
ಶುಕ್ರವಾರ, ಮಾರ್ಚ್ 26ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಲು ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಜೊತೆಯಾಟವನ್ನು ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಕೊಂಡಾಡಿದ್ದಾರೆ.
ಕೆಎಲ್ ರಾಹುಲ್ ಆಪತ್ಬಾಂಧವನಾಗಿ 91 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಗಳಿಸಿ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು ಮತ್ತು ತಮ್ಮ ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರಿಸಿದರು.
IND vs AUS 1st ODI: ಕೆಎಲ್ ರಾಹುಲ್, ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್; ಆಸೀಸ್ ವಿರುದ್ಧ ಭಾರತಕ್ಕೆ ಗೆಲುವು
ಪಂದ್ಯದ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, "ನಾವು ಬೌಲಿಂಗ್ ಮತ್ತು ಬ್ಯಾಟಿಂಗ್ ಇನ್ನಿಂಗ್ಸ್ಗಳಲ್ಲಿ ಎರಡೂ ಬಾರಿ ಒತ್ತಡದಲ್ಲಿದ್ದೆವು. ನಾವು ತಾಳ್ಮೆಯ ಆಟವನ್ನು ಪ್ರದರ್ಶಿಸಿದೆವು. ಅಂತಹ ಸಂದರ್ಭಗಳಿಂದ ಹೊರಬರಲು ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಪಂದ್ಯವನ್ನು ನಮ್ಮ ಕಡೆ ತಿರುಗಿಸಿಕೊಂಡು ಹಿಡಿತ ಸಾಧಿಸಿದ್ದೇವೆ. ಇಂದು ನಾವು ಆಡಿದ ರೀತಿಯ ಬಗ್ಗೆ ನಾನು ಹೆಮ್ಮೆಪಡುತ್ತೇನೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.

"ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್ ಅತ್ಯುತ್ತಮ ಕ್ಯಾಚ್ಗಳನ್ನು ಪಡೆದರು. ಜಡೇಜಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರು. ಏಕದಿನ ಕ್ರಿಕೆಟ್ನಲ್ಲಿ ಸುದೀರ್ಘ ವಿಶ್ರಾಂತಿಯ ನಂತರ ಪುನರಾಗಮನ ಮಾಡಿದ್ದು ಖುಷಿ ನೀಡಿದೆ. ಒತ್ತಡದ ಸಮಯದಲ್ಲಿ ಕೆಎಲ್ ರಾಹುಲ್ ಜೊತೆ ಉತ್ತಮ ಜೊತೆಯಾಟದ ಅಗತ್ಯವಿತ್ತು. ಅವರಿಬ್ಬರು ಪಂದ್ಯವನ್ನು ಗೆಲ್ಲಿಸಿದ್ದು ಅದ್ಭುತವಾಗಿತ್ತು," ಎಂದು ಹಾರ್ದಿಕ್ ಪಾಂಡ್ಯ ಅವರು ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಆಟವನ್ನು ಶ್ಲಾಘಿಸಿದರು.
"ಕೊನೆಯವರೆಗೂ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಬ್ಯಾಟ್ ಮಾಡಿದ ರೀತಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅವರು ಬ್ಯಾಟಿಂಗ್ ಮಾಡುವುದನ್ನು ನೋಡಿ ತುಂಬಾ ನಿರಾಳವಾಗಿದ್ದೆವು. ಉತ್ತಮ ಗೆಲುವು ದಕ್ಕಿದೆ ಮತ್ತು ಅವರ ಬಗ್ಗೆ ತುಂಬಾ ಹೆಮ್ಮೆಯೆನಿಸುತ್ತಿದೆ," ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡ 35.4 ಓವರ್ಗಳಲ್ಲಿ 188 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಶಮಿ ಬಿಗಿ ಬೌಲಿಂಗ್ ದಾಳಿ ನಡೆಸಿ ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 5.4 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್, ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ನಂತರ ಮಿಚೆಲ್ ಸ್ಟಾರ್ಕ್ ಸ್ವಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಅಗ್ರ ಕ್ರಮಾಂಕ, 39 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ 44 ರನ್ಗಳ ಜೊತೆಯಾಟ ನೀಡಿದರು. ಆಗ ತಂಡದ ಮೊತ್ತ 83 ರನ್ಗಳಾಗಿದ್ದಾಗ 25 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಔಟಾದರು. ಆಗ ಭಾರತ ಮತ್ತೊಮ್ಮೆ ತೊಂದರೆಗೆ ಸಿಲುಕಿತ್ತು.
ನಂತರ ರವೀಂದ್ರ ಜಡೇಜಾ ಅಜೇಯ 45 ರನ್ ಬಾರಿಸಿ ಕೆಎಲ್ ರಾಹುಲ್ ಜೊತೆಗೂಡಿ ಮುರಿಯದ 108 ರನ್ಗಳ ಜೊತೆಯಾಟ ನೀಡಿದರು. ಸಂಕಷ್ಟದ ಪರಿಸ್ಥಿತಿಯಲ್ಲಿ ತಾಳ್ಮೆಯ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್ ಕಟ್ಟಿದ ಕೀರ್ತಿಗೆ ಕೆಎಲ್ ರಾಹುಲ್ಗೆ ಸಲ್ಲುತ್ತದೆ.