ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಹೆಚ್ಚುತ್ತಿರುವ ವಿವಾದದ ನಡುವೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಚಾಂಪಿಯನ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಚಾಂಪಿಯನ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಪಾಕಿಸ್ತಾನದ ಹೊರಗೆ ಭಾರತದ ಪಂದ್ಯಗಳನ್ನು ಆಯೋಜಿಸಲು ಪಿಸಿಬಿಗೆ ಒಂದೇ ಒಂದು ಪರಿಹಾರ ಉಳಿದಿದೆ.
ಟೀಮ್ ಇಂಡಿಯಾ ಹೈಬ್ರಿಡ್ ಮಾದರಿ ಆಡಲು ಒಪ್ಪಿಕೊಂಡಿದೆ. ಆದರೆ ಭಾರತದ ಈ ನಿಲುವಿಗೆ ಪಿಸಿಬಿ ಇನ್ನೂ ಪ್ರತಿಕ್ರಿಯಿಸಿಲ್ಲ. ಇಂತಹ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಿದ್ಧತೆಗೆ ಬ್ರೇಕ್ ಬಿದ್ದಂತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇನ್ನೆರಡು ವಾರಗಳಲ್ಲಿ ಹೊರ ಬೀಳಲಿದೆ. ಚಾಂಪಿಯನ್ಸ್ ಟ್ರೋಫಿ ವಿವಾದದ ನಡುವೆ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಕ್ಕೂ ಮುನ್ನ ಮೊಹಮ್ಮದ್ ರಿಜ್ವಾನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಚಾಂಪಿಯನ್ಸ್ ಟ್ರೋಫಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ರಿಜ್ವಾನ್ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಇಡೀ ತಂಡವನ್ನು ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ರಿಜ್ವಾನ್ ಆಹ್ವಾನಿಸಿದ್ದಾರೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಎಲ್ಲರಿಗೂ ಸ್ವಾಗತ. ಯಾವುದೇ ಆಟಗಾರರು ಬಂದರೂ ನಾವು ಅವರನ್ನು ಸ್ವಾಗತಿಸುತ್ತೇವೆ. ಇದು ನಮ್ಮ ನಿರ್ಧಾರವಲ್ಲ. ಇದು ಪಿಸಿಬಿಯ ನಿರ್ಧಾರ. ಯಾವುದೇ ನಿರ್ಧಾರವಾಗಿದ್ದರೂ ಎಲ್ಲರೂ ಚರ್ಚಿಸಿ ಸರಿ ತೆಗೆದುಕೊಳ್ಳುತ್ತಾರೆ ಅಂದುಕೊಳ್ಳುತ್ತೇನೆ ಎಂದು ರಿಜ್ವಾನ್ ಹೇಳಿದ್ದಾರೆ.
'ಇತ್ತೀಚೆಗೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ದಕ್ಷಿಣ ಆಫ್ರಿಕಾದಲ್ಲಿರುವ ಪಾಕಿಸ್ತಾನಿ ಅಭಿಮಾನಿಯೊಬ್ಬರು ತಮ್ಮ ದೇಶಕ್ಕೆ ಭೇಟಿ ನೀಡುವ ಬಗ್ಗೆ ಪ್ರಶ್ನೆ ಕೇಳಿದರು. 'ಏಕೆ ಪಾಕಿಸ್ಥಾನಕ್ಕೆ ಬರಬಾರದು?" ಎಂದು ಪಾಕ್ ಅಭಿಮಾನಿ ಕೇಳಿದ್ದಕ್ಕೆ ಸೂರ್ಯ ನಗುತ್ತಾ 'ಏಯ್ ಅಣ್ಣ! ನಮ್ಮ ಕೈಯಲ್ಲಿ ಕೆಲವಿದೆ' ಉತ್ತರಿಸಿದ್ದರು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಜೊತೆಗೆ ಸಹಾ ಆಟಗಾರ ರಿಂಕು ಸಿಂಗ್ ಕೂಡ ಇದ್ದರು.