

ಮುಂಬೈ, ಫೆಬ್ರವರಿ 26: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳಿಗೆ ದಾಳಿ ನಡೆಸಿದೆ. ಇದಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪಾಕ್ಗೆ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ. ಟ್ವೀಟ್ನಲ್ಲಿ ಪಾಕಿಸ್ತಾನವನ್ನು ತೆಂಡೂಲ್ಕರ್ ಎಚ್ಚರಿಸಿದ್ದಾರೆ.
ಪುಲ್ವಾಮಾ ಪ್ರತಿದಾಳಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಸಚಿನ್, 'ನಮ್ಮ ಒಳ್ಳೆಯತನವನ್ನು ದೌರ್ಬಲ್ಯವೆಂದು ಯಾವತ್ತಿಗೂ ಭಾವಿಸಬೇಡಿ' ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ. ಜೊತೆಗೆ 'ಐಎಎಫ್ಗೆ ನನ್ನ ವಂದನೆಗಳು. ಜೈ ಹಿಂದ್' ಎಂದೂ ಸಾಲನ್ನು ಸೇರಿಸಿಕೊಂಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಭಾರತೀಯ 40ಕ್ಕೂ ಅಧಿಕ ಯೋಧರು ಮೃತರಾಗಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಭಾರತ, ಪಾಕಿಸ್ತಾನದ ಬಾಲಾಕೋಟ್, ಚಕೋತಿ ಮತ್ತು ಮುಝಾಫರಬಾದ್ ನಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ 350ಕ್ಕೂ ಅಧಿಕ ಉಗ್ರರು ಹತರಾಗಿದ್ದ ಬಗ್ಗೆ ಭಾರತೀಯ ಸೇನೆ ಮಾಹಿತಿ ನೀಡಿತ್ತು.
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಪಾಕ್ ಬೆಂಬಲಿತ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಇದರಲ್ಲಿ 40ಕ್ಕೂ ಹೆಚ್ಚು ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ದಾಳಿ ನಡೆಸಿ ಸುಮಾರು 325 ಉಗ್ರರು ಮತ್ತು 25-27 ತರಬೇತಿ ನಿರತ ಉಗ್ರರನ್ನು ಬಲಿ ಪಡೆದಿದೆ.