
2023ರ ಏಷ್ಯಾ ಕಪ್ನ ಆತಿಥ್ಯ ವಹಿಸುವುದು ಮತ್ತು ಭಾಗವಹಿಸುವುದರ ಕುರಿತು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ.
ಭಾರತ ಕ್ರಿಕೆಟ್ ತಂಡ 2023ರ ಏಷ್ಯಾ ಕಪ್ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವುದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಮತ್ತೊಂದು ದೊಡ್ಡ ಜಗಳಕ್ಕೆ ದಾರಿ ಮಾಡಿಕೊಟ್ಟಿದೆ.
2023ರ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ಆಯೋಜನೆಯಾದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ. ಬದಲಾಗಿ ತಟಸ್ಥ ಸ್ಥಳದಲ್ಲಿ ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟವಾಗಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಅವರು ಪ್ರತಿಕ್ರಿಯಿಸಿ, ಭಾರತ ತಂಡ ಏಷ್ಯಾ ಕಪ್ನಲ್ಲಿ ಪಾಲ್ಗೊಳ್ಳದಿದ್ದರೆ 2023ರ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ ತಂಡ ಹಿಂದೆ ಸರಿಯಲಿದೆ ಎಂಬ ಬೆದರಿಕೆ ಒಡ್ಡಿದ್ದರು.
ಅಂದಿನಿಂದ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಭಾಗವಹಿಸುವಿಕೆಯ ಮೇಲೆ ಪಾಕಿಸ್ತಾನ ಮತ್ತು ಭಾರತದ ಮಾಜಿ ಆಟಗಾರರು ಪ್ರತಿಕ್ರಿಯಿಸುತ್ತಲೇ ಇದ್ದಾರೆ.

ಇತ್ತೀಚಿಗೆ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಬಾರದು, ಅಲ್ಲಿ ಆಡುವುದು ಸುರಕ್ಷಿತ ಅಲ್ಲ ಎಂದು ಹೇಳಿದ್ದು, ಮತ್ತೊಂದು ಚರ್ಚೆಗೆ ಗ್ರಾಸವಾಗಿತ್ತು.
ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮಾತನಾಡಿ, "ಪಾಕಿಸ್ತಾನ ತಂಡಕ್ಕೆ ಮುಂಬೈ ಮೂಲದ ವ್ಯಕ್ತಿಯಿಂದ ಬೆದರಿಕೆ ಇದೆ. ಆದರೂ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳಿಸಲು ನಿರ್ಧರಿಸಿದೆ," ಎಂದು ಹೇಳಿದ್ದಾರೆ.
2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಸೈಡ್ಲೈನ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಹಿದ್ ಅಫ್ರಿದಿ, "ನಿರಂತರ ಪ್ರತೀಕಾರವಿದ್ದರೆ ಪರಿಸ್ಥಿತಿಗಳು ಹೇಗೆ ಸುಧಾರಿಸುತ್ತವೆ" ಎಂದು ಕೇಳಿದ ಪ್ರಶ್ನೆಗೆ. "ಯಾರು ಏಷ್ಯಾ ಕಪ್ಗೆ ತೆರಳುವುದು ಬೇಡ ಎಂದು ಹೇಳುತ್ತಿದ್ದಾರೆ? ಭಾರತ ಬೇಡ ಎನ್ನುತ್ತಿದೆ," ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.

ಪಾಕಿಸ್ತಾನ ತಂಡವು ಒಬ್ಬ ಭಾರತೀಯನಿಂದ ಬೆದರಿಕೆಯನ್ನು ಎದುರಿಸಿದೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಹೆಸರನ್ನು ಬಹಿರಂಗಪಡಿಸಲು ಬಯಸುವುದಿಲ್ಲ, ಆದರೆ ಪಾಕಿಸ್ತಾನ ಸರ್ಕಾರವು ತಂಡವನ್ನು ಭಾರತಕ್ಕೆ ಕಳುಹಿಸಲು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿದೆ ಎಂದು ಶಾಹಿದ್ ಅಫ್ರಿದಿ ಹೇಳಿದರು.
"ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿ ಮತ್ತು ನಾವು ಬಹಳ ಸಂತೋಷದಿಂದ ಸ್ವಾಗತಿಸುತ್ತೇವೆ. ಆದರೆ, ನಮ್ಮ ಸರ್ಕಾರವು ಎಲ್ಲವನ್ನೂ ಬದಿಗಿಟ್ಟು ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸಿತ್ತು. ಹಾಗಾಗಿ ಬೆದರಿಕೆಗಳು ನಮ್ಮ ಸಂಬಂಧವನ್ನು ಹಾಳು ಮಾಡಬಾರದು," ಎಂದು ಶಾಹಿದ್ ಅಫ್ರಿದಿ ಮತನಾಡಿದ್ದಾರೆ.
2004-05ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರಿಗೆ ಪಾಕಿಸ್ತಾನದ ಜನರಿಂದ ಹೇಗೆ ಗೌರವ ಸಿಕ್ಕಿತು ಎಂಬುದನ್ನು ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ನೆನಪಿಸಿದರು.
ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡವು ಸೋಮವಾರ, ಮಾರ್ಚ್ 20ರಂದು ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2023ರ ಚಾಂಪಿಯನ್ ಆಯಿತು. ಫೈನಲ್ನಲ್ಲಿ ಆರೋನ್ ಫಿಂಚ್ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ಏಕೈಕ ಪಂದ್ಯವನ್ನು ಗೆದ್ದು, ಫೈನಲ್ ಪ್ರವೇಶಿಸಲು ವಿಫಲವಾಗಿತ್ತು.