ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯನ್ ತಂಡಗಳ ಪ್ರದರ್ಶನದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ತಂಡಗಳು ಇತರ ಅತ್ಯುತ್ತಮ ಅಂತಾರಾಷ್ಟ್ರೀಯ ತಂಡಗಳು ಪ್ರದರ್ಶಿಸುವ ಪವರ್-ಹಿಟ್ಟಿಂಗ್ ಕೌಶಲ್ಯಗಳೊಂದಿಗೆ ಪೈಪೋಟಿ ನಡೆಸಲು ಹೆಣಗಾಡಬಹುದು ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಭಾರತ ತಂಡವು 2023ರ ಏಕದಿನ ವಿಶ್ವಕಪ್ಗೆ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ರಾಷ್ಟ್ರೀಯ ತಂಡದ ಚುಕ್ಕಾಣಿ ಹಿಡಿದಿಲ್ಲದಿರುವುದು ಕಾರಣ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ರಶೀದ್ ಲತೀಫ್ ಅಭಿಪ್ರಾಯಪಟ್ಟರು.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ ಮುಂಬರುವ 50 ಓವರ್ಗಳ ಐಸಿಸಿ ಪಂದ್ಯಾವಳಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳು ಹೊಸ ತಂತ್ರಗಳನ್ನು ಪರಿಚಯಿಸುವ ನಿರೀಕ್ಷೆಯಿದೆ ಎಂದು ರಶೀದ್ ಲತೀಫ್ ಅವರು ಕ್ರಿಕೆಟ್ ಬಾಜ್ ಯೂಟ್ಯೂಬ್ ಚಾನೆಲ್ನಲ್ಲಿ ನಡೆದ ಚರ್ಚೆಯಲ್ಲಿ ಗಮನಸೆಳೆದರು.
"ಏಷ್ಯಾದ ತಂಡಗಳು ಇತರ ತಂಡಗಳನ್ನು ಎದುರಿಸಲು ಹೆಣಗಾಡುತ್ತವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, 50 ಓವರ್ಗಳ ಪಂದ್ಯಗಳಲ್ಲಿ ವಿಶೇಷವಾಗಿ ಮಧ್ಯಮ ಓವರ್ಗಳಲ್ಲಿ ವೇಗದ ಸ್ಟ್ರೈಕ್ ರೇಟ್ ಅಗತ್ಯವಿದೆ," ಎಂದು ಮಾಜಿ ಕ್ರಿಕೆಟಿಗ ತಿಳಿಸಿದರು.

"ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬ್ಯಾಟರ್ಗಳು ಸ್ಪಿನ್ನರ್ಗಳ ವಿರುದ್ಧ ರಿವರ್ಸ್ ಸ್ವೀಪ್ ಮತ್ತು ಸ್ವಿಚ್ ಶಾಟ್ಗಳನ್ನು ಇತ್ತೀಚಿನ ದಿನಗಳಲ್ಲಿ ಬಹಳ ಮಾರಕವಾಗಿ ಅಳವಡಿಸಿಕೊಂಡಿದ್ದಾರೆ," ಎಂದು ರಶೀದ್ ಲತೀಫ್ ಹೇಳಿದರು.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಇತ್ತೀಚಿನ ಪ್ರದರ್ಶನದ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮಾತನಾಡಿ, ಹೊಸ ಆಟಗಾರರು ತಮ್ಮ ಪಾತ್ರಗಳಲ್ಲಿ ಸರಿಯಾಗಿ ನೆಲೆಕಂಡುಕೊಳ್ಳಲು ತಂಡದ ಮ್ಯಾನೇಜ್ಮೆಂಟ್ ಬಿಡದಿರುವುದು ಸೋಲಿಗೆ ಕಾರಣವೆಂದು ತಿಳಿಸಿದರು.
ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಲೈನ್-ಅಪ್ನಲ್ಲಿ ಆಗಾಗ ಬದಲಾವಣೆ ಮಾಡಿದ್ದಕ್ಕೆ ಭಾರತೀಯ ತಂಡದ ಮ್ಯಾನೇಜ್ಮೆಂಟ್ ಅನ್ನು ಟೀಕಿಸಿದರು. ಇದು ಹೊಸ ಆಟಗಾರರು ತಮ್ಮನ್ನು ತಾವು ನೆಲೆಗೊಳ್ಳುವುದನ್ನು ತಡೆಯುತ್ತದೆ ಎಂದು ರಶೀದ್ ಲತೀಫ್ ಅಭಿಪ್ರಾಯಪಟ್ಟರು.
"ಭಾರತ ತಂಡದ ಮ್ಯಾನೇಜ್ಮೆಂಟ್ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಹಲವಾರು ಆಟಗಾರರನ್ನು ಪ್ರಯೋಗಿಸಿತು. ನಾನು ಅವರ ಬ್ಯಾಟಿಂಗ್ ಬಗ್ಗೆ ಮಾತನಾಡುವುದಾದರೆ, 4ರಿಂದ 7ನೇ ಕ್ರಮಾಂಕದವರೆಗೆ ಬದಲಾವಣೆಗಳೊಂದಿಗೆ ಅವರು ಯಾವುದೇ ಹೊಸ ಆಟಗಾರನಿಗೆ ನೆಲೆಗೊಳ್ಳಲು ಅವಕಾಶ ನೀಡಲಿಲ್ಲ," ಎಂದು ರಶೀದ್ ಲತೀಫ್ ಹೇಳಿದರು.
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಭಾರತ ತಂಡದ ನಾಯಕನಾಗಿ ಮುಂದುವರಿಯಲು ಅವಕಾಶ ನೀಡಿದ್ದರೆ, ಈ ಹೊತ್ತಿಗೆ ಭಾರತ ತಂಡವು ಏಕದಿನ ವಿಶ್ವಕಪ್ಗೆ 100 ಪ್ರತಿಶತ ಸಿದ್ಧವಾಗಿರುತ್ತಿತ್ತು ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ತಿಳಿಸಿದರು.