ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಥಿತಿ ಕೆಟ್ಟದಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಆತಿಥೇಯ ಪಾಕಿಸ್ತಾನ ತಂಡ ಹೊರಗುಳಿದಿದೆ. ಇದಾದ ನಂತರ ಪಾಕಿಸ್ತಾನ ತಂಡ ಎಲ್ಲಾ ಕಡೆಯಿಂದ ಟೀಕೆಗೊಳಗಾಗಿದೆ. ನಾಯಕ ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ನಸೀಮ್ ಶಾ, ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಸ್ಟಾರ್ ಕ್ರಿಕೆಟಿಗರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಟೀಮ್ ಮ್ಯಾನೇಜ್ಮೆಂಟ್ ಕೂಡ ಟೀಕೆಗಳನ್ನು ಎದುರಿಸುವಂತಾಗಿದೆ. ತಂಡದ ಪ್ರದರ್ಶನದ ಬಗ್ಗೆ ಅನುಭವಿ ಆಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಈ ಪಟ್ಟಿಗೆ ಪಾಕಿಸ್ತಾನದ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಸೇರಿದ್ದಾರೆ.

ಇಮ್ರಾನ್ ಖಾನ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಜೈಲಿನಲ್ಲೇ ವೀಕ್ಷಿಸಿದರು. ಇದಾದ ನಂತರ ಅವರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದರು. ಇಮ್ರಾನ್ ಖಾನ್ ಸಹೋದರಿ ಅಲೀಮಾ ಖಾನ್ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ದೇಶದ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಅತೃಪ್ತರಾಗಿದ್ದಾರೆ.
ಅಲಿಮಾ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ಮಾಧ್ಯಮಗಳಿಗೆ ಇಮ್ರಾನ್ ಖಾನ್ ನೀಡಿರುವ ಹೇಳಿಕೆ ಪ್ರಕಾರ, ಭಾರತದ ವಿರುದ್ಧದ ಪಂದ್ಯವನ್ನು ಸೋತಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಜೈಲಿನಿಂದಲೇ ಇಮ್ರಾನ್ ಖಾನ್ ಛೀಮಾರಿ ಹಾಕಿದ್ದಾರೆ. 1996 ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಐಸಿಸಿ ಟೂರ್ನಿಯನ್ನು ಆಯೋಜಿಸಿತ್ತು. 29 ವರ್ಷಗಳ ಹಿಂದೆ ಪಾಕಿಸ್ತಾನ, ಭಾರತ ಮತ್ತು ಶ್ರೀಲಂಕಾ ಜೊತೆಗೆ ಐಸಿಸಿ ಟೂರ್ನಿಯನ್ನು ಆಯೋಜಿಸಿತ್ತು.
ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಸೋಲು ಕಂಡಿತ್ತು. ಇದಾದ ನಂತರ ದುಬೈನಲ್ಲಿ ಭಾರತ ವಿರುದ್ಧದ ಸೋಲಿನ ನಂತರ ಆತಿಥೇಯ ಪಾಕಿಸ್ತಾನ ಎಂಟು ತಂಡಗಳ ಟೂರ್ನಿಯಿಂದ ಹೊರಬಿದ್ದಿದೆ.
1992 ರ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕರಾಗಿದ್ದ ಇಮ್ರಾನ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಕ್ರಿಕೆಟ್ ಅರ್ಹತೆಗಳನ್ನು ಸಹ ಪ್ರಶ್ನಿಸಿದ್ದಾರೆ. ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ತಮ್ಮ ನೆಚ್ಚಿನವರಿಗೆ ನೀಡಿದಾಗ ಕ್ರಿಕೆಟ್ ಅಂತಿಮವಾಗಿ ನಾಶವಾಗುತ್ತದೆ ಹೇಳಿದ್ದಾರೆ.