
ಐಪಿಎಲ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪ್ಲೇಆಫ್ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಇಷ್ಟಾದರೂ ತನ್ನ ಕೊನೆಯ ಮೂರು ಲೀಗ್ ಪಂದ್ಯಗಳನ್ನು ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಸಕಾರಾತ್ಮಕ ಮನೋಭಾವದಿಂದ ನಿರ್ಗಮಿಸಿದೆ.
ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರನಡೆದ ಬಳಿಕ ಸ್ಪಿನ್ನರ್ ಇಮ್ರಾನ್ ತಾಹೀರ್ ಸಿಎಸ್ಕೆ ಅಭಿಮಾನಿಗಳಿಗೆ ' ಭಾರವಾದ ಹೃದಯದಿಂದ ಸಂದೇಶ' ನೀಡಿದ್ದಾರೆ. ಜೊತೆಗೆ ಅವರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈ ವರ್ಷದ ಐಪಿಎಲ್ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಆದರೆ ಅವರು ಸಿಎಸ್ಕೆ ಪರವಾಗಿ ಕಾಣಿಸಿಕೊಂಡಾಗ, ಕಿಂಗ್ಸ್ ಇಲೆವೆನ್ ಪಂಜಾಬ್ (KXIP) ಪರ ಗೆಲ್ಲಲೇಬೇಕಾದ ಪಂದ್ಯದಲ್ಲಿ ತಾಹೀರ್ ಕ್ರಿಸ್ ಗೇಲ್ ಅವರನ್ನು ಔಟ್ ಮಾಡಿದರು. ಪಂದ್ಯದ ಗೆಲುವಿನ ಬಳಿಕ ಸಂದೇಶ ನೀಡಿರುವ ತಾಹೀರ್ ಮುಂದಿನ ವರ್ಷ ತಾನು ಬಲವಾಗಿ ಮರಳುತ್ತೇನೆ ಮತ್ತು ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡುವೆ ಎಂದು ಟ್ವೀಟ್ ಮಾಡಿದ್ದಾರೆ.
"ಕೊನೆಯಲ್ಲಿ ಉತ್ತಮ ಫಿನಿಶ್ ಆದರೆ ಪ್ಲೇಆಫ್ಗೆ ಹೋಗದಿರಲು ಹೃದಯದಲ್ಲಿ ಭಾರವಾದ ಭಾವನೆ. ನೀವು ಎಲ್ಲರೂ ನಿರೀಕ್ಷಿಸಿದ ರೀತಿಯಲ್ಲಿ ಪ್ರದರ್ಶನ ನೀಡಲಿಲ್ಲ ಎಂದು ನೀವು ಭಾವಿಸಿದರೆ ನನ್ನನ್ನು ಕ್ಷಮಿಸಿ. ಅವಕಾಶ ನೀಡಿದರೆ ಮುಂದಿನ ವರ್ಷ ಪ್ರಯತ್ನಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು'' ಎಂದು ತಾಹೀರ್ ಟ್ವೀಟ್ ಮಾಡಿದ್ದಾರೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೋಲಿಸಿ ಟೂರ್ನಿಯಿಂದ ಹೊರನಡೆಯಿತು. ಈ ಸೋಲಿನಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಓಟದಿಂದ ಹೊರಗುಳಿದಿದೆ.