
ಇಸ್ಲಮಾಬಾದ್, ಜೂನ್ 1: ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ಎದುರು ಪಾಕಿಸ್ಥಾನ ಹೀನಾಯಕ ಸೋಲು ಕಂಡಿದ್ದಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಸ್ಟೀಡ್ಸ್ಟಾರ್ ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ದೇಶವಾದ್ದರಿಂದ ಪಾಕಿಸ್ತಾನ ತಂಡಕ್ಕೆ ನಮ್ಮ ಬೆಂಬಲ ಬೇಕಿದೆ ಎಂದು ಪಾಕಿಸ್ತಾನಿಗರನ್ನು ಕುರಿತು ಅಖ್ತರ್ ಹೇಳಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ನಲ್ಲಿ ಶುಕ್ರವಾರ (ಮೇ 31) ನಡೆದಿದ್ದ ವಿಶ್ವಕಪ್ 2ನೇ ಪಂದ್ಯದಲ್ಲಿ ಸರ್ಫರಾಜ್ ಅಹ್ಮದ್ ಬಳಗ, ಕೆರಿಬಿಯನ್ನರ ವಿರುದ್ಧ ಕೇವಲ 105 ರನ್ಗೆ ಆಲ್ ಔಟ್ ಆಗಿತ್ತು. ಇದು 1992ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೇರಿಸಿದ್ದ 74 ರನ್ ಬಳಿಕ, ವಿಶ್ವಕಪ್ ನಲ್ಲಿ ಪಾಕ್ ಗಳಿಸಿದ 2ನೇ ಕನಿಷ್ಠ ಮೊತ್ತವಾಗಿ ಗುರುತಿಸಿಕೊಂಡಿತ್ತು.
ಪಾಕಿಸ್ಥಾನದ ಹೀನಾಯ ಸೋಲು ಪಾಕ್ ಕ್ರಿಕೆಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತಲ್ಲದೆ ಹೆಚ್ಚಿನವರ ಸಿಡುಕು ಪಾಕ್ ನಾಯಕ ಸರ್ಫರಾಜ್ ಮೇಲೆ ತಿರುಗಿತ್ತು. ಸರ್ಫರಾಜ್ ಮೇಲೆ ಕಿಡಿ ಕಾರಿರುವ ಪಾಕ್ ಪತ್ರಕರ್ತರೊಬ್ಬರು ಟ್ವೀಟ್ನಲ್ಲಿ, 'ಟಾಸ್ಗೆ ಬರುವಾಗ ಸರ್ಫರಾಜ್ ಮಖ ಊದಿಕೊಂಡಿತ್ತು. ಈತನಂಥ ಅಯೋಗ್ಯ ನಾಯಕನನ್ನು ನಾನೆಂದೂ ನೋಡಿಲ್ಲ' ಎಂದು ಬರೆದುಕೊಂಡಿದ್ದರು.
ಮಾಜಿ ಮಾರಕವೇಗಿ, 'ರಾವಲ್ಪಿಂಡಿ ಎಕ್ಸ್ಪ್ರೆಸ್' ಖ್ಯಾತಿಯ ಅಖ್ತರ್ ಕೂಡ ಮೊದಲ ಟ್ವೀಟ್ನಲ್ಲಿ, 'ನನಗೆ ಮಾತೇ ಬರುತ್ತಿಲ್ಲ' ಎಂದಿದ್ದರಲ್ಲದೆ ಸರ್ಫರಾಜ್ ಮೇಲೂ ಅಸಮಾಧಾನ ಹೊರ ಹಾಕಿದ್ದರು. ಮತ್ತೊಂದು ಟ್ವೀಟ್ನಲ್ಲಿ 'ಪಂದ್ಯ ಮುಗಿದಾಗಿದೆ. ನನ್ನ ಭಾವನೆಗಳನ್ನು ವಾಪಸ್ಸು ಪಡೆಯುತ್ತಿದ್ದೇನೆ. ಏನೇ ಆದರೂ ಅವರು ನಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಬೇಕು' ಎಂದು ಬರೆದುಕೊಂಡಿದ್ದಾರೆ.