
2024ರ ಟಿ20 ವಿಶ್ವಕಪ್ಗೆ ಮುನ್ನ ಭಾರತ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿಭಾಯಿಸಲು ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾರನ್ನು ಅಣಿಗೊಳಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ 2022ರ ಟಿ20 ವಿಶ್ವಕಪ್ನಲ್ಲಿ ಫಿನಿಶರ್ ಪಾತ್ರವನ್ನು ವಹಿಸಿದ್ದರು. ಆದರೂ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ದಿನೇಶ್ ಕಾರ್ತಿಕ್ರನ್ನು ಆಯ್ಕೆ ಮಾಡಿಲ್ಲ. ಅವರಿಗಾಗಲೇ 37 ವರ್ಷ ವಯಸ್ಸಾಗಿರುವುದರಿಂದ ಅವರನ್ನು ಮುಂದಿನ ಪಂದ್ಯಗಳಲ್ಲಿ ಆಯ್ಕೆ ಮಾಡಿವುದು ಅನುಮಾನ ಎಂದು ಹೇಳಿದರು.
ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಇಬ್ಬರೂ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
"ಹಾರ್ದಿಕ್ ಪಾಂಡ್ಯ ನಿಸ್ಸಂಶಯವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ. ಆದರೆ, ಅವರ ಜೊತೆಗೆ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಭಾರತಕ್ಕಾಗಿ ಫಿನಿಶರ್ ಪಾತ್ರವನ್ನು ನಿರ್ವಹಿಸಬೇಕು ಎಂದು ನನಗೆ ಅನಿಸುತ್ತದೆ. ಮುಂದಿನ ಟಿ20 ವಿಶ್ವಕಪ್ ವೇಳೆಗೆ ಅವರಿಬ್ಬರನ್ನೂ ಸಿದ್ಧಗೊಳಿಸಬೇಕಾಗಿದೆ, ಅವರಿಗೆ ಸಾಕಷ್ಟು ಪಂದ್ಯಗಳನ್ನು ನೀಡಿದರೆ, ಪಂದ್ಯಗಳನ್ನು ಗೆಲ್ಲಬಹುದು" ಎಂದು ಹೇಳಿದರು.

ಮೊಹಮ್ಮದ್ ಕೈಫ್ ಉದಾಹರಣೆ ನೀಡಿದ ಉತ್ತಪ್ಪ
ಇದಕ್ಕಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ರ ಉದಾಹರಣೆಯನ್ನು ನೀಡಿದ್ದಾರೆ. ಮೊಹಮ್ಮದ್ ಕೈಫರ್ ಭಾರತ ತಂಡದಲ್ಲಿ ಫಿನಿಶರ್ ಆಗಿ ಬ್ಯಾಟಿಂಗ್ ಮಾಡುತ್ತಿದ್ದರು. ಫಿನಿಶರ್ ಪಾತ್ರ ಕಷ್ಟಕರವಾಗಿರುವುದರಿಂದ, ಆಯ್ಕೆದಾರರು ಅವರ ಬಗ್ಗೆ ತಾಳ್ಮೆಯಿಂದ ಇರಬೇಕು ಎಂದು ಉತ್ತಪ್ಪ ಹೇಳಿದರು.
"6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಎಲ್ಲರೂ ಕೂಡ ಆ ಸ್ಥಾನದಲ್ಲಿ ಯಶಸ್ಸು ಕಾಣುವುದಿಲ್ಲ. ಆದ್ದರಿಂದ ಆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವವರ ಬಗ್ಗೆ ಆಯ್ಕೆದಾರರು, ಕೋಚಿಂಗ್ ಸಿಬ್ಬಂದಿ ಮತ್ತು ನಾಯಕರು ತಾಳ್ಮೆಯಿಂದ ಇರಬೇಕು. ಟಿ20 ಮಾದರಿಯಲ್ಲಿ 4 ರಿಂದ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಅತ್ಯಂತ ಕಷ್ಟ ಎಂದು ಭಾವಿಸುತ್ತೇನೆ ಎಂದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾರನ್ನು ಯಾವ ಕ್ರಮಾಂಕದಲ್ಲಿ ಆಡಿಸುತ್ತಾರೆ ಎನ್ನುವುದು ಎರಡನೇ ಟಿ20 ಪಂದ್ಯದಲ್ಲಿ ತಿಳಿಯಲಿದೆ. ನವೆಂಬರ್ 20ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಎರಡನೇ ಟಿ20 ಪಂದ್ಯವನ್ನಾಡಲಿದೆ.