ, ಏಷ್ಯಾಕಪ್ ಬೇರೆ, ಆಸ್ಟ್ರೇಲಿಯಾ ತವರಿನ ಸರಣಿ ಬೇರೆ. ಪ್ರತಿಯೊಂದು ಪಂದ್ಯಾವಳಿಯ ನಿರ್ದಿಷ್ಟ ಕ್ಷಣದಲ್ಲಿ ಹೇಗೆ ಆಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಭಾರತ ಬಲಿಷ್ಠ ತಂಡವಾಗಿದೆ. ಆದರೆ ವಿಶ್ವಕಪ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕು," ಎಂದು ಸೌರವ್ ಗಂಗೂಲಿ ಹೇಳಿದರು.
2023ರ ಏಷ್ಯಾ ಕಪ್ಗಾಗಿ ಪ್ರಕಟಿಸಿರುವ ಭಾರತದ 17 ಸದಸ್ಯರ ತಂಡವು ಅತ್ಯಂತ ನ್ಯಾಯಯುತ ತಂಡವಾಗಿದೆ ಎಂದು ಸೌರವ್ ಗಂಗೂಲಿ ಹೇಳಿದ್ದು, ಈಗ ಅವರು ಉತ್ತಮವಾಗಿ ಆಡಬೇಕಾಗಿದೆ ಎಂದರು.
ಟಿ20 ಪಂದ್ಯಗಳಲ್ಲಿ ಭಾರತದ ಪರ ಹೆಚ್ಚಿನ ವಿಕೆಟ್ ಟೇಕರ್ ಬೌಲರ್ ಯುಜ್ವೇಂದ್ರ ಚಹಾಲ್ ಅವರನ್ನು ಏಷ್ಯಾ ಕಪ್ಗಾಗಿ ಭಾರತದ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಆಯ್ಕೆಗಾರರು ಚಹಾಲ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದರು.
"ಬ್ಯಾಟಿಂಗ್ನಿಂದಾಗಿ ಅವರು ಯುಜ್ವೇಂದ್ರ ಚಹಾಲ್ಗಿಂತ ಮೊದಲು ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ಇದು ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ. ಯಾರಾದರೂ ಗಾಯಗೊಂಡರೆ ಯುಜ್ವೇಂದ್ರ ಚಹಾಲ್ ತಂಡಕ್ಕೆ ಹಿಂತಿರುಗಬಹುದು," ಎಂದು ತಿಳಿಸಿದರು.
ಇನ್ನು ಪಾಕಿಸ್ತಾನ ತಂಡದ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ಅವರು ಅತ್ಯಂತ ಸಮತೋಲಿತ ತಂಡವನ್ನು ಹೊಂದಿದ್ದಾರೆ. ದಿನದಂದು ಉತ್ತಮವಾಗಿ ಆಡುವ ತಂಡವು ಗೆಲ್ಲುತ್ತದೆ ಎಂದು ಹೇಳಿದರು. ಇನ್ನು ಭಾರತ ತನ್ನ ಎಂಟನೇ ಏಷ್ಯಾ ಕಪ್ ಪ್ರಶಸ್ತಿ ಗೆಲ್ಲುವತ್ತ ಗುರಿ ನೆಟ್ಟಿದೆ.
"ಪಾಕಿಸ್ತಾನ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ, ನಸೀಮ್ ಶಾ, ಶಾಹಿದ್ ಅಫ್ರಿದಿ, ಹ್ಯಾರಿಸ್ ರೌಫ್ ಅವರಂತಹ ಬೌಲರ್ಗಳು ಇದ್ದಾರೆ. ಅವರದು ಅತ್ಯಂತ ಸಮತೋಲಿತ ತಂಡ. ಆದರೆ, ಭಾರತ ಬಲಿಷ್ಠ ತಂಡವಾಗಿದೆ. ಆ ನಿರ್ದಿಷ್ಟ ದಿನದಂದು ನೀವು ಹೇಗೆ ಆಡುತ್ತೀರಿ ಎಂಬುದು ಅವಲಂಬಿತವಾಗಿದೆ. ಇದಕ್ಕೆ ಯಾವುದೇ ರಾಕೆಟ್ ವಿಜ್ಞಾನವಿಲ್ಲ," ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.
ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ 2023ರ ಏಷ್ಯಾ ಕಪ್ನಲ್ಲಿ ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.