ಹಾಲಿ ಚಾಂಪಿಯನ್ ಗುಜರಾತ್ ತಂಡ ತನ್ನ ತವರಿನಲ್ಲಿಯೇ ನಡೆದ ಪಂದ್ಯದಲ್ಲಿ ಆಘಾತಕಾರಿಯಾಗಿ ಸೋಲು ಕಂಡಿದೆ. ಗೆಲ್ಲಲು ಅಲ್ಪ ಮೊತ್ತದ ಗುರಿಯನ್ನು ಪಡೆದುಕೊಂಡಿದ್ದರೂ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದ ಜಿಟಿ ತಂಡ 5 ರನ್ಗಳ ಅಂತರದಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶರಣಾಗಿದೆ.
ಉಳಿದೆಲ್ಲಾ ಆಟಗಾರರು ಕೂಡ ಡೆಲ್ಲಿ ಕ್ಯಾಪಿಟಲ್ಸ ತಂಡದ ಶಿಸ್ತಿನ ಬೌಲಿಂಗ್ ದಾಳಿಯ ವಿರುದ್ಧ ಕ್ರೀಸ್ನಲ್ಲಿ ನೆಲೆಯೂರಲು ವಿಫಲವಾದರು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಕೊನೆಯ ಕ್ಷಣದವರೆಗೂ ಕ್ರೀಸ್ನಲ್ಲಿ ನಲಕಚ್ಚಿ ನಿಂತು ಅರ್ಧ ಶತಕ ಸಿಡಿಸಿ ಮಿಂಚಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಹಾರ್ದಿಕ್ ಪಾಂಡ್ಯಗೆ ಸಾಧ್ಯವಾಗಲಿಲ್ಲ. ರಾಹುಲ್ ತೆವಾಟಿಯಾ ಅಂತಿಮ ಹಂತದಲ್ಲಿ ಸ್ಪೋಟಕ ಪ್ರದರ್ಶನ ನೀಡಿದರಾದರೂ ಅವರ ಆಟಕ್ಕೂ ಡಿಸಿ ತಡೆಯೊಡ್ಡಿತು.

ಈ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ನೀಡಿದ್ದು ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೋಲಿಗೆ ನಾನೇ ಹೊಣೆ ಎಂದು ಸೋಲಿನ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡಿದ್ದಾರೆ ಹಾರ್ದಿಕ್ ಪಾಂಡ್ಯ. ರಾಹುಲ್ ತೆವಾಟಿಯಾ ಪಂದ್ಯಕ್ಕೆ ಗುಜರಾತ್ ಟೈಟನ್ಸ್ ತಂಡ ವಾಪಾಸ್ ಬರುವಂತೆ ಮಾಡಿದರು, ತಾನು ಕೂಡ ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ಪಂದ್ಯದವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
"ಖಂಡಿತವಾಗಿಯೂ ಯಾವುದೇ ದಿನದಲ್ಲಿಯಾದರೂ 129 ರನ್ಗಳ ಗುರಿಯನ್ನು ಬೆನ್ನಟ್ಟುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಆದರೆ ಕೆಲ ವಿಕೆಟ್ಗಳನ್ನು ಕಳೆದುಕೊಂಡೆವು. ರಾಹುಲ್ ತೆವಾಟಿಯಾ ಪಂದ್ಯಕ್ಕೆ ನಮ್ಮನ್ನು ವಾಪಾಸ್ ಬರುವಂತೆ ಮಾಡಿದರು. ನಾನು ಕೂಡ ನನ್ನಿಂದ ಸಾಧ್ಯವಾದ ಪ್ರಯತ್ನವನ್ನು ಮಾಡಿದೆ. ಮಧ್ಯದಲ್ಲಿ ಒಂದೆರಡು ದೊಡ್ಡ ಓವರ್ಗಳನ್ನು ನಾವು ನಿರೀಕ್ಷಿಸುತ್ತಿದ್ದೆವು. ಆದರೆ ಈ ಪಂದ್ಯದುದ್ದಕ್ಕೂ ಲಯವನ್ನು ಕಂಡುಕೊಳ್ಳಲು ನಮ್ಮಿಂದ ಸಾಧ್ಯವಾಗಲೇ ಇಲ್ಲ" ಎಂದಿದ್ದಾರೆ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ.
"ಈ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಎದುರಾಳಿ ತಂಡಕ್ಕೆ ಈ ಪಂದ್ಯದ ಸಂಪೂರ್ಣ ಯಶಸ್ಸು ಸಲ್ಲಬೇಕು. ಅವರು ಅದ್ಭುತವಾಗಿ ಬೌಲಿಂಗ್ ದಾಳಿ ನಡೆಸಿದರು.ಇಲ್ಲಿ ಪಿಚ್ ಹೆಚ್ಚಿನ ಪ್ರಭಾವ ಬೀರಲಿಲ್ಲ. ಆದರೆ ಆರಂಭದಲ್ಲಿಯೇ ಕೆಲ ವಿಕೆಟ್ಗಳನ್ನು ಕಳೆದುಕೊಂಡ ಕಾರಣ ನಮ್ಮ ಮೇಲೆ ಒತ್ತಡ ಬಿತ್ತು. ರಾಹುಲ್ ಪಂದ್ಯಕ್ಕೆ ನಮ್ಮನ್ನು ಮರಳಿಸಿದರು ಕೂಡ ಅದು ಸಾಕಾಗಲಿಲ್ಲ. ನಾವು ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದೆವು. ಹಾಗಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಲು ಆಧ್ಯವಾಗಲೇ ಇಲ್ಲ" ಎಂದಿದ್ದಾರೆ ನಾಯಕ ಹಾರ್ದಿಕ್ ಪಾಂಡ್ಯ.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಶಮಿ ಅವರಲ್ಲಿ ಕ್ಷಮೆ ಕೇಳಬೇಕು. ಬ್ಯಾಟರ್ಗಳು ಈ ಪಂದ್ಯದಲ್ಲಿ ಬೇಸರ ಮೂಡಿಸಿದರು. ಶಮಿ ಅವರು ತಮ್ಮಲ್ಲಿನ ಕೌಶಲ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಿದರು. ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಆದರೆ ಬ್ಯಾಟಿಂಗ್ ವಿಭಾಗದಿಂದಾಗಿ ಸೋಲು ಕಾಣುವಂತಾಯಿತು. ಇನ್ನು ಕೂಡ ಸಾಕಷ್ಟು ಪಂದ್ಯಗಳು ಬಾಕಿಯಿದೆ. ಈ ಪಂದ್ಯದಿಂದಾಗಿ ನಾವು ಪಾಠ ಕಲಿತಿದ್ದೇವೆ. ಆ ಪಾಠವನ್ನು ಮುಂಬರುವ ಪಂದ್ಯಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಅತ್ಯುತ್ತಮವಾದ ಕ್ರಿಕೆಟನ್ನು ಆಡುವ ಅಗತ್ಯವಿದೆ" ಎಂದಿದ್ದಾರೆ ಜಿಟಿ ನಾಯಕ ಹಾರ್ದಿಕ್ ಪಾಂಡ್ಯ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ 23 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೆಳ ಕ್ರಮಾಂಕ ಆಟಗಾರರಿಂದ ಬಂದ ಅದ್ಭುತ ಪ್ರದರ್ಶನದಿಂದಾಗಿ ತಂಡ 130 ರನ್ಗಳ ಗೌರವಯುತ ರನ್ಗಳಿಸಲು ಸಾಧ್ಯವಾಯಿತು. ಅಕ್ಷರ್ ಪಟೇಲ್ 30 ಎಸೆತಗಳಲ್ಲಿ 27 ರನ್ಗಳಿಸಿದರೆ ಅಮನ್ ಹಕಿಮ್ ಖಾನ್ 44 ಎಸೆತಗಳಲ್ಲಿ 51 ರನ್ಗಳಿಸಿದ್ದು ತಂಡಕ್ಕೆ ದೊಡ್ಡ ಆಸರೆಯಾಯಿತು. ರಿಪಲ್ ಪಟೇಲ್ ಕೂಡ 13 ಎಸೆತಗಳಲ್ಲಿ 23 ರನ್ಗಳಿಸಿದರು. ಮೊಹಮ್ಮದ್ ಶಮಿ ಕೇವಲ 11 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.
ಈ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಕೂಡ ಆರಂಭದಲ್ಲಿಯೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತ್ತು.32 ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ಗಳು ಉರುಳಿದ್ದವು. ಆದರೆ ನಾಯಕ ಹಾರ್ದಕ್ ಪಾಂಟ್ಯ ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಾ ಕೊನೆಯ ಹಂತದವರೆಗೂ ಕ್ರೀಸ್ನಲ್ಲಿ ನಲೆಯೂರಿ ನಿಂತರು. ಆದರೆ ರನ್ ವೇಗ ಹೆಚ್ಚದಿರುವುದು ತಂಡಕ್ಕೆ ಹಿನ್ನಡೆಯಾಯಿ. ಡೆಲ್ಲಿ ಕ್ಯಾಪಿಟಲ್ಸ ಬೌಲರ್ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿ ಹಾಲಿ ಚಾಂಪಿಯನ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಹೀಗಾಗಿ ಜಿಟಿ ತಂಡ ಈ ಪಂದ್ಯದಲ್ಲಿ 125 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ 5 ರನ್ಗಳ ಅಂತರದ ಗೆಲುವು ಸಾಧಿಸಿದೆ.