ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟಿ20 ಟೂರ್ನಿಯ "ಎ" ಗುಂಪಿನ ಪಂದ್ಯ ದುಬೈನಲ್ಲಿ ಕಳೆದ ಭಾನುವಾರ ನಡೆಯಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆ ಸಂಘಟಿತ ಆಟದ ಪ್ರದರ್ಶನವನ್ನು ನೀಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯಕ್ಕಿಂತಲೂ ಭಾರೀ ಸದ್ದು ಮಾಡುತ್ತಿರುವುದು ಭಾರತೀಯ ಆಟಗಾರರು ಪಾಕ್ ಆಟಗಾರರಿಗೆ ಕೈ ಕುಲುಕದೇ ಇರುವುದು. ಈ ಅವಮಾನ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಗ್ ಶಾಕ್ ನೀಡಿದೆ. ಆದರೆ ಈಗ ಮತ್ತೊಂದು ಶಾಕ್ ಬೀಳುವ ಸಾಧ್ಯತೆ ಇದ್ದು, ಇದರಿಂದ ಚೇತರಿಸಿಕೊಳ್ಳುವುದು ಪಾಕ್ಗೆ ಕೊಂಚ ಕಷ್ಟವಾಗಲಿದೆ.
ಭಾನುವಾರ ಟೀಮ್ ಇಂಡಿಯಾ ಪಂದ್ಯ ಗೆದ್ದ ಬಳಿಕ ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಿಕೊಳ್ಳದೇ ಇರುವು ವಿಷಯಕ್ಕೆ ಸಂಬಂಧಿಸಿದಂತೆ ಪಿಸಿಬಿ, ಐಸಿಸಿಗೆ ದೂರನ್ನು ನೀಡಿದೆ. ಈ ವೇಳೆ ಪಿಸಿಬಿ ಇಟ್ಟಿರುವ ಆ ಒಂದು ಬೇಡಿಕೆ ನಿಶ್ಚಿತವಾಗಿ ಪಾಕ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿದೆ. ಐಸಿಸಿಗೆ ನೀಡಿದ ದೂರಿನಲ್ಲಿ ಪಿಸಿಬಿ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದೆ. ಆದರೆ ಐಸಿಸಿ ಪಿಸಿಬಿಯ ಬೇಡಿಕೆಗೆ ಸೊಪ್ಪು ಹಾಕುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಮ್ಯಾಚ್ ರೆಫ್ರಿಯನ್ನು ವಜಾಗೊಳಿಸದೇ ಇದ್ದರೆ, ಏಷ್ಯಾ ಕಪ್ನ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಪಿಸಿಬಿ ತಿಳಿಸಿದೆ.

ಪಿಸಿಬಿ ದೂರಿಗೆ ಇನ್ನು ಐಸಿಸಿಯಿಂದ ಯಾವುದೇ ಉತ್ತರ ಬಂದಿಲ್ಲ. ಕ್ರಿಕ್ಬಜ್ ವರದಿಯ ಪ್ರಕಾರ ಪಿಸಿಬಿಯ ಬೇಡಿಕೆಯನ್ನು ಐಸಿಸಿ ಈಡೇರಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಹುತ್ತದೆ. ಇನ್ನು ಪಾಕ್ ಮಂಡಳಿ ಮಾಡಿದ ಆರೋಪಗಳಿಗೆ ಸಾಕ್ಷ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಐಸಿಸಿ ಮ್ಯಾಚ್ ರೆಫ್ರಿಯನ್ನು ವಜಾಗೊಳಿಸುವ ಯಾವುದೇ ಪ್ರಶ್ನೆ ಇಲ್ಲವೇ ಇಲ್ಲ ಎಂದು ತಿಳಿಸಿದೆ. ಇನ್ನು ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಪಾಕ್ ಆಟಗಾರರಿಗೆ ಕೈ ಕುಲುಕದೇ ಇರುವುದರ ಹಿಂದೆ ಮ್ಯಾಚ್ ರೆಫ್ರಿಯ ಪಾತ್ರವಿಲ್ಲ ಎಂದು ಐಸಿಸಿ ನಂಬಿಕೆ. ಸೂರ್ಯಕುಮಾರ್ ತಮ್ಮ ನಿರ್ಧಾರವನ್ನು ತಾವು ತೆಗೆದುಕೊಂಡಿದ್ದಾರೆ.
ಲಕ್ಷಾಂತರ ಜನರ ಮುಂದೆ ಸಲ್ಮಾನ್ ಅಲಿ ಆಘಾ ಅವರನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ. ಈ ಮುಜುಗರದಿಂದ ಪಾರು ಮಾಡಲು ಆಂಡಿ ಪಾಕ್ ನಾಯಕನಿಗೆ ಮೊದಲೇ ಹೇಳಬೇಕ್ಕಿತ್ತು ಪಾಕ್ ವಾದವಾಗಿದೆ. ಆದರೆ ಈ ಪ್ರಕರಣದಲ್ಲಿ ಮ್ಯಾಚ್ ರೆಫ್ರಿಯ ಅವರ ಪಾತ್ರ ಏನು ಇಲ್ಲ ಎಂಬುದನ್ನು ಐಸಿಸಿ ನಂಬುತ್ತಿದೆ. ಭಾರತೀಯ ಆಟಗಾರರು ಕೈ ಕುಲುಕದೇ ಇರುವುದಕ್ಕೆ ಪಾಕ್ ಅಸಮಾಧಾನ ವ್ಯಕ್ತ ಪಡಿಸಿದ್ದು, ಮಾಜಿ ಆಟಗಾರರು ಸಹ ಟೀಮ್ ಇಂಡಿಯಾದ ಈ ನಡುವಳಿಕೆಯನ್ನು ಟೀಕಿಸಿದ್ದಾರೆ. ಟೀಮ್ ಇಂಡಿಯಾ ಕ್ರೀಡಾ ಮನೋಭಾವವನ್ನು ಮರೆತಿದೆ ಎಂದು ಅವರು ಆರೋಪಿಸಿದ್ದಾರೆ. ಐಸಿಸಿ ತನ್ನ ನಿರ್ಧಾರವನ್ನು ಇನ್ನು ಪ್ರಕಟಿಸಿಲ್ಲ. ಈ ಮಧ್ಯೆ ಯುಎಇ ವಿರುದ್ಧದ ಪಂದ್ಯಕ್ಕೆ ಪಾಕ್ ಅಂಗಳಕ್ಕೆ ಇಳಿಯುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.