
ನವದೆಹಲಿ, ಮೇ 16: ಟೀಮ್ ಇಂಡಿಯಾ ಅಲ್ ರೌಂಡರ್ ವಿಜಯ್ ಶಂಕರ್ ಇಂಟರ್ ನ್ಯಾಷನಲ್ ಕ್ರಿಕೆಟರ್ ಆಗಿ ತನ್ನ ವೃತ್ತಿ ಬದುಕು ಬದಲಾದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ಇವತ್ತು ವಿಶ್ವಕಪ್ ತಂಡದಲ್ಲಿ ತಾನು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ 2018ರ ನಿದಹಾಸ್ ಟ್ರೋಫಿ ಫೈನಲ್ ಕೂಡ ಕಾರಣ ಎಂದವರು ತಿಳಿಸಿದ್ದಾರೆ.
2018ರ ಮಾರ್ಚ್ 18ರಂದು ನಡೆದಿದ್ದ ನಿದಹಾಸ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಕಾದಾಡಿದ್ದವು. ಇದರಲ್ಲಿ ಶಂಕರ್ 19 ಎಸೆತಗಳಿಗೆ ಕೇವಲ 17 ರನ್ ಗಳಿಸಿದ್ದರು. ಭಾರತ ಸೋಲಿನಂಚಿನಲ್ಲಿ ಇತ್ತಾದರೂ ದಿನೇಶ್ ಕಾರ್ತಿಕ್ ಸಾಹಸದಿಂದ (ಅಜೇಯ 29* ರನ್, 8 ಎಸೆತ) 4 ವಿಕೆಟ್ ಜಯಭೇರಿ ಬಾರಿಸಿತ್ತು.
ಪಂದ್ಯದ ಬಳಿಕ ಹಲವಾರು ಮಂದಿ ಶಂಕರ್ಗೆ ಕರೆ ಮಾಡಿ ತಂಡವನ್ನು ಇಕ್ಕಟ್ಟಿಗೆ ದೂಡಿದ್ದರ ಬಗ್ಗೆ ಮಾತನಾಡಿದ್ದರಂತೆ. ಈ ಹತಾಶೆ, ಅವಮಾನವೇ ವಿಜಯ್ ಶಂಕರ್ ಅವರು ಕ್ರಿಕೆಟ್ ವೃತ್ತಿ ಜೀವನದಲ್ಲಿ ಬೆಳೆಯಲು ಕಾರಣವಾಯ್ತಂತೆ. ಇದನ್ನು ಶಂಕರ್ ಹೇಳಿಕೊಂಡಿದ್ದಾರೆ.
'ನಿದಹಾಸ್ ಟ್ರೋಫಿ ಫೈನಲ್ ಪಂದ್ಯವೇ ನನ್ನನ್ನು ಕ್ರಿಕೆಟರ್ ಆಗಿ ಬದುಕು ಬದಲಿಸಿತು. ಅದೊಂದು ವರ್ಷ ಏನಾಯಿತು, ಆ ಕ್ಷಣ ಎಷ್ಟು ಕಠಿಣವಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆವತ್ತು ನಾನು ಏನಿಲ್ಲವೆಂದರೂ ದೇಶಾದ್ಯಂತ ಸುಮಾರು 50 ದೂರವಾಣಿ ಕರೆಗಳನ್ನು ಸ್ವೀಕರಿಸಿ ನಾನು ಮಾತನಾಡಿದ್ದೆ. ಸಾಮಾಜಿಕ ಜಾಲತಾಣವೂ ನನ್ನನ್ನು ಅಣಕಿಸಿತ್ತು' ಎಂದು ಐಎಎನ್ಎಸ್ ಜೊತೆ ಮಾತನಾಡುತ್ತ ವಿಜಯ್ ಹೇಳಿಕೊಂಡಿದ್ದಾರೆ.