
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಲೀಗ್ ಅಂತ್ಯದಲ್ಲಿ ಸಿಎಸ್ಕೆ ಪರ ಬ್ಯಾಟಿಂಗ್ ಮಾಡಿದ್ದ ರುತುರಾಜ್ ಗಾಯಕ್ವಾಡ್ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಅದಾಗಲೇ ಪ್ಲೇ ಆಫ್ನಿಂದ ಹೊರಬಿದ್ದರೂ ಕೊನೆಯ ಮೂರು ಲೀಗ್ ಪಂದ್ಯಗಳನ್ನು ಗೆದ್ದು ಬೀಗಿತು. ಈ ಪಂದ್ಯಗಳಲ್ಲಿ ಸತತ ಮೂರು ಅರ್ಧಶತಕ ಕಲೆಹಾಕಿದ್ದ ರುತುರಾಜ್ ಗಾಯಕ್ವಾಡ್ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಆದರೆ ಐಪಿಎಲ್ನಿಂದ ಸಿಎಸ್ಕೆ ಲೀಗ್ ಹಂತದಲ್ಲೇ ಹೊರಬಿದ್ದ ಬಳಿಕ ರುತುರಾಜ್ ತಮ್ಮ ಐಪಿಎಲ್ 2020 ಜರ್ನಿಯನ್ನು ಮೆಲಕು ಹಾಕಿದ್ದಾರೆ. ಈ ವರ್ಷ ನಾನು ಪಂದ್ಯವನ್ನು ಆಡುತ್ತೇನೆ ಎಂದು ಅಂದುಕೊಂಡಿರ್ಲಿಲ್ಲ ಎಂದಿದ್ದಾರೆ.
ಯುಎಇಗೆ ಇಳಿದ ನಂತರ ಕೋವಿಡ್ -19 ಪಾಸಿಟಿವ್ ಆದ ಇಬ್ಬರು ಆಟಗಾರರಲ್ಲಿ ಗಾಯಕ್ವಾಡ್ ಕೂಡ ಒಬ್ಬರು. ಅವರ ಮೊದಲ ಐಪಿಎಲ್ ಪಂದ್ಯವನ್ನು ಆಡುವ ಕನಸು ಸ್ವ್ಯಾಬ್ ಪರೀಕ್ಷೆಗಳು ಮತ್ತು ಮಾತ್ರೆಗಳೊಂದಿಗೆ ಕೊನೆಗೊಂಡಿತು. ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ರುತುರಾಜ್ ತನ್ನ ಮೊದಲ ಐಪಿಎಲ್ ಅನುಭವವನ್ನು ಹಂಚಿಕೊಂಡಿದ್ದಾನೆ.
"ನಾನು ಈ ಐಪಿಎಲ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಹೊರಗುಳಿಯಬಹುದು ಎಂದು ಭಾವಿಸಿದ್ದೆ. ಕೋವಿಡ್ -19 ಪಾಸಿಟಿವ್ ಆದ ಬಳಿಕ 22 ದಿನಗಳ ಕಾಲ ನನ್ನನ್ನು ನಾನು ಹೋಟೆಲ್ ಕೋಣೆಯಲ್ಲಿ ಬಂಧಿಸಿಡುವುದು ತುಂಬಾ ಕಷ್ಟಕರವಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕೆಂಬುದು ನನ್ನ ಕನಸಾಗಿತ್ತು. 14 ದಿನಗಳ ಕ್ವಾರಂಟೈನ್ ಕೊನೆಗೊಳಿಸಿದಂತೆಯೇ, ಹೆಚ್ಚು ಕೆಟ್ಟ ಸುದ್ದಿಗಳು ಬಂದವು. ಮತ್ತೊಮ್ಮೆ ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದಿತು, ಮತ್ತೊಂದು ವಾರ ಕ್ವಾರಂಟೈನ್ ಆಗುವ ಚಿಂತೆ ಮಾಡಿದಾಗ ನಾನು ಒಂದೇ ಒಂದು ಪಂದ್ಯವನ್ನು ಸಹ ಆಡುವುದಿಲ್ಲ ಎಂದು ಭಾವಿಸಿದೆ "ಎಂದು ಗಾಯಕ್ವಾಡ್ ಹೇಳಿದರು.
ಕ್ವಾರಂಟೈನ್ ಇದ್ದ ಸಂದರ್ಭದಲ್ಲಿ ತಂಡದ ನಾಯಕ ಹಾಗೂ ತಮ್ಮ ಆದರ್ಶ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೇಗೆ ತನಗೆ ಪ್ರೇರಣೆ ನೀಡಿದರು ಎಂಬುದನ್ನೂ ಸಹ ಗಾಯಕ್ವಾಡ್ ನೆನಪಿಸಿಕೊಂಡಿದ್ದಾರೆ. '' ನಗುವಿನ ಮೂಲಕ ಇದನ್ನು ಎದುರಿಸು, ಅದು 14 ದಿನಗಳಲ್ಲಿ ಮುಗಿಯುತ್ತದೆ'' ಎಂದು ಧೋನಿ ಧೈರ್ಯ ತುಂಬಿದ್ದರು.
ರುತುರಾಜ್ ಹೋಟೆಲ್ ಕೋಣೆಯಲ್ಲಿ ಟಿವಿ ಸೀರಿಸ್ಗಳನ್ನು ವೀಕ್ಷಿಸುವುದು ಮತ್ತು ತಂಡದ ಸಹ ಆಟಗಾರರೊಂದಿಗೆ ಜ್ಹೂಮ್ ಕಾಲ್ ಮಾಡಿ ಮಾತನಾಡುತ್ತಿದ್ದುದ್ದಾಗಿ ಹೇಳಿದ್ದಾರೆ.