
ನವದೆಹಲಿ, ನವೆಂಬರ್ 2: ಏಷ್ಯಾಕಪ್ ವೇಳೆ ಗಾಯಕ್ಕೀಡಾಗಿದ್ದರಿಂದ ಸದ್ಯ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆದರೆ ಅವರ ಅಣ್ಣ ಕೃಣಾಲ್ ಪಾಂಡ್ಯ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ತಂಡ ಸೇರಿಕೊಳ್ಳುವುದರಲ್ಲಿದ್ದಾರೆ. ಅಥವಾ ಆಸ್ಟ್ರೇಲಿಯಾ ಟಿ20 ಸರಣಿಗಾದ್ರೂ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿದ್ದಾರೆ.
ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ಟಿ20 ಸರಣಿಯ ವೇಳೆ ಗಾಯಕ್ಕೀಡಾಗಿದ್ದ ವಾಶಿಂಗ್ಟನ್ ಸುಂದರ್ ಜಾಗಕ್ಕೆ ಕೃಣಾಲ್ ಬಂದಿದ್ದರು. ಆ ಸಂದರ್ಭ ಕೃಣಾಲ್ ಗೆ ಭಾರತದ ಡ್ರೆಸ್ಸಿಂಗ್ ರೂನಲ್ಲಿ ಒಂದಿಷ್ಟು ಹೊತ್ತು ಕಳೆಯುವ ಅವಕಾಶ ಲಭಿಸಿತ್ತು. ಆಗ ಕೃಣಾಲ್ ಧೋನಿಯಂತ ಅನುಭವಿ ಆಟಗಾರರನ್ನು ಗಮನಿಸಿದ್ದರಂತೆ.
'ಭಾರತ ಎ ತಂಡದಲ್ಲಿದ್ದ ನನಗೆ ಟೀಮ್ ಇಂಡಿಯಾ ಸೇರಿಕೊಳ್ಳುವ ಅವಕಾಶ ಅವತ್ತು ಲಭಿಸಿತ್ತು. ನಾನು ಅಲ್ಲಿ ಕಳೆದಿದ್ದ ಕಡಿಮೆ ಅವಧಿಯೇ ಇರಬಹುದು. ಆದರೆ ಆ ಆರು ದಿನಗಳಲ್ಲಿ ನಾನು ಮಹಿ ಭಾಯಿಯನ್ನು (ಎಂಎಸ್ ಧೋನಿ) ಬಹಳ ಹತ್ತಿರದಿಂದ ನೋಡಿದ್ದೆ' ಎಂದು ಕಣಾಲ್ ಹೇಳಿಕೊಂಡಿದ್ದಾರೆ.
'ಅವತ್ತೇ ನಾನೂ ಧೋನಿಯಂತಾಗಬೇಕು ಅಂತ ನನಗೆ ಅನ್ನಿಸಿತ್ತು. ಅವರ ಬದುಕಿನ ಪರಿ, ಸರಳತೆ, ಧನ್ಯತಾಭಾವ ಎಲ್ಲವೂ ಸೆಳೆಯಿತು. ಬದುಕಿನಲ್ಲಿ ಧೋನಿ ತುಂಬಾ ಸಾಧಿಸಿದ್ದಾರೆ. ಹಾಗಿದ್ದೂ ಅವರು ಏನೂ ಸಾಧಿಸಿಲ್ಲ ಎನ್ನುವಂತೆ ಈಗಲೂ ಎಲ್ಲರೊಂದಿಗೆ ಸರಳರಾಗಿ ನಡೆದುಕೊಳ್ಳುವುದು ಇಷ್ಟವಾಗುತ್ತದೆ' ಎಂದು ಕೃಣಾಲ್, ಕೂಲ್ ಕ್ಯಾಪ್ಟನ್ ಬಗ್ಗೆ ಮೆಚ್ಚುಗೆಯಾಡಿದರು.