ಭಾನುವಾರ, ಏಪ್ರಿಲ್ 9ರಂದು ಅಹಮದಾಬಾದ್ನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್)ನ 13ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿನಲ್ಲಿ ಈ ಪಂದ್ಯವು ಅತ್ಯಂತ ರೋಮಾಂಚನಕಾರಿ ಪಂದ್ಯವಾಗಿತ್ತು. ಕ್ರಿಕೆಟ್ ಅಭಿಮಾನಿಗಳು ನಂಬಲಾಸಾಧ್ಯ ಪಂದ್ಯವನ್ನು ವೀಕ್ಷಿಸಿದರು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಹಣಾಹಣಿಯು ಅಂತಿಮ ಓವರ್ನಲ್ಲಿ ತಿರುವು ಪಡೆದುಕೊಂಡಿದ್ದು ವಿಶೇಷವಾಗಿತ್ತು.

ಸಾಯಿ ಸುದರ್ಶನ್, ವಿಜಯ್ ಶಂಕರ್ ಮತ್ತು ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಗಳನ್ನು ಹೊಂದಿದ್ದ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹ್ಯಾಟ್ರಿಕ್ ವಿಕೆಟ್ ಮೂಲಕ ಗಮನ ಸೆಳೆದಿದ್ದು ರಶೀದ್ ಖಾನ್.
ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕತ್ವ ವಹಿಸಿದ್ದ 24 ವರ್ಷದ ರಶೀದ್ ಖಾನ್ ಅವರು ಆಂಡ್ರೆ ರಸೆಲ್, ಸುನಿಲ್ ನರೈನ್ ಮತ್ತು ಶಾರ್ದೂಲ್ ಠಾಕೂರ್ ಅವರ ವಿಕೆಟ್ ಪಡೆಯುವ ಮೂಲಕ ಐಪಿಎಲ್ 2023ರ ಮೊದಲ ಹ್ಯಾಟ್ರಿಕ್ ಸಾಧಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ 16 ಓವರ್ಗಳಲ್ಲಿ 5 ವಿಕಟ್ಗೆ 155 ರನ್ ಗಳಿಸಿತ್ತು ಹಾಗೂ ಕೆಕೆಆರ್ ತಂಡಕ್ಕೆ ಕೊನೆಯ 24 ಎಸೆತಗಳಲ್ಲಿ 50 ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಕೆಕೆಆರ್ ತಂಡದ ಪ್ರದರ್ಶನವನ್ನು ಗಮನಿಸಿದರೆ, ಅವರು ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿತ್ತು.

ಆದರೆ, ಈ ವೇಳೆ ದಾಳಿಗಿಳಿದ ಗುಜರಾತ್ ಟೈಟನ್ಸ್ ಹಂಗಾಮಿ ನಾಯಕ ರಶೀದ್ ಖಾನ್ ತನ್ನ ಓವರ್ನ ಮೊದಲ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್ ಆಂಡ್ರೆ ರಸ್ಸೆಲ್ರನ್ನು ಕೇವಲ 1 ರನ್ಗೆ ಔಟ್ ಮಾಡುವ ಮೂಲಕ ಎಲ್ಲರ ಆಲೋಚನೆಗಳನ್ನು ತಲೆಕೆಳಗಾಗಿ ಮಾಡಿದರು. ನ
ನಂತರ ಬಂದ ಸುನಿಲ್ ನರೇನ್ ಅವರು ರಶೀದ್ ಖಾನ್ ಅವರ ಎರಡನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ಗೆ ಮರಳಿದರು. ಆಗ ಬಂದ ಆರ್ಸಿಬಿ ವಿರುದ್ಧ ಸ್ಫೋಟಕ ಅರ್ಧಶತಕ ಬಾರಿ ಪಂದ್ಯಶ್ರೇಷ್ಠ ಆಟಗಾರನಾಗಿದ್ದ ಶಾರ್ದೂಲ್ ಠಾಕೂರ್ ಅವರನ್ನು ರಶೀದ್ ಖಾನ್ ತಮ್ಮ ಮೂರನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡುವ ಹ್ಯಾಟ್ರಿಕ್ ವಿಕೆಟ್ ಪಡೆದರು.
Suniel Shetty On KL Rahul: ರಾಹುಲ್ಗೆ ನಾನು ಕ್ರಿಕೆಟ್ ಹೇಳಿಕೊಡಲು ಸಾಧ್ಯವಿಲ್ಲ; ಸುನೀಲ್ ಶೆಟ್ಟಿ
ಐಪಿಎಲ್ ಇತಿಹಾಸದಲ್ಲಿ ಇದು 22ನೇ ಹ್ಯಾಟ್ರಿಕ್ ವಿಕೆಟ್ ಆಗಿದ್ದು, ಗುಜರಾತ್ ಟೈಟನ್ಸ್ನ ರಶೀದ್ ಖಾನ್ ಈ ಸಾಧನೆ ಮಾಡಿದ ಒಟ್ಟಾರೆ 19ನೇ ಬೌಲರ್ ಎನಿಸಿಕೊಂಡರು.

ಆಗ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಿಂಕು ಸಿಂಗ್ ಮಾತ್ರ ಕ್ರೀಸ್ನಲ್ಲಿದ್ದರು. ಕೆಕೆಆರ್ ತಂಡದಲ್ಲಿ ಆಗಲೇ ಗೆಲುವಿನ ಭರವಸೆ ಕಮರಿಹೋಗಿತ್ತು. ಆದರೆ, ಕೊನೆಯ ಓವರ್ನಲ್ಲಿ ಪಂದ್ಯ ಮತ್ತೊಂದು ತಿರುವು ಪಡೆದುಕೊಂಡಿತು.
ಕೆಕೆಆರ್ಗೆ ಅಸಾಧ್ಯ ಗೆಲುವು ತಂದು ಕೊಟ್ಟ ರಿಂಕು ಸಿಂಗ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲುವಿಗೆ 29 ರನ್ ಅಗತ್ಯವಿತ್ತು. ಈ ವೇಳೆ ರಿಂಕು ಸಿಂಗ್ ಮತ್ತು ಉಮೇಶ್ ಯಾದವ್ ಕ್ರೀಸ್ನಲ್ಲಿದ್ದರು. ಗುಜರಾತ್ ಟೈಟನ್ಸ್ ತಂಡ ಗೆದ್ದೇ ಬಿಟ್ಟಿತು ಎಂದು ಅಂದುಕೊಂಡಿದ್ದರು.
ಕೊನೆಯ ಓವರ್ ಎಸೆದ ಯಶ್ ದಯಾಳ್ ತಮ್ಮ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಒಂದು ರನ್ ಗಳಿಸಿ ರಿಂಕು ಸಿಂಗ್ಗೆ ಸ್ಟ್ರೈಕ್ ನೀಡಿದರು. ಕೊನೆಯ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇಡೀ ಕೆಕೆಆರ್ ತಂಡ ನಂಬಲಾಸಾಧ್ಯ ವಿಜಯವನ್ನು ಆಚರಿಸಲು ಪಿಚ್ಗೆ ಓಡಿದರು ಮತ್ತು ರಿಂಕು ಸಿಂಗ್ರನ್ನು ತಬ್ಬಿ ಅಭಿನಂದಿಸಿದರು. ರಿಂಕು ಸಿಂಗ್ 21 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರು.