

ನವದೆಹಲಿ, ಜುಲೈ 17: ಈ ಬಾರಿಯ ಫೀಫಾ ವಿಶ್ವಕಪ್ ಟೂರ್ನಿ ಕ್ರೀಡೆಯಾಚೆಗಿನ ಅನೇಕ ವಿಚಾರಗಳಿಗೂ ಚರ್ಚೆಗೆ ಒಳಗಾಗಿದೆ.
ಜತೆಗೆ ಆಟಗಾರರ ಮೂಲ, ಅವರ ಬಣ್ಣ, ಅವರ ಧರ್ಮ ಮುಂತಾದ ಸಂಗತಿಗಳೂ ಮುನ್ನೆಲೆಗೆ ಬಂದಿವೆ. ಆದರೆ, ಭಾರತ ಕ್ರಿಕೆಟ್ ತಂಡದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಈ ಟೂರ್ನಿಯನ್ನು ಸಾಮರಸ್ಯದ ಪ್ರಬಲ ಸಂದೇಶವನ್ನು ನೀಡಲು ಬಳಸಿಕೊಂಡಿದ್ದಾರೆ.
ಪುಟಾಣಿ ದೇಶವಾಗಿದ್ದರೂ ವಿಶ್ವಕಪ್ನಲ್ಲಿ ಯಾರೂ ಊಹಿಸದಂತೆ ಆಟವಾಡಿ ಫೈನಲ್ಗೆ ಏರಿದ್ದ ಕ್ರೊವೇಷಿಯಾ ಜಗತ್ತಿಗೆ ಅಚ್ಚರಿಯುಂಟು ಮಾಡಿತ್ತು. ಈ ದೇಶವನ್ನು ನೋಡಿ ನಾವು ಕಲಿಯುವುದು ಇದೆ ಎಂದು ಭಜ್ಜಿ ಟ್ವೀಟ್ ದೂಸ್ರಾ ಎಸೆದಿದ್ದಾರೆ.
2016ರ ಜನಗಣತಿ ಪ್ರಕಾರ ಕೇವಲ 40 ಲಕ್ಷ ಜನಸಂಖ್ಯೆಯಿರುವ ಚಿಕ್ಕ ದೇಶವಾಗಿರುವ ಕ್ರೊವೇಷಿಯಾ, ಈ ಬಾರಿಯ
ಫೈನಲ್ನಲ್ಲಿ ಗೆದ್ದಿದ್ದರೆ ವಿಶ್ವಕಪ್ ಗೆದ್ದ ಎರಡನೆಯ ಅತ್ಯಂತ ಚಿಕ್ಕ ದೇಶ ಎನಿಸಿಕೊಳ್ಳುತ್ತಿತ್ತು.
ಆದರೆ, ಟೂರ್ನಿಯುದ್ದಕ್ಕೂ ತೋರಿಸಿದ ಪ್ರದರ್ಶನವನ್ನು ಆ ತಂಡಕ್ಕೆ ನಿರ್ಣಾಯಕವಾದ ಕೊನೆಯ ಪಂದ್ಯದಲ್ಲಿ ಪುನರಾವರ್ತಿಸಲು ಸಾಧ್ಯವಾಗಲಿಲ್ಲ.
ಅದರಾಚೆಗೆ ಫುಟ್ಬಾಲ್ನ ದೈತ್ಯ ತಂಡಗಳನ್ನು ಬಗ್ಗುಬಡಿದು ಮಣಿಸಿದ ಕ್ರೊವೇಷಿಯಾದ ಆಟ ಎಲ್ಲರ ಗಮನ ಸೆಳೆದಿದೆ.
ಭಾನುವಾರದ ಪಂದ್ಯದ ಆರಂಭಕ್ಕೂ ಮುನ್ನ ಹರ್ಭಜನ್ ಸಿಂಗ್, ಕ್ರೊವೇಷಿಯಾದ ಉದಾಹರಣೆಯನ್ನು ಭಾರತೀಯರಿಗೆ ನೀಡಿದ್ದಾರೆ.
ಸರಿಸುಮಾರು 50 ಲಕ್ಷ ಜನಸಂಖ್ಯೆಯಿರುವ ಪುಟ್ಟ ದೇಶ ವಿಶ್ವಕಪ್ ಫೈನಲ್ ತಲುಪಿದೆ. ಆದರೆ ನಾವು 135 ಕೋಟಿ ಜನಸಂಖ್ಯೆ ಇರುವ ಭಾರತೀಯರು ಈಗಲೂ ಹಿಂದೂ-ಮುಸ್ಲಿಂ ಆಟವಾಡುವುದನ್ನು ಮುಂದುವರಿಸಿದ್ದೇವೆ ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅವರು 'ನಿಮ್ಮ ಯೋಚನಾಲಹರಿಯನ್ನು ಬದಲಿಸಿ, ದೇಶವೂ ಬದಲಾಗುತ್ತದೆ' ಎಂಬ ಹ್ಯಾಶ್ಟ್ಯಾಗ್ ಬಳಸಿದ್ದಾರೆ.
ಮರು ದಿನ ತಮ್ಮ ಪೋಸ್ಟ್ಗೆ ವಿಭಿನ್ನ ಬಗೆಯ ಪ್ರತಿಕ್ರಿಯೆಗಳು ಬಂದಿರುವುದನ್ನು ಗಮನಿಸಿದ ಭಜ್ಜಿ, ತಮ್ಮ ಮಾತುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ಭಜ್ಜಿ ಟ್ವೀಟ್ಗೆ ವ್ಯಾಪಕ ಟೀಕೆಗಳು ಹಾಗೂ ಸಹಮತಗಳು ವ್ಯಕ್ತವಾಗಿವೆ. ಎರಡು ಬಾರಿ ವಿಶ್ವಕಪ್ ಕ್ರಿಕೆಟ್ ಗೆದ್ದಿದ್ದೇವೆ. ನಮ್ಮ ಶೂಟರ್ಗಳು, ಕುಸ್ತಿಪಟುಗಳು, ಬಾಕ್ಸರ್ಗಳು, ಅಥ್ಲೀಟ್ಗಳು ಮುಂತಾದ ಕ್ರೀಡಾಪಟುಗಳು ಒಲಿಂಪಿಕ್ಸ್, ಕಾಮನ್ವೆಲ್ತ್ ಮುಂತಾದೆಡೆ ಮಿಂಚುತ್ತಿದ್ದಾರೆ.
ನಮ್ಮ ಇಸ್ರೊ ಅಮೋಘ ಸಾಧನೆ ಮಾಡಿದೆ. 135 ಕೋಟಿ ಜನರಿರುವ ದೇಶದ ಸಾಧನೆ ಬಗ್ಗೆ ಹೇಳಲು ಸಾಕಷ್ಟಿವೆ. ಫುಟ್ಬಾಲ್ ಒಂದೇ ಅಳತೆಗೋಲು ಅಲ್ಲ ಎಂಬಂತಹ ಕಟುವಾದ ಟ್ವೀಟ್ಗಳು ಭಜ್ಜಿ ಅಭಿಪ್ರಾಯವನ್ನು ವಿರೋಧಿಸಿವೆ.
'ನನ್ನ ಟ್ವೀಟ್ಗೆ ಮಿತಿ ಮೀರಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎನಿಸುತ್ತದೆ. ನಾನು ಹೇಳಬೇಕಿದ್ದನ್ನು ಈಗಾಗಲೇ ಹೇಳಿದ್ದೇನೆ. ನಾವು ಅದರ ಸಕಾರಾತ್ಮಕ ಭಾಗವನ್ನು ಗಮನಿಸಬೇಕು.
ಇಷ್ಟು ಬೃಹತ್ ದೇಶವಾಗಿಯೂ, ಇಷ್ಟು ದೊಡ್ಡ ಕ್ರೀಡಾ ಸಂಸ್ಕೃತಿ ಹೊಂದಿದ್ದರೂ, ನಾವು ವಿಶ್ವಕಪ್ ಫುಟ್ಬಾಲ್ ಫೈನಲ್ಸ್ನಲ್ಲಿ ಆಡುವುದರಿಂದ ದಶಕಗಳಷ್ಟು ಹಿಂದೆ ಇದ್ದೇವೆ ಎನ್ನುವುದನ್ನು ನೋಡಿದಾಗ ನೋವಾಗುತ್ತದೆ' ಎಂದು ಭಜ್ಜಿ ಪ್ರತಿಕ್ರಿಯೆ ನೀಡಿದ್ದಾರೆ.